ಬೆಂಗಳೂರು: ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ವುಡ್ ಫ್ಯಾಕ್ಟರಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಕಾರ್ಮಿಕ ಸಜೀವ ದಹನವಾಗಿ ಕೋಟ್ಯಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಶ್ರೀರಾಮ್ ವುಡ್ ಕಾರ್ಖಾನೆಯಲ್ಲಿ ಇಂದು ಮುಂಜಾನೆ 3.40ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಘಟನೆಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ 5 ಅಗ್ನಿಶಾಮಕ ದಳದ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಲಾಗಿತ್ತು. ಕಾರ್ಯಾಚರಣೆ ಬಳಿಕ ಬೆಳಿಗ್ಗೆ 5.30ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಅಗ್ನಿ ಅವಘಡದಲ್ಲಿ ಹಲವು ವಸ್ತುಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರು ಅಗ್ನಿಶಾಮಕ ವಾಹನಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಅಂತೆಯೇ ನೆರೆಯ ಆಶೀರ್ವಾದ್ ವುಡ್ ಕಂಪನಿಯ ಕಾರ್ಮಿಕರು ಸಹ 10 ನೀರಿನ ಪೈಪ್ಗಳನ್ನು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ತಮ್ಮ ಕೈ ಜೋಡಿಸಿದ್ದರು. ಬೆಂಕಿ ನಂದಿಸಲು ಸ್ಥಳೀಯ ನೀರಿನ ಟ್ಯಾಂಕರ್ಗಳನ್ನು ಸಹ ಕೋರಲಾಗಿತ್ತು.
ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವು
ಉತ್ತರ ಪ್ರದೇಶ ಮೂಲದ ಗೋವಿಂದ್(24) ಫ್ಯಾಕ್ಟರಿಯಲ್ಲಿ ಸಜೀವ ದಹನವಾಗಿರುವ ಕಾರ್ಮಿಕ, ಈತ ಕಾರ್ಖಾನೆಯಲ್ಲಿಯೇ ಮಲಗುತ್ತಿದ್ದನು. ನಸುಕಿನ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿರುವುದರಿಂದ ನಿದ್ರೆ ಮಂಪರಿನಲ್ಲಿ ಹೊರಬರಲಾಗದೇ ಸಾವಿಗೀಡಾಗಿದ್ದಾನೆ. ಬೆಂಕಿ ನಂದಿಸಿದ ಬಳಿಕ ಪ್ರೆಸ್ಸಿಂಗ್ ಮೆಷಿನ್ ಬಳಿ ಮೃತದೇಹ ಪತ್ತೆಯಾಗಿದೆ.
5 ಕೋಟಿಗೂ ಹೆಚ್ಚು ಬೆಲೆಬಾಳುವ ವುಡ್ ಬೆಂಕಿಗಾಹುತಿ
ಹರ್ಷದ್ ಪಟೇಲ್ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದೆ. ಮೇಲ್ನೋಟಕ್ಕೆ ಸುಮಾರು 5 ಕೋಟಿಗೂ ಹೆಚ್ಚು ಬೆಲೆಬಾಳುವ ವುಡ್ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ಕಾರ್ಖಾನೆ ಇರುವುದರಿಂದ ಸಹಜವಾಗಿ ಆತಂಕ ಎದುರಾಗಿತ್ತು. ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.