ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಕೇಸ್: ಆರೋಪಿ ಬಿಡುಗಡೆ ಮಾಡಲು ನಿರಾಕರಿಸಿದ ಎನ್‌ಐಎ ನ್ಯಾಯಾಲಯ

Ramyashree GN

ಬೆಂಗಳೂರು: 2022ರ ಫೆಬ್ರುವರಿ 20ರಂದು ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿ ಸೈಯದ್ ನದೀಮ್‌ನನ್ನು ಬಿಡುಗಡೆ ಮಾಡಲು ಎನ್‌ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಹತ್ಯೆಗೆ ಸಂಬಂಧಿಸಿದಂತೆ 10 ಆರೋಪಿಗಳಲ್ಲಿ ನದೀಮ್ ಆರೋಪಿ ನಂ. 9 ಆಗಿದ್ದಾನೆ.

ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಸಾಕ್ಷಿಗಳ ಹೇಳಿಕೆಗಳು ಮತ್ತು ಇತರ ವಸ್ತುಗಳು ಅಪರಾಧದಲ್ಲಿ ನದೀಮ್ ಭಾಗಿಯಾಗಿರುವುದನ್ನು ತೋರಿಸುತ್ತವೆ ಎಂದು ನ್ಯಾಯಾಧೀಶ ಗಂಗಾಧರ ಸಿಎಂ ತಿಳಿಸಿದರು.

'ಹರ್ಷ ಅವರ ಹತ್ಯೆಯ ನಂತರ ಅವರನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸುವ ಉದ್ದೇಶದಿಂದ ನದೀಮ್ ಅವರು ನಂ. 1, 3 ಮತ್ತು 5ನೇ ಆರೋಪಿಗಳಾದ ರಿಹಾನ್ ಶರೀಫ್, ಆಸಿಫುಲ್ಲಾ ಖಾನ್ ಅಲಿಯಾಸ್ ಚಿಕು ಮತ್ತು ಸೈಯದ್ ಫರೋಜ್ ಅಲಿಯಾಸ್ ನಿಹಾಲ್ ಅವರಿಗೆ ಆಶ್ರಯ ನೀಡಿದ್ದರು. ಆರೋಪಿಗಳು ಹತ್ಯೆ ಮಾಡಿರುವುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಹಿನ್ನೆಲೆಯಲ್ಲಿ, ನದೀಮ್ ವಿರುದ್ಧ ಅಪರಾಧದ ಆರೋಪ ಹೊರಿಸಲು ಪ್ರಾಸಿಕ್ಯೂಷನ್ ಸಾಕಷ್ಟು ಪುರಾವೆಗಳನ್ನು ಒದಗಿಸಿದೆ' ಎಂದು ನ್ಯಾಯಾಲಯ ಹೇಳಿದೆ.

ತನಿಖಾಧಿಕಾರಿಯು ಸಂಗ್ರಹಿಸಿದ ಸಾಕ್ಷ್ಯವು ಆಪಾದಿತ ಅಪರಾಧದಲ್ಲಿ ನದೀಮ್‌ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರ ವಿರುದ್ಧ ವಿಚಾರಣೆ ಮುಂದುವರಿಯಲು ಪ್ರಾಸಿಕ್ಯೂಷನ್ ಬಲವಾದ ಪ್ರಕರಣವನ್ನು ಪ್ರಸ್ತುತಪಡಿಸಿದೆ. ಪರಿಣಾಮವಾಗಿ, ನದೀಮ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಪ್ರಕರಣದಲ್ಲಿ ತನ್ನನ್ನು ಪೊಲೀಸರು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ನದೀಮ್ ಆರೋಪಿಸಿದ್ದಾರೆ. ಆದಾಗ್ಯೂ, ಮೂವರು ಆರೋಪಿಗಳು ಹರ್ಷನ ಹತ್ಯೆ ಮಾಡಿದ ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ನದೀಮ್ ಸಹಾಯದಿಂದ ಆಶ್ರಯ ಪಡೆದಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಕೊಲೆಯಾದ ಬಳಿಕ ಮೂವರೂ ಆರೋಪಿಗಳನ್ನು ಶಿವಮೊಗ್ಗದ ಜೆಪಿ ನಗರದ ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು, ರಕ್ತದಲ್ಲಿ ತೊಯ್ದಿದ್ದ ಬಟ್ಟೆ ಬದಲಿಸಲು ಬಟ್ಟೆ ಹಾಗೂ ಆಹಾರವನ್ನೂ ನದೀಮ್ ನೀಡಿದ್ದರು ಎನ್ನಲಾಗಿದೆ.

ಓರ್ವ ಆರೋಪಿಗೆ ಜಾಮೀನು ಮಂಜೂರು

2022ರಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆಗೆ ಸಂಪರ್ಕ ಹೊಂದಿದ್ದ ಆಪಾದಿತ ಪ್ರಕರಣದ 17 ಆರೋಪಿಗಳಲ್ಲಿ ಆರೋಪಿ ನಂ. 15 ತಾಹಿರ್ ಹುಸೇನ್ ಅಲಿಯಾಸ್ ಆರ್‌ಕೆ ತಾಹಿರ್‌ಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

ತಾಹಿರ್‌ನನ್ನು ಫೆಬ್ರುವರಿ 9, 2024 ರಂದು ಬಂಧಿಸಲಾಯಿತು. ವಿಚಾರಣೆಗಾಗಿ ಅವರನ್ನು ಒಂದು ವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಆದರೆ, ತನಿಖಾಧಿಕಾರಿಯು ಅವರ ವಿರುದ್ಧದ ಆರೋಪಗಳನ್ನು ಬೆಂಬಲಿಸುವ ಯಾವುದೇ ಸಾಕ್ಷ್ಯವನ್ನು ಸಂಗ್ರಹಿಸಿಲ್ಲ ಮತ್ತು ಅವರ ವಿರುದ್ಧ ಮಾಡಲಾದ ಆರೋಪವನ್ನು ನಿಜವೆಂದು ನಂಬಲು ಯಾವುದೇ ಸಮಂಜಸವಾದ ಆಧಾರಗಳಿಲ್ಲ. ಹೀಗಾಗಿ, ಜಾಮೀನು ನೀಡಲು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ಸೆಕ್ಷನ್ 43 ಡಿ (5) ಅಡಿಯಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಲಯವು ಷರತ್ತುಗಳೊಂದಿಗೆ ಜಾಮೀನು ನೀಡಿದೆ.

2022ರಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದ ಇತರ ಆರೋಪಿಗಳೊಂದಿಗೆ ವಿವಿಧ ಸ್ಥಳಗಳಲ್ಲಿ ನಡೆದ ಪಿತೂರಿ ಸಭೆಯ ಭಾಗವಾಗಿ ತಾಹಿರ್ ಇದ್ದರು ಎಂದು ಆರೋಪಿಸಲಾಗಿದೆ. ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿಗಳ ವಿರುದ್ಧ ಧ್ವನಿ ಎತ್ತುವ ಹಿಂದೂ ನಾಯಕರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಮತ್ತು 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಸಂಘಟನೆಯನ್ನು ಬಲಪಡಿಸಲು ಅವರು ನಿಧಿಯನ್ನು ಸಂಗ್ರಹಿಸಿದರು ಮತ್ತು ವ್ಯಕ್ತಿಗಳನ್ನು ನೇಮಿಸಿಕೊಂಡರು ಎಂದು ಆರೋಪಿಸಲಾಗಿದೆ.

SCROLL FOR NEXT