ಬೆಂಗಳೂರು: ಇದೇ ಸೆಪ್ಟೆಂಬರ್ 14 ರಂದು ರಾಜ್ಯದಾದ್ಯಂತ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಒಂದೇ ದಿನದಲ್ಲಿ ಬರೋಬ್ಬರಿ 35.85 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2 ಲಕ್ಷ ಪ್ರಕರಣಗಳು ಮತ್ತು 33.84 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿವೆ. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ನೀಡಿದೆ.
ಈ ವಿಷಯವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಹಕ ಅಧ್ಯಕ್ಷರೂ ಆದ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ಹೈಕೋರ್ಟ್ನ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿದರು.
ಸೆಪ್ಟೆಂಬರ್ 14ರಂದು ನಡೆದಿದ್ದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 35.85 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2 ಲಕ್ಷ ಕೇಸ್ ಹಾಗೂ 33.84 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ 2,402 ಕೋಟಿ ಪರಿಹಾರ ಮೊತ್ತದೊಂದಿಗೆ ಕೇಸ್ ಇತ್ಯರ್ಥಗೊಳಿಸಲಾಗಿದೆ. ಅದಾಲತ್ನಲ್ಲಿ 1,669 ವೈವಾಹಿಕ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಇನ್ನು ಸಂಧಾನದ ಮೂಲಕ 248 ದಂಪತಿ ಒಟ್ಟುಗೂಡಿಸಲಾಗಿದೆ. 2,696 ವಿಭಾಗ ದಾವೆ ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
3,621 ಅಪಘಾತ ಕೇಸ್ಗಳಲ್ಲಿ 191 ಕೋಟಿ ಪರಿಹಾರ ನೀಡಲಾಗಿದೆ. 8,517 ಚೆಕ್ ಬೌನ್ಸ್ ಕೇಸ್ಗಳನ್ನ ಮುಕ್ತಾಯಗೊಳಿಸಲಾಗಿದೆ. 2,598 ಅಮಲ್ದಾರಿ ಕೇಸ್, 73 ಗ್ರಾಹಕರ ವ್ಯಾಜ್ಯಗಳು ಇತ್ಯರ್ಥಗೊಳಿಸಲಾಗಿದ್ದು, 5 ವರ್ಷಕ್ಕೂ ಹಳೆಯ 1,443 ಕೇಸ್ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಪುರಸಭೆ ಕಾಯ್ದೆಯ ಕಲಂ 103ರ ಅಡಿಯಲ್ಲಿ ಲೋಕ ಅದಾಲತ್ನಲ್ಲಿ ರಿಯಾಯಿತಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ 5,95,892 ಪ್ರಕರಣಗಳಲ್ಲಿ ತೆರಿಗೆ ಪಾವತಿಯಾಗಿದ್ದು ರೂ.653 ಕೋಟಿಯಷ್ಟು ಬೃಹತ್ ಮೊತ್ತ ಸರ್ಕಾರದ ಖಜಾನೆಗೆ ಜಮೆಯಾಗಿದೆ ಎಂದು ವಿವರಿಸಿದರು.
1,365 ಕ್ಕೂ ಹೆಚ್ಚು ಹಿರಿಯ ನಾಗರಿಕರು ತಮ್ಮ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡರು. ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಡಿಸೆಂಬರ್ 14 ರಂದು ನಿಗದಿಪಡಿಸಲಾಗಿದೆ, ಅಲ್ಲಿ ನಾಗರಿಕರು ರಾಜ್ಯಾದ್ಯಂತ ತಮ್ಮ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.