ಅಯೋಧ್ಯೆ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರು - ಅಯೋಧ್ಯೆ ತುರ್ತು ಭೂಸ್ಪರ್ಶ ಮಾಡಿದೆ.
ಇಂದು ಬೆಂಗಳೂರಿನಿಂದ ಅಯೋಧ್ಯೆಗೆ ತೆರಳಿದ್ದ ಆಕಾಶ ಏರ್ಲೈನ್ಸ್ ವಿಮಾನ ಅಯೋಧ್ಯೆಯ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
173 ಪ್ರಯಾಣಿಕರಿದ್ದ ಬೆಂಗಳೂರು - ಅಯೋಧ್ಯೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ವಿಮಾನ ಪರಿಶೀಲನೆ ಬಳಿಕ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದು ಹುಸಿಬಾಂಬ್ ಬೆದರಿಕೆ ಎಂದು ಅಯೋಧ್ಯೆ ಏರ್ಪೋರ್ಟ್ ನಿರ್ದೇಶಕ ವಿನೋದ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ಮಧ್ಯಾಹ್ನ 1:30ರ ಸುಮಾರಿಗೆ ಬೆಂಗಳೂರು - ಅಯೋಧ್ಯೆ ನಡುವೆ ಸಂಚರಿಸುವ ಆಕಾಶ ಏರ್ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ತಕ್ಷಣ ಎಮರ್ಜೆನ್ಸಿ ಲ್ಯಾಂಡಿಂಗ್ಗೆ ಆದೇಶಿಸಲಾಯಿತು ಎಂದು ವಿನೋದ್ ಕುಮಾರ್ ತಿಳಿಸಿದ್ದಾರೆ.
ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರ ಲಗೇಜ್ ಮತ್ತು ವಿಮಾನವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಅದೊಂದು ಹುಸಿಬಾಂಬ್ ಬೆದರಿಕೆ ಆಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಬುಧವಾರ ಸಹ ನಮಗೆ ಇದೇ ರೀತಿಯ ಹುಸಿಬಾಂಬ್ ಕರೆ ಬಂದಿತ್ತು ಎಂದು ಹೇಳಿದ್ದಾರೆ.