ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ ಯೋಜನೆ-ಡಿಬಿಟಿ ಕುರಿತ ಇತ್ತೀಚಿನ ಅಧ್ಯಯನಗಳು ಕಳವಳಕಾರಿಯಾಗಿವೆ.
ಅನ್ನ ಭಾಗ್ಯ ಯೋಜನೆಯ (ABS) ನಗದನ್ನು ಮನೆಯವರು ಶಿಕ್ಷಣ, ಆರೋಗ್ಯ ರಕ್ಷಣೆ, ಸಾಲ ಮರುಪಾವತಿ, ಗುಣಮಟ್ಟದ ಧಾನ್ಯ ಖರೀದಿ ಮತ್ತಿತರ ಅಗತ್ಯಗಳಿಗಾಗಿ ಬಳಸಿಕೊಂಡರೂ ನಗರ ಮತ್ತು ಗ್ರಾಮೀಣ ಪ್ರದೇಶದ ಪುರುಷರು ಸರಿ ಸುಮಾರು ಶೇ. 20 ರಷ್ಟು ಹಣವನ್ನು ಹೆಂಡತಿಗೆ ತಿಳಿಯದಂತೆ ಕುಡಿತ ಮತ್ತು ಧೂಮಪಾನಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಗಳು ತಿಂಗಳಿಗೆ ಸರಾಸರಿ 576 ರೂ. ಪಡೆಯುತ್ತಾರೆ, ಆದರೆ ನಗರ ಪ್ರದೇಶದ ಕುಟುಂಬಗಳು ರೂ. 583 ಪಡೆಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸರಿಸುಮಾರು ಶೇ. 77 ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ. 82 ರಷ್ಟು ಹಣವನ್ನು ಧಾನ್ಯ ಖರೀದಿಸಲು ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಕುಡಿತ, ಸ್ಮೋಕಿಂಗ್ ಮತ್ತಿತರ ಇತರ ಉದ್ದೇಶಗಳಿಗೆ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದೆ.
ಜುಲೈ 2023ರಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಸುವವರೆಗೆ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಕೆಜಿಗೆ 34 ರೂ.ರಂತೆ ಹಣ ವರ್ಗಾವಣೆ ಯೋಜನೆಯನ್ನು ಅನುಷ್ಠಾನಗೊಳಿಸಿತು.
ನ್ಯಾಷನಲ್ ಸ್ಯಾಂಪಲ್ ಸರ್ವೇ ಸಂಸ್ಥೆ ಪ್ರಕಾರ (2022-23) ಪ್ರಕಾರ ಭಾರತೀಯರು ತಿಂಗಳಿಗೆ ಸರಿಸುಮಾರು 9 ಕೆಜಿ ಧಾನ್ಯಗಳನ್ನು ಸೇವಿಸುತ್ತಾರೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಹೆಚ್ಚುವರಿಯಾಗಿ 4 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಕಳೆದ ವರ್ಷ ಹೆಚ್ಚುವರಿ ಅಕ್ಕಿ ಸಂಗ್ರಹಿಸುವಲ್ಲಿನ ತೊಂದರೆಗಳ ಕಾರಣ, ಸರ್ಕಾರ ಬದಲಿಗೆ ನಗದು ವರ್ಗಾವಣೆಗೆ ನಿರ್ಧರಿಸಿತು.
ಯೋಜನೆಯ ಮೌಲ್ಯಮಾಪನ ವೇಳೆ ರೈತರು ಸಾಮಾನ್ಯವಾಗಿ ನಗದು ಸ್ವೀಕರಿಸಲು ಆದ್ಯತೆ ನೀಡಿದರೆ, ಕಾರ್ಮಿಕರು ಮತ್ತು ನಗರ ಪ್ರದೇಶದ ಜನರು ಧಾನ್ಯ ಖರೀದಿಗೆ ಒಲವು ತೋರಿದ್ದಾರೆ. ಕೆಲವು ಕುಟುಂಬಗಳು ಹೆಚ್ಚಿನ ಅಥವಾ ಉತ್ತಮ-ಗುಣಮಟ್ಟದ ಧಾನ್ಯಗಳನ್ನು ಖರೀದಿಸಲು ಹಣ ಬಳಸಿದರೆ, ಇತರರು ಅದನ್ನು ಪೂರಕ ಆದಾಯವೆಂದು ಪರಿಗಣಿಸಿದ್ದು, ಶಿಕ್ಷಣ, ಆರೋಗ್ಯ ರಕ್ಷಣೆ ಅಥವಾ ಸಾಲ ಮರುಪಾವತಿಗೆ ಬಳಸಿದ್ದಾರೆ.
ಈ ಯೋಜನೆಯಿಂದಾಗಿ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಗಣನೀಯ ಸಂಖ್ಯೆಯ ಕುಟುಂಬಗಳು ಮೊದಲ ಬಾರಿಗೆ ಬ್ಯಾಂಕ್ ಖಾತೆಗಳನ್ನು ತೆರೆದಿವೆ ಎಂದು ಅಧ್ಯಯನ ಎತ್ತಿ ತೋರಿಸಿದೆ. ಎಬಿಎಸ್ ಅಳವಡಿಸಿದ ನಂತರ ಸುಮಾರು ಶೇ. 43 ರಷ್ಟು ಗ್ರಾಮೀಣ ಪ್ರದೇಶದವರು ಮತ್ತು ಶೇ. 33 ರಷ್ಟು ನಗರವಾಸಿಗಳು ಮೊದಲ ಬಾರಿಗೆ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ.
ಕರ್ನಾಟಕದ ಆರು ಜಿಲ್ಲೆಗಳಲ್ಲಿ 1,585 ಕುಟುಂಬಗಳನ್ನು ಒಳಗೊಂಡಂತೆ ಆಗಸ್ಟ್ ಮತ್ತು ಸೆಪ್ಟೆಂಬರ್ 2023 ರಲ್ಲಿ ಎರಡು ಸುತ್ತುಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆಯ ಡಿಬಿಟಿ ಕುರಿತ ಮೌಲ್ಯಮಾಪನ ಅಧ್ಯಯನವನ್ನು ನೀತಿ ಆಯೋಗದ ಸದಸ್ಯ ಡಾ. ರಮೇಶ್ ಚಂದ್, ಕರ್ನಾಟಕ ಸರ್ಕಾರದ ಆಹಾರ ಕಾರ್ಯದರ್ಶಿ ರಾಮನ್ದೀಪ್ ಚೌಧರಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಕೃಷಿ ಕಾರ್ಯದರ್ಶಿ ಸಿರಾಜ್ ಹುಸೇನ್ ಉಪಸ್ಥಿತರಿದ್ದರು.
ನಗದು ವರ್ಗಾವಣೆ ಯೋಜನೆ ಮೇಲಿನ ಚರ್ಚೆ ವಿವಾದಾತ್ಮಕವಾಗಿಯೇ ಉಳಿದಿದೆ. ಹಣ ನೀಡುವುದರಿಂದ ಅದು ಅನಪೇಕ್ಷಿತ ಉದ್ದೇಶಗಳಿಗಾಗಿ ಖರ್ಚುಮಾಡಬಹುದು, ಹಸಿವು ಮತ್ತು ಅಪೌಷ್ಟಿಕತೆಯಂತಹ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು ಎಂದು ವಿಮರ್ಶಕರು ವಾದಿಸುತ್ತಾರೆ. ಪ್ರಸ್ತುತ ಅಧ್ಯಯನ ಕೆಲವರು ಹಣವನ್ನು ನಿಜವಾಗಿಯೂ ಅನಿವಾರ್ಯವಲ್ಲದ ವೆಚ್ಚಗಳಿಗೆ ಬಳಸುತ್ತಿದ್ದಾರೆ ಎಂದು ಸೂಚಿಸುತ್ತದೆ.
ಆದಾಗ್ಯೂ, ಅಂತಹ ಯೋಜನೆಗಳ ಬೆಂಬಲಿಗರು ನಗದು ವರ್ಗಾವಣೆಯಿಂದ ಆಹಾರ, ಆರೋಗ್ಯ ಮತ್ತಿತರ ಅಗತ್ಯಗಳಿಗೆ ಅನುಗುಣವಾಗಿ ಹಣ ವೆಚ್ಚ ಮಾಡಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಈ ಯೋಜನೆಯು ಮನೆಯ ವೆಚ್ಚವನ್ನು ಹೆಚ್ಚಿಸುವ ಮೂಲಕ ಮತ್ತು ಸಣ್ಣ ವ್ಯವಹಾರಗಳನ್ನು ಬೆಂಬಲಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಾದಿಸುತ್ತಾರೆ.