ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಹೊರಗುತ್ತಿಗೆ ಪಡೆದಿರುವ ಒಟ್ಟು 20 ಸಿವಿಲ್ ಎಂಜಿನಿಯರ್ಗಳಿಗೆ ಕಳೆದ ಐದು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಡಾ.ಶಿವರಾಮ ಕಾರಂತ್ ಲೇಔಟ್ ಮತ್ತು ನಾಡಪ್ರಭು ಕೆಂಪೇಗೌಡ ಲೇಔಟ್ ಸೇರಿದಂತೆ ಬಿಡಿಎ ಮಹತ್ವದ ಯೋಜನೆಗಳಲ್ಲಿ ಅವರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. ಮಾರ್ಸ್ ಸೆಕ್ಯುರಿಟಿ ಮತ್ತು ಸಂಬಂಧಿತ ಸೇವೆಗಳಿಂದ ಎರಡು ಪ್ರತ್ಯೇಕ ಬ್ಯಾಚ್ಗಳಲ್ಲಿ 10 ಮತ್ತು ಮೂರನೇ ಬ್ಯಾಚ್ನಲ್ಲಿ 8 ಸೇರಿದಂತೆ ಒಟ್ಟು ಮೂರು ಬ್ಯಾಚ್ ಗಳಲ್ಲಿ 28 ಎಂಜಿನಿಯರ್ಗಳನ್ನು ಬಿಡಿಎಗೆ ಸರಬರಾಜು ಮಾಡಲಾಗಿದೆ.
ಬಿಡಿಎ ಕೇಂದ್ರ ಕಚೇರಿಯಲ್ಲಿ ಇಂಜಿನಿಯರ್ ಗಳ ಗುಂಪೊಂದು ಬಾಕಿ ಸಂಬಳ ಪಾವತಿಗಾಗಿ ಅಧಿಕಾರಿಯೊಬ್ಬರಿಗೆ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಅವರಲ್ಲಿ ಒಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡುತ್ತಾ, “ನಾವೀಗ ನಿಜವಾಗಿಯೂ ಕಷ್ಟಪಡುತ್ತಿದ್ದೇವೆ. ನವೆಂಬರ್ ತಿಂಗಳಿನಿಂದ ನಮಗೆ ಸಂಬಳ ನೀಡಿಲ್ಲ. ಈಗ ಐದು ತಿಂಗಳು ಕಳೆದಿದೆ. ನಮಗೆ ಕೆಲಸವೇ ಮುಖ್ಯವಾದ್ದರಿಂದ ಹೇಗೋ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಮತ್ತೋರ್ವ ಇಂಜಿನಿಯರ್ ಮಾತನಾಡಿ, ಪ್ರತಿಯೊಬ್ಬ ಇಂಜಿನಿಯರ್ ತಿಂಗಳಿಗೆ ತಲಾ 41,000 ರೂ. ಪಾವತಿಸಲಾಗುತಿತ್ತು. ನಮ್ಮ ಗುತ್ತಿಗೆಯನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತದೆ. ಈ ಹಿಂದೆ ಪಾವತಿಗೆ ನಮಗೆ ಯಾವುದೇ ತೊಂದರೆ ಇರಲಿಲ್ಲ. ಈ ಬಾರಿ ಮಾತ್ರ ನಮಗೆ ಸಂಬಳ ನೀಡಿಲ್ಲ ಎಂದರು.
ಸಂಸ್ಥೆಯ ಮತ್ತೊಂದು ಮೂಲದ ಪ್ರಕಾರ,“ಈ ಎಂಜಿನಿಯರ್ಗಳ ಹಾಜರಾತಿಯ ವಿವರಗಳೊಂದಿಗೆ ಬಿಡಿಎ ಆದೇಶವನ್ನು ನೀಡಬೇಕಾಗಿದೆ. ಒಪ್ಪಂದವನ್ನು ದೃಢೀಕರಿಸುವ ಆದೇಶವಿಲ್ಲದೆ, ನಾವು ಮುಂದುವರಿಯಲು ಸಾಧ್ಯವಿಲ್ಲ ಮತ್ತು ನಮ್ಮ ಕಡೆಯಿಂದ ಯಾವುದೇ ಪಾವತಿಯನ್ನು ಮಾಡಲು ಸಾಧ್ಯವಿಲ್ಲ. ಬಿಡಿಎ ಬಿಡುಗಡೆ ಮಾಡಿದ ತಕ್ಷಣ ಅವರಿಗೆ ಹಣ ನೀಡುತ್ತೇವೆ. ಮೊದಲ ಎರಡು ಬ್ಯಾಚ್ಗಳಿಗೆ ಐದು ತಿಂಗಳಿಂದ ವೇತನ ನೀಡಿಲ್ಲ, ಕೊನೆಯ ಬ್ಯಾಚ್ಗೆ ಒಂದು ತಿಂಗಳಿಂದ ವೇತನ ನೀಡಿಲ್ಲ ಎನ್ನುತ್ತವೆ.
“ಬಿಡಿಎ ಅಧಿಕಾರಿಗಳಲ್ಲಿ ಕೆಲವು ಆಂತರಿಕ ಗೊಂದಲಗಳಿವೆ. ಕೇಡರ್ ಮತ್ತು ನೇಮಕಾತಿ ನಿಯಮಗಳ ಪ್ರಕಾರ, ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಂಡಿರುವುದು ಕಂಡುಬರುತ್ತದೆ. ಹೀಗಾಗಿ ಅನುಮೋದನೆ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಪ್ರಾಧಿಕಾರಕ್ಕೆ ಕನಿಷ್ಠ 70 ಎಂಜಿನಿಯರ್ಗಳ ಅಗತ್ಯವಿದೆ ಮತ್ತು ಹೆಚ್ಚುವರಿ ಸಂಖ್ಯೆಯನ್ನು ನೇಮಿಸಿಕೊಳ್ಳಲು ಬಿಡಿಎ ಮಂಡಳಿಯಿಂದ ಅನುಮತಿಯನ್ನು ತೆಗೆದುಕೊಂಡಿದೆ. ಅಧಿಕಾರಿಗಳ ನಡುವೆ ಕೆಲವು ತಪ್ಪು ತಿಳುವಳಿಕೆ ಇದ್ದು, ಇದು ಅವರ ಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ಹಿರಿಯ ಬಿಡಿಎ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.