ಈ ದಿನದ ಮುಖ್ಯಾಂಶಗಳು
ಈ ದಿನದ ಮುಖ್ಯಾಂಶಗಳು 
ರಾಜ್ಯ

ನೀರಿನ ಬಿಕ್ಕಟ್ಟು: ಆತಂಕ ಪಡುವುದು ಬೇಡ-BWSSB, ನಾಳೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಈ ದಿನದ ಮುಖ್ಯಾಂಶಗಳು-10-03-2024

Srinivas Rao BV

ಬೆಂಗಳೂರು: ನಗರದಲ್ಲಿ ನೀರಿನ ಬಿಕ್ಕಟ್ಟು ಉಂಟಾಗಿದ್ದು, ಆತಂಕ ಪಡುವುದು ಬೇಡ, ವದಂತಿಗಳಿಗೆ ಕಿವಿಕೊಡಬೇಡಿ, ಜುಲೈವರೆಗೆ ಬೆಂಗಳೂರು ಪರಿಸ್ಥಿತಿ ನಿಭಾಯಿಸುವಷ್ಟು ನೀರು ನಮ್ಮಲ್ಲಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಜುಲೈವರೆಗೆ ಸರಬರಾಜು ಮಾಡಲು ಸಾಕಷ್ಟು ನೀರು ನಮ್ಮಲ್ಲಿದೆ. ಮಂಡಳಿಯು ಪ್ರತಿನಿತ್ಯ 1,470 ಎಂಎಲ್ ಡಿ ನೀರನ್ನೂ ಪೂರೈಸುತ್ತಿದೆ. ಮೇ 15 ರಂದು ಕಾವೇರಿ ಐದನೇ ಹಂತದ ಯೋಜನೆಗೆ ಚಾಲನೆ ನೀಡಿದ ನಂತರ ಬೆಂಗಳೂರಿಗೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಸಿಗಲಿದೆ. ನಗರಕ್ಕೆ ತಿಂಗಳಿಗೆ 1.54 ಟಿಎಂಸಿ ಅಡಿ ನೀರು ಮಾತ್ರ ಬೇಕಾಗುತ್ತದೆ. ಹೊರವಲಯವೂ ಕಾವೇರಿ ನೀರನ್ನು ಅವಲಂಬಿಸಿದೆ. ನಗರ ಮತ್ತು ಹೊರವಲಯಕ್ಕೆ ಜುಲೈವರೆಗೆ 17 ಟಿಎಂಸಿ ಅಡಿ ನೀರು ಬೇಕು. ಅಣೆಕಟ್ಟುಗಳಲ್ಲಿ ಈಗ 34 ಟಿಎಂಸಿ ಅಡಿ ನೀರಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ಮಾ.11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ. ನೀರಿನ ಸಮಸ್ಯೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ಅಸಮರ್ಥತೆಯಿಂದಾಗಿ ಈಗ ಅನೇಕ ಎಂಎನ್‌ಸಿಗಳು ಬೆಂಗಳೂರಿನಿಂದ ಹೊರಹೋಗಲು ಬಯಸುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಈ ಸರ್ಕಾರ ಯಾವತ್ತೂ ನೈಜ ಸಮಸ್ಯೆಗಳತ್ತ ಗಮನಹರಿಸಿಲ್ಲ ಮತ್ತು ಪ್ರಮುಖ ವಿಷಯಗಳನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದೆ. ನಗರದ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ನಿವಾಸಿಗಳಿಗೆ ಕುಡಿಯುವ ನೀರಿಲ್ಲ. ಪರಿಸ್ಥಿತಿ ಮುಂದುವರಿದರೆ ಎಂಎನ್‌ಸಿಗಳು ಇತರ ಸ್ಥಳಗಳಿಗೆ ತೆರಳಲು ಯೋಜಿಸುತ್ತಿವೆ. ಮಾರ್ಚ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಗಳನ್ನು ಘೋಷಿಸುತ್ತೇವೆ. ಬೇಡಿಕೆ ಈಡೇರದಿದ್ದರೆ, ನಾವು ಮುಂದಿನ ಕ್ರಮವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಇಂದು ಮಾದಕ ದ್ರವ್ಯ ಮುಕ್ತ ಕರ್ನಾಟಕ ಥೀಮ್ ಅಡಿಯಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಡ್ರಗ್ಸ್ ಸೇವನೆ ತಡೆ ಹಾಗೂ ದುಷ್ಪರಿಣಾಮದ ಕುರಿತಾದ ಜಾಗೃತಿಯು ಮ್ಯಾರಥಾನ್ ನ ಉದ್ದೇಶವಾಗಿತ್ತು. ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯುವಜನತೆ ನಮ್ಮ ದೇಶದ ಭವಿಷ್ಯದ ಸಂಪತ್ತು, ಅವರೇ ಮಾದಕ ದ್ರವ್ಯಗಳ ವ್ಯಸನಕ್ಕೆ ದಾಸರಾಗುತ್ತಿರುವುದು ದುಃಖಕರ ಸಂಗತಿಯಾಗಿದೆ. ಯುವಜನತೆಯಲ್ಲಿ ಮತ್ತು ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಬರಬೇಕು. ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದರೆ ಕರ್ನಾಟಕವನ್ನು ವ್ಯಸನಮುಕ್ತ ರಾಜ್ಯವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. 357 ಕೋಟಿ ರೂ. ಅನುದಾನದಲ್ಲಿ ವೆಚ್ಚದಲ್ಲಿ 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಟರ್ಮಿನಲ್ ನಲ್ಲಿ 4 ಏರೋ ಬ್ರಿಡ್ಜ್ ಇರಲಿದ್ದು, 8 ಎಕ್ಸಲೇಟರ್, 500 ಕಾರು, 200 ಬೈಕ್ ನಿಲ್ಲುವ ವ್ಯವಸ್ಥಿತ ಪಾರ್ಕಿಂಗ್ ಇರಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಸೂರತ್, ನಾಗುರ, ತಿರುಪತಿ, ಸೇರಿದಂತೆ 10 ನಗರಗಳಿಗೆ ವಿಮಾನ ಸಂಚಾರವಿದೆ. ಪ್ರತಿ ದಿನ ಸರಾಸರಿ 24 ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಸಂಚಾರ ಮಾಡುತ್ತವೆ. ಉದ್ದೇಶಿತ ಹೊಸ ಟರ್ಮಿನಲ್ ಏಕಕಾಲಕ್ಕೆ 2400 ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲಿದೆ.

ಗ್ಯಾರೇಜ್ ಒಂದರಲ್ಲಿ ಗ್ಯಾಸ್ ವೆಲ್ಡಿಂಗ್ ಟ್ಯಾಂಕ್ ಸ್ಫೋಟಗೊಂಡು ಗ್ಯಾರೇಜ್ ಮಾಲೀಕ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಬಸವೇಶ್ವರನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಪೈ ಷೋರೂಮ್ ಬಳಿ ನಡೆದಿದೆ. ಘಟನೆಯಲ್ಲಿ ಗ್ಯಾರೇಜ್ ಮಾಲಿಕ ಜಾರ್ಜ್, ನೌಕರ ಶಿವು, ಇಬ್ಬರು ಪಾದಚಾರಿ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರೊಂದರ ವೆಲ್ಡಿಂಗ್ ಮಾಡುವಾಗ ಏಕಾಏಕಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಬೆಂಕಿ ಗ್ಯಾಸ್ ವೆಲ್ಡಿಂಗ್ ಟ್ಯಾಂಕ್'ಗೆ ತಗುಲಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಗ್ಯಾರೇಜ್ ಸೇರಿದಂತೆ ಸುತ್ತಮುತ್ತಲ ಹಲವು ಮನೆಗಳು ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೆ ಹಾನಿಯಾಗಿದೆ.

SCROLL FOR NEXT