ಅಪಾಯಕಾರಿ ಮರಗಳ ತೆರವುಗೊಳಿಸುತ್ತಿರುವ ಬಿಬಿಎಂಪಿ. 
ರಾಜ್ಯ

ಬೆಂಗಳೂರು: ಅಪಾಯದ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅಭಿಯಾನ ಆರಂಭ..!

ದುರಂತಗಳ ತಪ್ಪಿಸಲು ಬಿಬಿಎಂಪಿ ಹಾಗೂ ಬೆಸ್ಕಾಂ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ. ನಾಗರಿಕರಿಂದ ಬಂದ ದೂರುಗಳಿಂದ 1,371 ಮರಗಳು ಮತ್ತು 3,700 ಕೊಂಬೆಗಳನ್ನು ತೆರವುಗೊಳಿಸಲಾಗಿದೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಮರದ ರೆಂಬೆ, ಕೊಂಬೆಗಳು, ವಿದ್ಯುತ್‌ ಕಂಬಗಳನ್ನು ಆವರಿಸಿರುವ ಮರಗಳ ತೆರವು ಕಾರ್ಯಾಚರಣೆ ಅಭಿಯಾನವನ್ನು ಆರಂಭಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ದಕ್ಷಿಣ ವಲಯದ ಜಯನಗರದ ಕಮ್ಯುನಿಟಿ ಕಾಲೇಜು ಬಳಿ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದುರಂತಗಳ ತಪ್ಪಿಸಲು ಬಿಬಿಎಂಪಿ ಹಾಗೂ ಬೆಸ್ಕಾಂ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ. ನಾಗರಿಕರಿಂದ ಬಂದ ದೂರುಗಳಿಂದ 1,371 ಮರಗಳು ಮತ್ತು 3,700 ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದಿಂದ ನಿರಂತರವಾಗಿ ಅಪಾಯ ಸ್ಥಿತಿಯಲ್ಲಿರುವ ಮರ ಕಟಾವು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಬಿರುಗಾಳಿಯಿಂದಾಗಿ ಮರಗಳು ಬೀಳುತ್ತವೆ. ಅವುಗಳ ತೆರವಿಗೆ ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿಯಾಗಿ ತೆರವು ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಓಡಾಟ ಹಾಗೂ ವಾಹನ ದಟ್ಟಣೆ ಹೆಚ್ಚಿರುವಂತಹ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ರಾತ್ರಿ ವೇಳೆ ಕಟಾವು ಮಾಡಿ, ಕೂಡಲೇ ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ನಿರಂತರವಾಗಿರುತ್ತದೆ. ಪಾಲಿಕೆ ಹಾಗೂ ಬೆಸ್ಕಾಂ ಸೇರಿ ವಿದ್ಯುತ್ ತಂತಿಗಳಿಗೆ ತಗಲುವ ರೆಂಬೆಗಳನ್ನು ತೆರವು ಮಾಡುವ ಅಭಿಯಾನವನ್ನು ಶುಕ್ರವಾರದಿಂದ 10 ದಿನ ನಡೆಸಲಾಗುವುದು.ಮುಖ್ಯ ರಸ್ತೆಗಳಲ್ಲಿ ಸಾಕಷ್ಟು ಮರಗಳ ಕೊಂಬೆಗಳು ಇರುವುದರಿಂದ ವಿದ್ಯುತ್ ದೀಪಗಳ ಬೆಳಕನ್ನು ಅದು ತಡೆಯುತ್ತಿದೆ. ಹೀಗಾಗಿ ಈ ಕೊಂಬೆಗಳನ್ನು ತೆರವುಗೊಳಿಸಿ ರಸ್ತೆಗೆ ಸೂಕ್ತ ಬೆಳಕು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಮುಖ ರಸ್ತೆಗಳಲ್ಲಿ ಸಮೀಕ್ಷೆ ಮಾಡಿ ನಂತರ ಅಪಾಯ ಸ್ಥಿತಿಯಲ್ಲಿರುವ ಮರಗಳ ತೆರವು ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಜುಲೈನಿಂದ ಈವರೆಗೆ ಒಣಗಿದ/ಅಪಾಯ ಸ್ಥಿತಿಯಲ್ಲಿರುವ 478 ಮರ ಹಾಗೂ 592 ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ನಾಗರಿಕರಿಂದ ಬಂದಿರುವ ದೂರುಗಳನ್ನು ಆಧರಿಸಿ ಮಳೆ ಗಾಳಿಗೆ ಬಿದ್ದಂತಹ ಸುಮಾರು 1,371 ಮರಗಳು ಹಾಗೂ 3,700 ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದರೆ ಅಥವಾ ಗಾಳಿ,ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಬೇಕಾದರೆ, ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 1533 ಅಥವಾ 080-22221188 / 08022660000 ಗೆ ಕರೆ ಮಾಡಬಹುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT