ಬೆಂಗಳೂರು: ವೈಯಾಲಿಕಾವಲ್ನ ಬಸಪ್ಪ ಗಾರ್ಡನ್ 5ನೇ ಕ್ರಾಸ್ನ ಪೈಪ್ಲೈನ್ ರಸ್ತೆಯ ಮನೆಯಲ್ಲಿ ನಡೆದಿದ್ದ ಮಹಾಲಕ್ಷ್ಮಿ(29) ಅವರ ಕೊಲೆ ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಈ ನಡುವಲ್ಲೇ ಹಂತಕ ಸಡೋಮಾಸೋಕಿಸ್ಟ್ ನಂತೆ ತೋರುತ್ತಿದ್ದು ಆತನನ್ನು ಶೀಘ್ರಗತಿಯಲ್ಲಿ ಬಂಧಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಹಂತಕ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಬಚ್ಚಿಟ್ಟಿದ್ದ, ಶನಿವಾರ ಸಂಜೆ ಪರಿಶೀಲನೆ ನಡೆಸಿದಾಗ 30 ತುಂಡಾಗಿ ಕತ್ತರಿಸಲಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಭಾನುವಾರ ನಡೆದ ಮರಣೋತ್ತರ ಪರೀಕ್ಷೆ ವೇಳೆ, 59 ತುಂಡಾಗಿ ಕತ್ತರಿಸಲಾಗಿದೆ ಎಂಬುದು ದೃಢಪಟ್ಟಿದೆ. ಅಲ್ಲದೆ, ಮಹಿಳೆಯ ತಲೆಯನ್ನೂ ಮೂರು ಭಾಗವಾಗಿ ಮಾಡಿದ್ದು, ಮಹಿಳೆಯ ಕಾಲುಗಳನ್ನು ಕತ್ತರಿಸಲಾಗಿತ್ತು. ಕರುಳು, ತಲೆಯ ಕೂದಲು ಸೇರಿದಂತೆ ಇತರೆ ಭಾಗಗಳನ್ನು ಪ್ಲಾಸ್ಟಿಕ್ನಲ್ಲಿ ತುಂಬಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹಂತಕ ಎರಡು ಕಾರಣಗಳಿಂದ ದೇಹವನ್ನು ತುಂಡಾಗಿಸಿರಬಹುದು. ಮೃತದೇಹವನ್ನು ಸುಲಭವಾಗಿ ವಿಲೇವಾರಿ ಮಾಡುವ ಉದ್ದೇಶ ಅಥವಾ ದೇಹ ತುಂಡರಿಸುವ ವೇಳೆ ಆನಂದ ಪಟ್ಟಿರುವ ಸಾಧ್ಯತೆಗಳಿವೆ. ಒಂದು ದೇಹವನ್ನು ತುಂಡರಿಸಲು ಸಮಯ ಹಾಗೂ ಕೌಶಲ್ಯದ ಅಗತ್ಯವಿರುತ್ತದೆ. ಈ ಪ್ರಕರಣದಲ್ಲಿ ಹಂತಕ ಸಡೋಮಾಸೋಕಿಸ್ಟಿಕ್ ಪ್ರವೃತ್ತಿಯನ್ನು ಹೊಂದಿರುವ ಸಾಧ್ಯತೆಗಳನ್ನು ತೋರಿಸುತ್ತಿದೆ.
ಹತ್ಯೆ ಬಳಿಕ ಹಂತಕ ಆತಂಕಗೊಂಡಿಲ್ಲ. ಅಡುಗೆ ಮಾಡಿ, ನಂತರ ಅದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟಂತೆ ಅಚ್ಚುಕಟ್ಟಾಗಿ ಮೃತದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದಾನೆ. ದೇಹವನ್ನು ತುಂಡರಿಸಲು 2-3 ಗಂಟೆ ಸಮಯ ತೆಗೆದುಕೊಂಡಿರಬಹುದು. ಮಹಿಳೆಯ ಒಳಾಂಗಗಳನ್ನು ಫ್ರಿಜ್ಡ್ ನಲ್ಲಿ ಮೇಲಿನ ಕಪಾಟಿನಲ್ಲಿ ಹಾಗೂ ದೇಹದ ಉಳಿದ ಭಾಗಗಳನ್ನು ಮೂರು ಕಪಾಟಿನಲ್ಲಿ ತುಂಬಿಸಿದ್ದಾನೆ.
ಇದು ಶ್ರದ್ಧಾ ವಾಲ್ಕರ್ ಪ್ರಕರಣದಂತೆಯೇ ಇದೂ ಕೂಡ ಪೂರ್ವ ನಿಯೋಜಿತ ಕೃತ್ಯದಂತಿದೆ. ಕೊಲೆಗಾರ ಸ್ಯಾಡಿಸ್ಟ್ ಆಗಿರುವ ಸಾಧ್ಯತೆಗಳಿದ್ದು, ಇತರೆ ವ್ಯಕ್ತಿಗಳ ಕೊಲೆಯಾಗದಂತೆ ತಡೆಯಲು ಆತನನ್ನು ಶೀಘ್ರಗತಿಯಲ್ಲಿ ಬಂಧಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಕೊಲೆಗಾರ ಶಾಂತ ವ್ಯಕ್ತಿಯಂತೆ ತೋರಿಸಿಕೊಳ್ಳತ್ತಾನೆ. ಇಂತಹ ಅಪರಾಧಿಗಳೊಂದಿಗೆ ವ್ಯವಹರಿಸಲು ಪೊಲೀಸರಿಗೆ ತರಬೇತಿಯ ಅಗತ್ಯವಿರುತ್ತದೆ. ಏಕೆಂದರೆ, ಈ ವ್ಯಕ್ತಿಗಳು ಸೇಡು ಹಾಗೂ ಕಾಮಕ್ಕಾಗಿ ಕೊಲೆ ಮಾಡಲು ಇತರರು ಅನುಸರಿಸುವ ಮಾದರಿಯನ್ನು ಅನುಸರಿಸುವುದಿಲ್ಲ. ಶಾಂತ ರೀತಿಯಲ್ಲಿ ಯಾರಿಗೂ ತಿಳಿಯದಂತೆ ಮಾಡುತ್ತಾರೆ. ಇಂತಹವರು ಕಾನೂನು ವ್ಯವಸ್ಥೆಗೆ ಸವಾಲು ಎದುರು ಮಾಡುತ್ತಾರೆ. ಕಾಣೆಯಾದ ಸಾಕಷ್ಟು ವ್ಯಕ್ತಿಗಳು, ವಿಶೇಷವಾಗಿ ಮಹಿಳೆಯರು ಪತ್ತೆಯಾಗುವುದು ವಿರಳ. ಇಂತಹವರು ಇದೇ ರೀತಿ ಬಲಿಯಾಗಿರುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದ್ದಾರೆ.