ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೈಂ ಗಣೇಶ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಗಣೇಶ್ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಕಳೆದ 20 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಅನಾರೋಗ್ಯದಿಂದಾಗಿ ನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸದ್ಯ ಟಿವಿ 5 ಚಾನಲ್ ನಲ್ಲಿ ಔಟ್ ಪುಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯವರಾಗಿದ್ದ ಗಣೇಶ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಇಂದು ಅವರ ಮೃತದೇಹವನ್ನು ತಾಳೆಕೆರೆಗೆ ಕೊಂಡೊಯ್ದು ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್ ಎಂದು ಪರಿಚಿತರಾಗಿದ್ದ ಗಣೇಶ್ ಅವರ ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.