ಗಾಯಾಳು ಅಂಗಡಿ ಮಾಲೀಕ ಮುಖೇಶ್
ಗಾಯಾಳು ಅಂಗಡಿ ಮಾಲೀಕ ಮುಖೇಶ್ 
ರಾಜ್ಯ

ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಹಲ್ಲೆ: ಮೂವರ ಬಂಧನ; ಗಾಯಾಳು ಅಂಗಡಿ ಮಾಲೀಕ ಹೇಳಿದ್ದೇನು? ತೇಜಸ್ವಿ ಸೂರ್ಯ ಆಕ್ರೋಶ

Srinivasamurthy VN

ಬೆಂಗಳೂರು: ಆಜಾನ್ ವೇಳೆ ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಅಂಗಡಿ ಮಾಲೀಕ ಹೇಳಿಕೆ ನೀಡಿದ್ದು, ಅವರು ನನ್ನನ್ನು ಇರಿದು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿರುವ ನಗರತ್‌ ಪೇಟೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಂಗಡಿ ಮಾಲೀಕ ಮುಖೇಶ್, 'ಅಂಗಡಿಯಲ್ಲಿ ಎಂದಿನಂತೆ ಸಂಜೆ ವೇಳೆ ಪೂಜೆ ಮಾಡುವ ಸಮಯದಲ್ಲಿ ಭಜನೆ ಹಾಡು ಹಾಕ್ತಾ ಇದ್ದೆ. ಈ ವೇಳೆ ಅಂಗಡಿಗೆ ಬಂದು, 'ನಮ್ಮ ಆಜಾನ್ ಟೈಂನಲ್ಲಿ ಯಾಕೆ ಹಾಡು ಹಾಕ್ತಾ ಇದ್ದೀಯಾ' ಎಂದು ಪ್ರಶ್ನೆ ಮಾಡಿದ್ರು. ನಂತರ ಹಲ್ಲೆಗೆ ಮುಂದಾದ್ರು, ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಮೊದಲು ಸ್ಪೀಕರ್ ತೆಗೆದುಕೊಂಡು ನನ್ನ ತಲೆಗೆ ಹೊಡೆದ್ರು. ಕೈಯಲ್ಲಿ ವೆಪನ್ ಕೂಡ ಇದ್ದ ಹಾಗೆ ಇತ್ತು. ಹಾಗಾಗಿ ಇಷ್ಟು ಗಾಯ ಆಗಿದೆ ಎಂದಿದ್ದಾರೆ.

ಅಲ್ಲದೆ ಅವರು ಚಾಕುವಿನಿಂದ ಇರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಎರಡು ತಿಂಗಳ ಹಿಂದೆ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ರೋಲ್ ಕಾಲ್ ಮಾಡೋದು ಹಣ ಕೀಳಲು ಗದರಿಸುವ ಪ್ರಯತ್ನ ಮಾಡ್ತಿದ್ರು. ಒಟ್ಟು ಆರು ಜನ‌ ಬಂದಿದ್ರು ಸದ್ಯ ಕಂಪ್ಲೆಂಟ್ ಕೊಟ್ಟಿದ್ದೀನಿ ಎಂದು ಹೇಳಿದ್ದಾರೆ.

ಸುಲೇಮಾನ್ ವಿರುದ್ಧ ಮೊದಲೇ 2 ಪ್ರಕರಣ ದಾಖಲು

ಇನ್ನು ಪ್ರಮುಖ ಆರೋಪಿ ಸುಲೇಮಾನ್ ವಿರುದ್ಧ ಈ ಹಿಂದೆ 2 ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಈ ಎರಡೂ ಪ್ರಕರಣದಲ್ಲಿ ಸುಲೇಮಾನ್ ಪೊಲೀಸರಿಗೆ ಬೇಕಿದ್ದ. ಇದೀಗ ಮತ್ತೊಂದು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದುಮೂಲಗಳು ತಿಳಿಸಿವೆ.

ಮೂವರ ಬಂಧನ, ಇಬ್ಬರು ಪರಾರಿ

ಮೂಲಗಳ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಶಹನವಾಜ್, ಸುಲೇಮಾನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ. ಬಾಕಿ ಆರೋಪಿಗಳಾದ ಡ್ಯಾನಿಶ್ ಮತ್ತು ತರಣ ಪರಾರಿಯಲ್ಲಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಇನ್ನು ಸಂತ್ರಸ್ಥ ಮುಖೇಶ್ ನನ್ನು ಭೇಟಿ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಂತ್ವನ ಹೇಳಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿನ್ನೆ ಸಂಜೆ ಮುಖೇಶ್ ತನ್ನ ವ್ಯಾಪಾರವನ್ನು ನಡೆಸುತ್ತಿದ್ದರು. ಅವರು ಪ್ರತಿದಿನ ಸಂಜೆ ಭಕ್ತಿಗೀತೆಗಳನ್ನು ಕೇಳುವ ಅಭ್ಯಾಸವನ್ನು ಹೊಂದಿದ್ದರು. ಅದರಂತೆ ನಿನ್ನೆ ಕೂಡ ಸ್ಪೀಕರ್‌ನಲ್ಲಿ ಹಾಡುಗಳು ಹಾಕಿದ್ದಾರೆ. ಆದರೆ ನಿನ್ನೆ ಕೆಲವು ದುಷ್ಕರ್ಮಿಗಳು ಅವರ ಅಂಗಡಿಗೆ ಬಂದು ಅವರೊಂದಿಗೆ ಜಗಳವಾಡಿದ್ದಾರೆ. ಕೂಡಲೇ ಸ್ಪೀಕರ್ ಸ್ವಿಚ್ ಆಫ್ ಮಾಡಿ ಹನುಮಾನ್ ಚಾಲೀಸಾ ನುಡಿಸುವುದನ್ನು ನಿಲ್ಲಿಸುವಂತೆ ಹೆದರಿಸಿದ್ದಾರೆ. ಅದಕ್ಕೆ ಮುಖೇಶ್ ನಿರಾಕರಿಸಿದಾಗ ಅವರನ್ನು ಹೊರಗೆಳೆದು 6-7 ದುಷ್ಕರ್ಮಿಗಳು ಥಳಿಸಿದ್ದಾರೆ. ಆವರಿಗೆ ಆಗಿರುವ ಗಾಯಗಳನ್ನು ನೋಡಿದರೆ ಅವರನ್ನು ಹೇಗೆ ಥಳಿಸಿದ್ದಾರೆ ಎಂಬುದು ತಿಳಿಯುತ್ತದೆ. ಅವರಿಗೆ ಗಂಭೀರ ಗಾಯಗಳಾಗಿವೆ...

ತಕ್ಷಣ, ಮುಖೇಶ್ ಮತ್ತು ಅಕ್ಕಪಕ್ಕದ ಅಂಗಡಿಯವರು ಎಫ್‌ಐಆರ್ ದಾಖಲಿಸಲು ಹತ್ತಿರದ ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ವಿವರವಾದ ಲಿಖಿತ ದೂರು ಸಲ್ಲಿಸಿದ ನಂತರವೂ ಸ್ಥಳೀಯ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ, ತಡವಾಗಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಸಂಸದ ಪಿ.ಸಿ.ಮೋಹನ್‌, ನಾನು ಮತ್ತು ಸ್ಥಳೀಯ ಬಿಜೆಪಿ ಮುಖಂಡರ ಮಧ್ಯಪ್ರವೇಶದ ನಂತರವೇ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಅಲ್ಲದೆ ಎಫ್ ಐಆರ್ ನಲ್ಲಿ ಕೆಲವರ ಹೆಸರು ಸೇರಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅಪರಾಧದಲ್ಲಿ ಭಾಗಿಯಾಗದ ವ್ಯಕ್ತಿಗಳು... ಕೇವಲ 3 ಜನರನ್ನು ಮಾತ್ರ ಪೊಲೀಸರು ದೃಢೀಕರಿಸಿದ್ದಾರೆ ಮತ್ತು ಬಂಧಿಸಿದ್ದಾರೆ, ಸಿಸಿಟಿವಿಯಲ್ಲಿ ಕಂಡುಬರುವ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಬೆಂಗಳೂರು ನಗರ ಆಯುಕ್ತರು ನಿಷ್ಪಕ್ಷಪಾತ ಮತ್ತು ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT