ಗೃಹ ಸಚಿವ ಜಿ ಪರಮೇಶ್ವರ
ಗೃಹ ಸಚಿವ ಜಿ ಪರಮೇಶ್ವರ 
ರಾಜ್ಯ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ತನಿಖಾ ತಂಡಗಳು ಶಂಕಿತ ವ್ಯಕ್ತಿಯ ಜಾಡು ಹಿಡಿದಿವೆ- ಜಿ ಪರಮೇಶ್ವರ

Ramyashree GN

ಬೆಂಗಳೂರು: ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟ ಶಂಕಿತ ಆರೋಪಿಯನ್ನು ಪತ್ತೆ ಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಸೋಮವಾರ ಹೇಳಿದ್ದಾರೆ.

ತನಿಖಾಧಿಕಾರಿಗಳು ಆರೋಪಿಯ ಗುರುತನ್ನು ಪರಿಶೀಲಿಸುತ್ತಿದ್ದಾರೆ. ಶಂಕಿತ ಬಾಂಬರ್‌ನ ಪತ್ತೆಹಚ್ಚುವ ಕಾರ್ಯದಲ್ಲಿ ತನಿಖಾ ತಂಡಗಳು ಆತನಿಗೆ ಹತ್ತಿರವಾಗುತ್ತಿವೆ ಎಂದು ಅವರು ಹೇಳಿದರು.

ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟದ ಹಿಂದಿನ ವ್ಯಕ್ತಿಯ ಬಗ್ಗೆ ತಂಡಗಳಿಗೆ ಕೆಲವು ಉತ್ತಮ ಸುಳಿವುಗಳನ್ನು ಸಿಕ್ಕಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ನಗರದ ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ಜಂಟಿಯಾಗಿ ಆರೋಪಿ ಪತ್ತೆಹಚ್ಚುವ ಕೆಲಸದಲ್ಲಿ ನಿರತವಾಗಿವೆ ಎಂದರು.

ಶಂಕಿತನ ಹಿಂದಿನ ಜಾಡು ಹಿಡಿದು ತನಿಖಾ ತಂಡಗಳು ತುಮಕೂರು ಮತ್ತು ಬಳ್ಳಾರಿಗೆ, ನಂತರ ಉತ್ತರ ಕರ್ನಾಟಕದ ಕಲಬುರಗಿಗೆ ತೆರಳಿದ್ದರು.

ಸ್ಫೋಟ ಸಂಭವಿಸಿದ ದಿನ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಾಂಬರ್‌ನ ಹಲವು ಚಿತ್ರಗಳು ಮತ್ತು ಎರಡು ವಿಡಿಯೋಗಳನ್ನು ಎನ್‌ಐಎ ಬಿಡುಗಡೆ ಮಾಡಿದೆ.

ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ಚಿತ್ರಗಳು ಶಂಕಿತನು ತಿಳಿ ನೇರಳೆ ಕಾಲರ್ ಟೀ ಶರ್ಟ್, ಕಡು ನೀಲಿ ಜೀನ್ಸ್, ಕಪ್ಪು ಬೂಟುಗಳು, ವಾಚ್ ಮತ್ತು ನೀಲಿ ಮಾಸ್ಕ್ ಅನ್ನು ಧರಿಸಿರುವುದನ್ನು ತೋರಿಸಿದೆ. ಕೆಫೆಯ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸ್ಫೋಟದ ದಿನದಂದು ರಾಮೇಶ್ವರಂ ಕೆಫೆಗೆ ತನ್ನೊಂದಿಗೆ ಸಾಗಿಸಿದ ಅದೇ ಬ್ಯಾಗಿನೊಂದಿಗೆ ಕಾಣಿಸಿಕೊಂಡಿದ್ದಾನೆ.

ಶಂಕಿತನ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ ಈಗಾಗಲೇ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಮಾಹಿತಿಯನ್ನು ಹಂಚಿಕೊಳ್ಳಲು ನಾಗರಿಕರು 08029510900, 8904241100 ಗೆ ಕರೆ ಮಾಡಬಹುದು ಅಥವಾ info.blr.nia@gov.inಗೆ ಮಾಹಿತಿ ಹಂಚಿಕೊಳ್ಳಬಹುದು.

SCROLL FOR NEXT