ಬೆಂಗಳೂರು: ನಗರದಲ್ಲಿ ಅಪರಾಧ ಕೃತ್ಯಗಳ ತಡೆಗಟ್ಟಲು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವು–ನೀವು ಕಾರ್ಯಕ್ರಮವನ್ನು ಆರಂಭಿಸಿದ್ದು, ಸಾರ್ವಜನಿಕರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಕಾರ್ಯಕ್ರಮದಡಿಯಲ್ಲಿ ಪೊಲೀಸರು ಸಾರ್ವಜನಿಕರನ್ನು ಸ್ವಯಂಸೇವಕರನ್ನಾಗಿ ಬಳಸಿಕೊಂಡು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಪಶ್ಚಿಮ ವಿಭಾಗದ ಪೊಲೀಸರು ಪ್ರಾರಂಭಿಸಿದ ಈ ಉಪಕ್ರಮವನ್ನು ಆರಂಭಿಸಿದ್ದು, ಇದು ಅಪರಾಧ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಾತ್ರಿ ಬೀಟ್ಗಳಲ್ಲಿ ನಾಗರಿಕರನ್ನು ಒಳಗೊಳ್ಳುವ ಮೂಲಕ ಅಪರಾಧಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.
ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಬಲವಾದ ಮತ್ತು ಸೌಹಾರ್ದ ಬಾಂಧವ್ಯವನ್ನು ಬೆಳೆಸಲು ‘ನಾವು ನೀವು’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಯಕ್ರಮದಡಿ ಸ್ವಯಂಸೇವಕರು ಪೊಲೀಸರೊಂದಿಗೆ ರಾತ್ರಿ ವೇಳೆ ಗಸ್ತು ಕರ್ತವ್ಯದಲ್ಲಿ ಕೈಜೋಡಿಸುತ್ತಾರೆ. ಇಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ ಒಬ್ಬ ನಾಗರೀಕ ಸ್ವಯಂಸೇವಕ ಗಸ್ತು ವೇಳೆ ಇರಲಿದ್ದಾರೆ. ಹಬ್ಬಗಳು ಮತ್ತು ಸಾರ್ವಜನಿಕ ಸಭೆಗಳಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರು ಪೊಲೀಸರಿಗೆ ಸಹಾಯ ಮಾಡುತ್ತಾರೆಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸ್ವಯಂಸೇವಕರನ್ನು ಪ್ರೋತ್ಸಾಹಿಸಲು ಮಾಸಿಕ ಜನ ಸಂಪರ್ಕ ಸಭೆಯ ಸಂದರ್ಭದಲ್ಲಿ ಪ್ರಶಂಸಾ ಪತ್ರಗಳನ್ನು ನೀಡಲಾಗುವುದು. ಆರಂಭದಲ್ಲಿ ಪಶ್ಚಿಮ ವಿಭಾಗದಲ್ಲಿ ಆರಂಭಿಸಲಾದ ಕಾರ್ಯಕ್ರಮವನ್ನು ಈಗ ಇತರ ವಿಭಾಗಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ವಿಭಾಗದಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಐದರಿಂದ ಹತ್ತು ಮಂದಿ ಸ್ವಯಂಸೇವಕರು ಇದ್ದಾರೆ. ಈ ಕಾರ್ಯಕ್ರಮದಲ್ಲಿ ಸೇರಲು ಬಯಸುವವರು ತಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು. ಸ್ವಯಂಸೇವಕರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಸ್ಥಳೀಯ ನಿವಾಸಿಯಾಗಿರಬೇಕು ಮತ್ತು ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಬಾರದು ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ದಕ್ಷತೆಯನ್ನು ಸುಧಾರಿಸಲು ಗಸ್ತು ಯೋಜನೆ, ವರದಿ ಮತ್ತು ಲೆಕ್ಕಪರಿಶೋಧನೆಗಾಗಿ ಇ-ಸುಭಾಹು ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.
ಹೆಣ್ಣುಮಕ್ಕಳ ಪೇಯಿಂಗ್ ಗೆಸ್ಟ್ ವಸತಿ, ಹಾಸ್ಟೆಲ್ಗಳು, ಧಾರ್ಮಿಕ ಸ್ಥಳಗಳು, ಬ್ಯಾಂಕ್ಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಮಹಿಳಾ-ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆಯನ್ನು ಮೇಲ್ವಿಚಾರಣೆ ಮಾಡಲು ಈ ಆ್ಯಪ್ ಸಹಕಾರಿಯಾಗಿದೆ, ಬೀಟ್ ವ್ಯವಸ್ಥೆ ಸಾರ್ವಜನಿಕರ ವಿಶ್ವಾಸವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕರು ಕೂಡ ಇ-ಸುಭಾಹು ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಬಹುದು, ಅಧಿಕಾರಿಗಳು ಭೇಟಿ ಕುರಿತು ಈ ಆ್ಯಪ್ ಮಾಹಿತಿ ನೀಡಲಿದೆ ಎಂದು ಹೇಳಿದರು.