ಪ್ರಜ್ವಲ್ ರೇವಣ್ಣ ಮತ್ತು ಪ್ರೀತಂಗೌಡ 
ರಾಜ್ಯ

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​: ಬಂಧಿತ ಯುವಕರು ನನ್ನ ಬೆಂಬಲಿಗರಲ್ಲ- ಪ್ರೀತಂ ಗೌಡ

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ನಲ್ಲಿ ಬಂಧನ ಆಗಿರುವುದು ನನ್ನ ಬೆಂಬಲಿಗರಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ನಲ್ಲಿ ಬಂಧನ ಆಗಿರುವುದು ನನ್ನ ಬೆಂಬಲಿಗರಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾನುವಾರ ಬಂಧಿತರಾದವರು ಅಮಾಯಕರು. ಲಕ್ಷಾಂತರ ಜನರ ಬಳಿ ವಿಡಿಯೋ ಇದೆ, ಆದರೆ, ಒಬ್ಬಿಬ್ಬರನ್ನು ವಶಕ್ಕೆ ತೆಗೊಂಡಿದ್ದಾರೆ. ಇದರ ಹಿಂದೆ ಯಾವ ಕಾರಣ ಇದೆ ಎಂಬುದು ಪ್ರಪಂಚಕ್ಕೇ ಗೊತ್ತು. ಮೊಬೈಲ್​ನಲ್ಲಿ ವಿಡಿಯೋ ಇರುವುದೇ ಅಪರಾಧ ಅಂದರೆ, ಎಸ್ಐಟಿ ಯಾವ ಮಾನದಂಡದಲ್ಲಿ ತನಿಖೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಹಾಸನದಲ್ಲಿ ಹೀಗಾಗಬಾರದಿತ್ತು ಅಂತನೇ ಹಲವರು‌ ಮಾತನಾಡುತ್ತಾರೆ. ನಾನು ಯಾರೇ ಸಿಕ್ಕಿದರೂ ವಿಡಿಯೋ ಸಿಕ್ಕಿದ್ದರೆ ಸರ್ಕ್ಯುಲೇಟ್ ಮಾಡಬೇಡಿ, ಇಟ್ಕೋಬೇಡಿ, ಅದು ನೀಚ ಕೆಲಸ ಎಂದು ಹೇಳುತ್ತಿರುತ್ತೇನೆ. ನಮಗೆ ಜವಾಬ್ದಾರಿ ಇದೆ, ವಿಡಿಯೋ ಹಂಚಬೇಡಿ, ಡಿಲೀಟ್ ಮಾಡಿ ಎಂದೇ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೇನೆ. ಹಾಸನದಲ್ಲಿ ಬಹಳ ಜನರ ಬಳಿ ವಿಡಿಯೋ ಹರಿದಾಡುತ್ತಿದೆ. ಎಲ್ಲರ ಬಳಿ ವಿಡಿಯೋ ಇದೆ, ಹಾಗಂತ ಎಲ್ಲರನ್ನೂ ಬಂಧನ ಮಾಡುವುದಕ್ಕಾಗುತ್ತಾ?. ಚೇತನ್ ಗೌಡ ಬೇರೆ, ಚೇತನ್ ಬೇರೆ. ನಮ್ಮ ಕಚೇರಿಯಲ್ಲಿ 24 ವರ್ಷದ ಆ ಯುವಕ ಇದ್ದ, ಅವನು ಅಮಾಯಕ. ಅವನ ಬಳಿ ಹೀಗೇ ವಿಡಿಯೋ ಬಂದಿರುತ್ತೆ. ಅದೇ ಅಪರಾಧ ಅಂದರೆ ಹಾಸನದಲ್ಲಿ ಯುವಕರಿಂದ ಮುದುಕರವರೆಗೆ ಎಲ್ಲರ ಬಳಿಯೂ ಇದೆ ಎಂದು ಹೇಳಿದರು.

ನಾನು ಪ್ರಜ್ವಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ, ಈ ಪ್ರಕರಣದಲ್ಲಿ ನನ್ನದು ನೋ‌ ಕಾಮೆಂಟ್. ನಮ್ಮ ಕಾರ್ಯಕರ್ತರ ಬಂಧನ ಆಯಿತು ಅಂತ ಮಾತನಾಡುತ್ತಿದ್ದೇನೆ. ಇವತ್ತು ನಮಗೂ ವಿಡಿಯೋಗೂ ಸಂಬಂಧ‌ ಇಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ‌ ಮೇಲೆ ಏನು ಪರಿಣಾಮ ಎನ್ನುವ ಬಗ್ಗೆಯೂ ನೋ ಕಾಮೆಂಟ್. ಇದರ ಬಗ್ಗೆ ಸಂಬಂಧಪಟ್ಟವರು ನಿರ್ಧಾರ ಮಾಡುತ್ತಾರೆ. ಈ ಪ್ರಕರಣದಲ್ಲಿ ಮೊದಲ ದಿನದಿಂದಲೂ ನಾನು ಮಾತಾಡಿಲ್ಲ. ಆದರೆ ಸಂತ್ರಸ್ತೆಯರ ವಿಡಿಯೋ‌ ಯಾರೂ ಹಂಚಿಕೊಳ್ಳಬೇಡಿ, ಎಸ್ಐಟಿ ಮಾನದಂಡ ಪ್ರಕಾರ ಡಿಲೀಟ್ ಮಾಡಿ. ಸಂತ್ರಸ್ತೆಯರ ವಿಚಾರದಲ್ಲಿ ಸೂಕ್ಷ್ಮತೆ ತೋರಿಸಿ, ಎಲ್ಲರೂ ಸಾಮಾಜಿಕ ಬದ್ಧತೆ ಮೆರೆಯಿರಿ ಎನ್ನುತ್ತಿದ್ದೆ,

ನಮ್ಮ ಕಾರ್ಯಕರ್ತರು ಅಂತ ಬಂದಾಗ ನಾನು ಬೆನ್ನು ತೋರಿಸಿ ಹೋಗಲ್ಲ. ನಿನ್ನೆ ಬಂಧಿತರಾದವರು ಅಮಾಯಕರು, ಅಮಾಯಕರ ಬಂಧ‌ನ ಆಗಿದೆ. ಪೆನ್‌ಡ್ರೈವ್ ಇದೆ, ವಿಡಿಯೋ ಇದೆ ಅಂತ ವಶಕ್ಕೆ ತೆಗೊಳ್ಳುತ್ತಿದ್ದರೆ, ಹಾಸನದಲ್ಲಿ ಅಂಥ 1.5 ಲಕ್ಷ ಜನರನ್ನ ವಶಕ್ಕೆ ತೆಗೋಬೇಕಾಗುತ್ತದೆ. ಫಾರ್ವರ್ಡ್ ಆಗಿ ವಾಟ್ಸ್​ ಆ್ಯಪ್​ನಲ್ಲಿ ಬರುತ್ತದೆ. ಒಂದೂವರೆ‌ ಲಕ್ಷ ಜನರ ಮೊಬೈಲ್ ಗಳಲ್ಲಿ ವಿಡಿಯೋಗಳು ಇವೆ. ಆದರೆ, ತನಿಖೆಯನ್ನು ವ್ಯವಸ್ಥಿತವಾಗಿ ಮಾಡಬೇಕು, ಈಗ ಎಸ್ಐಟಿ ತನಿಖೆ ನಡೆಸುತ್ತಿದೆ, ತನಿಖೆ ಬಗ್ಗೆ ಮಾತನಾಡೋದು ಸಮಂಜಸ ಅಲ್ಲ. ತನಿಖೆ ಯಾವ ದಿಕ್ಕಿನಲ್ಲಿ ನಡೀತಿದೆ ಅಂತ ಕಾದು ನೋಡೋಣ. ನಾನು ಯಾವುದರ ಬಗ್ಗೆಯೂ ಮಾತನಾಡಲ್ಲ, ಯಾರು ಏನು ಮಾಡಿದ್ದಾರೆ ಅಂತ ತನಿಖೆಯಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.

ನನ್ನನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಹೇಳುವುದಿಲ್ಲ. ಆದರೆ, ತನಿಖೆ ದಿಕ್ಕು ಸರಿಯಾಗಿ ನಡೆಯಲಿ ಪ್ರಜ್ವಲ್ ಪ್ರಕರಣದಲ್ಲಿ ನನ್ನದು ಯಾವಾಗಲೂ ನೋ ಕಾಮೆಂಟ್. ಏ. 23 ರಂದು ಲಾಯರ್ ಪೆನ್‌ಡ್ರೈವ್ ತಂದುಕೊಟ್ಟರು, ಹಾಗಂತ ಆ ಲಾಯರ್ ಮೇಲೆ ಕೇಸ್ ಮಾಡುವುದಕ್ಕಾಗುತ್ತಾ? ಎಲೆಕ್ಷನ್ ಏಜೆಂಟ್ ಪೆನ್‌ಡ್ರೈವ್ ಸಿಕ್ತು ಅಂತ ಮೊದಲು ತಂದುಕೊಟ್ಟರು. ಹಾಗಂತ ಅವರ ಮೇಲೂ ಕೇಸ್ ಮಾಡಲಿಕ್ಕಾಗುತ್ತಾ?. ಆ ರೀತಿಯಾದರೆ 15 ಲಕ್ಷ ಜನರ ಮೇಲೆ ಕೇಸ್ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಅಮಾಯಕರ ಬಂಧನ ಆಗಬಾರದು ಎಂದು ಮನವಿ ಮಾಡಿದರು.

ವಿಡಿಯೋ ಬಗ್ಗೆ ಮೊದಲು ಯಾರು ಮಾಹಿತಿ ಕೊಟ್ಟರೋ ಅವರನ್ನೇ ಕೇಳಲಿ. ಯಾರು ಮಾಹಿತಿ ಕೊಟ್ಟರು?. ವಿಡಿಯೋ ಮಾಡ್ಕೊಂಡೋರು ಯಾರು?. ಒಂದು ವರ್ಷದಿಂದಲೇ ವಿಡಿಯೋ ಹರಿದಾಡುತ್ತಿದೆ ಎಂದು ಹೇಳ್ತಾರೆ ಒಂದು ವರ್ಷದ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು. ಈಗ ಚರ್ಚೆ ಮಾಡಿದರೆ ಏನು ಪ್ರಯೋಜನ?. ಸಂತ್ರಸ್ತರ ಬಗ್ಗೆಯೂ ಯೋಚಿಸಬೇಕು. ಯಾವ ದಿಕ್ಕಿನಲ್ಲಿ ತನಿಖೆ ಆಗಬೇಕೋ ಆ ದಿಕ್ಕಿನಲ್ಲಿ ಆಗಲಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಎಂದಿಗೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ; ಮಹಾಜನ ಸಮಿತಿ ವರದಿಯೇ ಅಂತಿಮ

ಕೇಂದ್ರ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಹೇರುತ್ತಿದೆ; ಆದ್ರೆ ರಾಜ್ಯದ ಮದರಸಗಳಲ್ಲೂ ಕನ್ನಡ ಕಲಿಕೆ

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದರು, ಇನ್ನು ನಾನ್ಯಾವ ಲೆಕ್ಕ: ಸಿಎಂ ಹುದ್ದೆ ಕನಸು ತ್ಯಾಗದ ಸುಳಿವು ನೀಡಿದ್ರಾ DK Shivakumar?

Bengaluru: ಲೈಟ್ ಆಫ್ ಮಾಡುವ ವಿಚಾರಕ್ಕೆ ಗಲಾಟೆ; ಡಂಬಲ್ ನಲ್ಲಿ ಸಹೋದ್ಯೋಗಿ ಹತ್ಯೆ; ಪೊಲೀಸರಿಗೆ ವ್ಯಕ್ತಿ ಶರಣು!

ತಜಕಿಸ್ತಾನದ ವಾಯುನೆಲೆಯಿಂದ ಭಾರತ ನಿರ್ಗಮನ: 'ದೇಶದ ರಾಜತಾಂತ್ರಿಕತೆ'ಗೆ ಮತ್ತೊಂದು ಹಿನ್ನಡೆ, ಕಾಂಗ್ರೆಸ್ ಕಿಡಿ!

SCROLL FOR NEXT