ಬೆಂಗಳೂರು: ಮಾದಕ ವಸ್ತು ಕಳ್ಳಸಾಗಣೆ ಆರೋಪದ ಮೇಲೆ ಕಾಲೇಜೊಂದರ ಎರಡನೇ ವರ್ಷದ ಏವಿಯೇಷನ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಬಂಧಿತ ವಿದ್ಯಾರ್ಥಿಯನ್ನು ಪಿಎಚ್ ಶಿವಕೃಷ್ಣ ಎಂದು ಗುರುತಿಸಲಾಗಿದೆ.
ಗುಂಜೂರು ಪಾಳ್ಯದಲ್ಲಿರುವ ಆತನ ಮನೆ ಮೇಲೆ ದಾಳಿ ನಡೆಸಿ 10 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಕೃಷ್ಣ ಎರಡು ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿದ್ದರು. ಕೆಟ್ಟ ಸಹವಾಸಕ್ಕೆ ಬಿದ್ದು ಮಾದಕ ದ್ರವ್ಯ ಸೇವನೆ ಆರಂಭಿಸಿದ್ದಲ್ಲದೆ, ದಂಧೆಕೋರನಾಗಿದ್ದ. ಆತ ಮತ್ತೊಬ್ಬ ಪೆಡ್ಲರ್ನಿಂದ ಡ್ರಗ್ಗಳನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಆತನ ಗುರುತು ಇನ್ನೂ ಬಹಿರಂಗವಾಗಿಲ್ಲ.
ಎರಡನೇ ಆರೋಪಿಯ ಫೋನ್ ನಂಬರ್ ವಿವರಗಳನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ವಿದ್ಯಾರ್ಥಿ ಇತರ ಆರೋಪಿಗಳೊಂದಿಗೆ ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್ ಮೂಲಕ ಸಂಪರ್ಕ ಹೊಂದಿದ್ದರು. ಹೆಚ್ಚಿನ ವಿಚಾರಣೆಗಾಗಿ ವಿದ್ಯಾರ್ಥಿಯನ್ನು ವರ್ತೂರು ಪೊಲೀಸ್ ಠಾಣೆಗೆ ಸಿಸಿಬಿ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ.