ನವದೆಹಲಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ (ಕೆಬಿಡಿಸಿ) ದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಬುಧವಾರ ಮತ್ತೊಬ್ಬರನ್ನು ಬಂಧಿಸಿದೆ.
ಕೆಬಿಡಿಸಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್ ಲೀಲಾವತಿ ಅವರನ್ನು ಏಪ್ರಿಲ್ 12 ರಂದು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಮುಂದೆ ಅವರನ್ನು ಹಾಜರುಪಡಿಸಿ, ಇಡಿ ಕಸ್ಟಡಿಗೆ ಪಡೆಯಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
2018-2023ರ ಅವಧಿಯಲ್ಲಿ ನಿಗಮದ ಖಾತೆಯಿಂದ ಅಕ್ರಮವಾಗಿ 97 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, ಇ.ಡಿ ಸಹ ತನಿಖೆ ಆರಂಭಿಸಿದೆ. ಭೋವಿ ನಿಗಮದ ಕಚೇರಿ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯ, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಬಿಕೆ ನಾಗರಾಜಪ್ಪ ಅವರನ್ನು ಬಂಧಿಸಿತ್ತು. ನಾಗರಾಜಪ್ಪ ಸದ್ಯ ತನಿಖಾ ಸಂಸ್ಥೆಯ ವಶದಲ್ಲಿದ್ದಾರೆ.
ನಾಗರಾಜಪ್ಪ, ಸುಬ್ಬಪ್ಪ (ಆಗ ಕೆಬಿಡಿಸಿಯ ಸೂಪರಿಂಟೆಂಡೆಂಟ್ ಆಗಿದ್ದರು) ಮತ್ತು ಇತರ ಶಂಕಿತರು/ಆರೋಪಿಗಳ ಜೊತೆ ಸೇರಿ ಲೀಲಾವತಿ ಅವರು ನಕಲಿ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಅವುಗಳಿಗೆ ಹಣ ವರ್ಗಾವಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇ.ಡಿ ಹೇಳಿದೆ.
ಮೊದಲಿಗೆ ಕೆಬಿಡಿಸಿಯಿಂದ ಆ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಆ ಹಣವನ್ನು ಆರೋಪಿಗಳು ಮತ್ತು ಇತರ ಶಂಕಿತ ವ್ಯಕ್ತಿಗಳ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ವರ್ಗಾಯಿಸಿದ್ದಾರೆ ಎಂದು ಏಜೆನ್ಸಿ ತಿಳಿಸಿದೆ.
ನಾಗರಾಜಪ್ಪ, ಲೀಲಾವತಿ, ಸುಬ್ಬಪ್ಪ ಮತ್ತು ಇತರರು ಯಾರಿಗೂ ಅನುಮಾನ ಬಾರದ ಮತ್ತು ತಿಳಿಯದ ರೀತಿಯಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಮತ್ತು ಅನೇಕ ಫಲಾನುಭವಿಗಳನ್ನು ವಂಚಿಸಿದ್ದಾರೆ ಎಂದು ED ಆರೋಪಿಸಿದೆ.
ಲೀಲಾವತಿ ಈ ಹಣವನ್ನು ತಮ್ಮ ದಿವಂಗತ ಸಹೋದರಿ ಮಂಗಳಾ ರಾಮು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ನಂತರ, ಅವರು ಈ ಹಣವನ್ನು ತಾವೇ ತೆರೆದ ನಕಲಿ ಸಂಸ್ಥೆಗಳ ಮೂಲಕ ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ ಎಂದು ED ಹೇಳಿದೆ.
ಕೆಬಿಡಿಸಿಯಿಂದ 97 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕರ್ನಾಟಕ ಪೊಲೀಸರು ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಇ.ಡಿ ತನಿಖೆ ಆರಂಭಿಸಿದೆ.