ಮಲ್ಲಿಕಾರ್ಜುನ ಖರ್ಗೆ  
ರಾಜ್ಯ

ನಗರ ನಕ್ಸಲರು ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

ಪ್ರಧಾನಿ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನೋತ್ಸವದಲ್ಲಿ ಭಾಷಣ ಮಾಡುವುದನ್ನು ನೋಡಿದೆ. ಅವರು ಭಾಷಣದಲ್ಲಿ ಸಂವಿಧಾನ ಉಳಿಸಿ ಎನ್ನುವ ಜನರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ.

ಬೆಂಗಳೂರು: ಕಾಡುಗಳಲ್ಲಿ ನಕ್ಸಲೀಯತೆ ಅಂತ್ಯಗೊಳ್ಳುತ್ತಿದ್ದರೆ, ಇತ್ತ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತೀವ್ರವಾಗಿ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನೋತ್ಸವದಲ್ಲಿ ಭಾಷಣ ಮಾಡುವುದನ್ನು ನೋಡಿದೆ. ಅವರು ಭಾಷಣದಲ್ಲಿ ಸಂವಿಧಾನ ಉಳಿಸಿ ಎನ್ನುವ ಜನರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ನಗರ ನಕ್ಸಲೀಯರು ಎಂದೆಲ್ಲಾ ಟೀಕೆ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಇಂತಹ ಮಾತುಗಳ ಅಗತ್ಯವಿತ್ತೇ? ಮೋದಿ ತಮ್ಮ ಸಾಧನೆಯನ್ನು ಹೇಳಿಕೊಳ್ಳಬಹುದಿತ್ತು. ಪಟೇಲರು ಮತ್ತು ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬಹುದಿತ್ತು. ಅದನ್ನು ಬಿಟ್ಟು ಟೀಕೆ ಮಾಡಲು ಅಂತಹ ಕಾರ್ಯಕ್ರಮವನ್ನು ಬಳಸಿಕೊಂಡಿದ್ದು ಸರಿಯಲ್ಲ ಎಂದು ಹೇಳಿದರು.

ದೇಶದ ಐಕ್ಯತೆ, ಸಮಗ್ರತೆಗಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ಗಾಂಧಿ ಏಕಾಂಗಿಯಾಗಿ ಜನರ ನಡುವೆ ಹೋಗುತ್ತಾರೆ. ಮೋದಿ ಸಾವಿರಾರು ಜನರ ಭದ್ರತೆ ಇಟ್ಟುಕೊಂಡು ಹೋಗುತ್ತಾರೆ. ಜನರ ನಡುವೆ ಬರಲು ಹೆದರುತ್ತಾರೆ. ಮಕ್ಕಳನ್ನು ನಿಲ್ಲಿಸಿಕೊಂಡು ಟಿವಿಗೆ ಪೋಸು ನೀಡುತ್ತಾರೆ.

ಶಾಂತಿಯುತ ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಸಿದ ಮಹಾತ್ಮ ಗಾಂಧಿ ಮತ್ತು ಪಟೇಲರು ಜನಿಸಿದ ಗುಜರಾತ್‌ನಲ್ಲಿ ಹುಟ್ಟಿದ ಈ ವ್ಯಕ್ತಿ (ಮೋದಿ) ಇಂದು ವಿಧ್ವಂಸಕನಾಗಿ ಹೊರಹೊಮ್ಮಿದ್ದಾರೆ. ದಿವಂಗತ ಪ್ರಧಾನಿ ಇಂದಿರಾಗಾಂಧಿ ದೇಶಕ್ಕಾಗಿ ಸಾಯಲೂ ಸಿದ್ಧ ಎಂದು ಹೇಳುತ್ತಿದ್ದರು. ಅವರಂತೆ ದೇಶಕ್ಕಾಗಿ ಮೋದಿ ಎಂದಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

ಮೋದಿ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ರಾಜಕೀಯ ಮಾಡಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಪ್ರತಿಯೊಂದು ಸಂದರ್ಭವನ್ನು ಬಳಸಿಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ ದಲಿತರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಮೋದಿಯನ್ನು ನಾನು ಹಿಟ್ಲರ್ ಎಂದು ಕರೆಯುವುದಿಲ್ಲ. ಸರ್ವಾಧಿಕಾರಿ ಎಂದು ಕರೆಯುತ್ತೇನೆ. ಗೋಡ್ಸೆ ಗಾಂಧಿಯನ್ನು ಕೊಂದ ನಂತರ, ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಾಂಗ್ರೆಸ್‌ನಿಂದ ಕಿತ್ತು ಪ್ರತ್ಯೇಕಿಸಲು ಸತತ ಪ್ರಯತ್ನ ನಡೆಯುತ್ತಿದೆ. ಆದರೆ, ಅದು ಸಾಧ್ಯವಿಲ್ಲ. ಏಕೆಂದರೆ ಅವರು ಕಾಂಗ್ರೆಸ್ ಸಿದ್ಧಾಂತವನ್ನು ದೃಢವಾಗಿ ನಂಬಿದ್ದರು.

ಮೋದಿ ಮೋಸದ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಎಲ್ಲವೂ ಮೋಸ. 10,000 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಸಿ 10,000 ದಿಂದ 20,000 ಹೊಸ ಹೆಸರುಗಳನ್ನು ಸೇರಿಸುತ್ತಾರೆ. ಇದು ಸತ್ಯ. ಆದರೆ, ಅದನ್ನು ಹೇಗೆ ಸಾಬೀತುಮಾಡುವುದು? ಕಂಪ್ಯೂಟರ್ ಮೂಲಕ ಇವಿಎಂಗಳನ್ನು ತಿರುಚಬಹುದು ಮತ್ತು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ನಿಪುಣ ಇಲಾನ್ ಮಸ್ಕ್ ಹೇಳಿದ್ದಾರೆ. ಇದೇ ಕಾರಣಕ್ಕೆ ಪ್ರಮುಖ ಪಾಶ್ಚಿಮಾತ್ಯ ದೇಶಗಳಾದ ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ, ಫ್ರಾನ್ಸ್ ಅಥವಾ ಇಟಲಿ ಎಲ್ಲಿಯೂ ಇವಿಎಂ ಬಳಕೆ ಇಲ್ಲ ಎಂದು ಹೇಳಿದರು.

ಇದೇ ವೇಳೆ ಪ್ರತಿ ಬಾರಿ ಇವಿಎಂಗಳನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ನಾವು(ಕಾಂಗ್ರೆಸ್) ಗೆದ್ದಾಗ ಇವಿಎಂಗಳನ್ನು ಟೀಕಿಸಿಲ್ಲ. ಮತಪತ್ರದ ಮೂಲಕ ಚುನಾವಣೆಗೆ ಒತ್ತಾಯಿಸಿಲ್ಲ. ಬಿಜೆಪಿ ಗೆದ್ದಾಗ ಮಾತ್ರ ಆರೋಪ ಮಾಡುತ್ತೇವೆ ಎಂದು ಬಿಜೆಪಿಗರು ಹೇಳುತ್ತಾರೆ. ಬಿಜೆಪಿಯ ಕುತಂತ್ರಗಳು ನಮಗೆ ತಿಳಿದಿದೆ. ಎಲ್ಲಿ, ಯಾವಾಗ, ಏನನ್ನೂ ಮಾಡಬೇಕು ಎಂಬುದು ಬಿಜೆಪಿಗರಿಗೆ ಗೊತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT