ಕಾಶ್ಮೀರಕ್ಕೆ ತೆರಳಿದ್ದ ಕರ್ನಾಟಕದ ಪ್ರವಾಸಿಗರನ್ನು ಮರಳಿ ತವರಿಗೆ ಕರೆತಂದ ಸಚಿವ ಸಂತೋಷ್ ಲಾಡ್. 
ರಾಜ್ಯ

ಪಹಲ್ಗಾಮ್​​ ಉಗ್ರರ ದಾಳಿ: ಸಿನಿಮಾದ ದೃಶ್ಯಗಳಂತೆ ಭಾಸವಾಯಿತು, ಮತ್ತೆಂದೂ ಕಾಶ್ಮೀರಕ್ಕೆ ಹೋಗೋಲ್ಲ; ಭಯಾನಕತೆ ಸ್ಮರಿಸಿದ ಕರ್ನಾಟಕದ ಪ್ರವಾಸಿಗರು

ಉಗ್ರರ ಪೈಶಾಚಿಕ ಕೃತ್ಯದಲ್ಲಿ ಬದುಕಿ ಬಂದಿರುವ ಕನ್ನಡಿಗರು ದಾಳಿಯ ಭಯಾನಕತೆಯನ್ನು ಸ್ಮರಿಸಿದ್ದಾರೆ. ಅಲ್ಲದೆ, ಉಗ್ರರ ದಾಳಿ ಬಳಿಕ ತಾವು ಎದುರಿಸಿದ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ದಾಳಿಯಲ್ಲಿ ರಾಜ್ಯದ ಮೂವರು ಸೇರಿ ಒಟ್ಟು 28 ಮಂದಿ ಬಲಿಯಾಗಿದ್ದಾರೆ.

ಘಟನೆ ಬಳಿಕ ಗುರುವಾರ ಮಧ್ಯಾಹ್ನ ಕರ್ನಾಟಕದ ಒಟ್ಟು 177 ಪ್ರವಾಸಿಗರನ್ನು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆ ತರಲಾಗಿದ್ದು, ಉಗ್ರರ ಪೈಶಾಚಿಕ ಕೃತ್ಯದಲ್ಲಿ ಬದುಕಿ ಬಂದಿರುವ ಕನ್ನಡಿಗರು ದಾಳಿಯ ಭಯಾನಕತೆಯನ್ನು ಸ್ಮರಿಸಿದ್ದಾರೆ. ಅಲ್ಲದೆ, ಉಗ್ರರ ದಾಳಿ ಬಳಿಕ ತಾವು ಎದುರಿಸಿದ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಉಗ್ರರ ದಾಳಿ ಬಳಿಕ ತವರಿಗೆ ವಾಪಸ್ಸಾಗುವುದು ಕಷ್ಟಕರವಾಗಿತ್ತು. ಸಾಕಷ್ಟು ಮಂದಿ ಪ್ರವಾಸಿಗರು ಗುಂಪುಗಳಾಗಿ ಪ್ರಯಾಣಿಸಿದ್ದರಿದ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಟಿಕೆಟ್ ದರಗಳು 80,000 ರೂ.ಗಳಿಗೆ ಏರಿಕೆಯಾಗಿತ್ತು. ಸರ್ಕಾರ ಮಧ್ಯಪ್ರವೇಸಿಸಿ ನಮಗೆ ಸಹಾಯ ಮಾಡಿದೆ ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಚಿವ ಸಂತೋಷ್ ಲಾಡ್ ಅವರು ಶ್ರೀನಗರ ಮತ್ತು ಗುಲ್ಮಾರ್ಗ್‌ಗೆ ವೈಯಕ್ತಿಕವಾಗಿ ಭೇಟಿ ನೀಡಿ, ಸಂಕಷ್ಟದಲ್ಲಿದ್ದ ಪ್ರವಾಸಿಗರಿಗೆ ನೆರವು ನೀಡಿದರು. ಸುರಕ್ಷತೆಯ ಭರವಸೆ ನೀಡಿದರು. ಬಳಿಕ ವಾಪಸಾತಿಗೆ ಸಹಾಯ ಮಾಡಿದರು ಎಂದು ಹೇಳಿದ್ದಾರೆ.

ಈ ನಡುವೆ ಉಗ್ರರ ದಾಳಿಯ ಭಯಾನಕತೆಯನ್ನು ಸ್ಮರಿಸಿರುವ ಬೆಂಗಳೂರಿನ ನಿವಾಸಿ ಮೋನಿಕಾ ಸತ್ಯಾ ಅವರು, ಮತ್ತೆಂದೂ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

30 ವರ್ಷಗಳ ಹಿಂದೆ ನನ್ನ ಅಕ್ಕ ಹನಿಮೂನ್'ಗೆ ಕಾಶ್ಮೀರಕ್ಕೆ ಹೋಗಿದ್ದರು. ಅಂದಿನಿಂದಲೂ ಕಾಶ್ಮೀರಕ್ಕೆ ಹೋಗುವುದು ನನ್ನ ಕನಸಾಗಿತ್ತು. ಆದರೆ, ಈ ಅನುಭವದ ನಂತರ ಮತ್ತೊಂದು ಕಣಿವೆ ರಾಜ್ಯಕ್ಕೆ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ರಜೆ ಹಿನ್ನೆಲೆಯಲ್ಲಿ 8 ಮಂದಿ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದೆವು. ಗುಲ್ಮಾರ್ಗ್ ನಲ್ಲಿ ನಾವಿದ್ದೆವು. ಈ ವೇಳೆ ಉಗ್ರರ ದಾಳಿ ವಿಚಾರ ತಿಳಿದು ಆಘಾತವಾಯಿತು. ನಾವೆಲ್ಲರೂ ಭಯಭೀತರಾಗಿದ್ದೆವು. ಇಂಟರ್ನೆಟ್ ಅಷ್ಟೇನೂ ಕಾರ್ಯನಿರ್ವಹಿಸುತ್ತಿರಲಿಲ್ಲ, ಆದ್ದರಿಂದ ವಿಮಾನಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಏನು ಮಾಡಬೇಕೆಂದು ತಿಳಿಯದೆ, ಬೆಂಗಳೂರಿನಲ್ಲಿರುವ ಸ್ನೇಹಿತರಿಗೆ ಕರೆ ಮಾಡಿದೆ. ಅವರು ಸಚಿವ ಸಂತೋಷ್ ಲಾಡ್ ಭೇಟಿ ನೀಡುವ ಸುದ್ದಿಯನ್ನು ನೋಡಿರುವುದಾಗಿ ತಿಳಿಸಿದರು. ನಾನು ಸಚಿವರ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಿದೆ. ಸಚಿವರು ಶ್ರೀನಗರದಿಂದ ಗುಲ್ಮಾರ್ಗ್‌ನಲ್ಲಿರುವ ನಮ್ಮ ಹೋಟೆಲ್‌ಗೆ ಬಂದರು. ಇತರ ಪ್ರವಾಸಿಗರೊಂದಿಗೆ ನಮ್ಮನ್ನು ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.

ಪ್ರವಾಸಿ ಸಂಸ್ಥೆ ಬಸ್ ವಿಳಂಬವಾಗಿದ್ದು ನಮ್ಮ ಜೀವ ಉಳಿಸಿತು...

ಉತ್ತರ ಭಾರತದ ಗಿರಿಧಾಮಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೆವು. ಕಳೆದ ವರ್ಷ ಶಿಮ್ಲಾ ಮತ್ತು ಮನಾಲಿಗೆ ಹೋಗಿದ್ದೆವು. ಈ ಬಾರಿ ಕಾಶ್ಮೀರ ಆಯ್ಕೆ ಮಾಡಿದ್ದೆವು. ಭಯೋತ್ಪಾದಕ ದಾಳಿಯ ದಿನದಂದು ನಮ್ಮ ಕುಟುಂಬವು ಗುಲ್ಮಾರ್ಗ್‌ನಿಂದ ಪಹಲ್ಗಾಮ್‌ಗೆ ಬಸ್‌ನಲ್ಲಿ ಹೊರಡಬೇಕಿತ್ತು. ನಾವು ಮಂಗಳವಾರ ಬೆಳಿಗ್ಗೆ ಹೊರಡಬೇಕಿತ್ತು, ಆದರೆ, ಪ್ರವಾಸಿ ಸಂಸ್ಥೆ ಬಸ್‌ಗಳು ಸಿಕ್ಕಿರಲಿಲ್ಲ. ಸಂಜೆಯ ಹೊತ್ತಿಗೆ ಹೊರಡಬೇಕೆಂದು ತಿಳಿಸಿದ್ದವು. ಈ ವಿಳಂಬವೇ ನಮ್ಮ ಜೀವ ಉಳಿಯತು ಸಾಧ್ಯವಾಗಿದೆ ಎಂದು ಬೇಸಿಗೆ ರಜೆ ನಿಮಿತ್ತ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸ ಕೈಗೊಂಡಿರು ಬಾಲಕಿ ಮಿಶಾ (13) ಅವರು ಹೇಳಿದ್ದಾರೆ.

ಉಗ್ರರು ದಾಳಿ ನಡೆಸಿದ ದಿನ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿದ್ದೆವು. ಹೀಗಾಗಿ ದಾಳಿ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ನಂತರ ದಿನ ಇಂಟರ್ನೆಂಟ್ ಸಂಪರ್ಕ ಸಿಕ್ಕಿದಾಗಲೇ ನಮಗೆ ವಿಚಾರ ತಿಳಿದದ್ದು. ಸಂಬಂಧಿಕರಿಂದ ಅನೇಕ ಮಿಸ್ಡ್ ಕಾಲ್‌ಗಳು ಬಂದಿದ್ದವು. ನಾವು ಏಪ್ರಿಲ್. 26ರಂದು ವಾಪಸ್ಸಾಗಬೇಕಿತ್ತು. ಆದರೆ, ದಾಳಿಯ ನಂತರ ತಕ್ಷವೇ ಹಿಂತಿರುಗಲು ನಿರ್ಧರಿಸಿದ್ದೆವು. ನಂತರ ಸಹಾಯವಾಣಿಯನ್ನು ಸಂಪರ್ಕಿಸಿದೆವು ಎಂದು ತಿಳಿಸಿದ್ದಾರೆ.

ಸಿನಿಮಾ ನೋಡಿದಂತೆ ಭಾಸವಾಯಿತು...

ಬೆಂಗಳೂರಿನ ಸೋದರಸಂಬಂಧಿಗಳಾದ ಕುಶ್ ಮತ್ತು ಕೃತಿ ತಮ್ಮ ಅಜ್ಜ-ಅಜ್ಜಿಯರಿಗೆ ಕಾಶ್ಮೀರದ ಸೌಂದರ್ಯವನ್ನು ತೋರಿಸಲು 20 ಕುಟುಂಬ ಸದಸ್ಯರೊಂದಿಗೆ ಕಾಶ್ಮೀರಕ್ಕೆ ಪ್ರಯಾಣಿಸಿದ್ದರು. ಆದರೆ, ಪಹಲ್ಗಾಮ್‌ನ ಬೇತಾಬ್ ಕಣಿವೆಯಿಂದ ಹಿಂತಿರುಗುತ್ತಿದ್ದಂತೆ ಭಯೋತ್ಪಾದಕ ದಾಳಿಯ ಬಗ್ಗೆ ತಿಳಿಯಿತು. ನಾವೆಲ್ಲರೂ ದಾಳಿ ನಡೆದ ಸ್ಥಳದಿಂದ ಕೇವಲ 5 ಕಿ.ಮೀ ದೂರದಲ್ಲಿದ್ದೆವು, ನಮ್ಮ ರೆಸಾರ್ಟ್ ತಲುಪುವಷ್ಟರಲ್ಲಿ ಏನಾಯಿತು ಎಂಬುದು ತಿಳಿಯಲಿಲ್ಲ ಎಂದು ಕುಶ್ ಅವರು ಹೇಳಿದ್ದಾರೆ.

ಉಗ್ರರ ದಾಳಿ ಬಳಿಕ ಸ್ಥಳದಲ್ಲಿ ಭಾರೀ ನಿರ್ಬಂಧಗಳನ್ನು ಹೇರಲಾಯಿತು. ಸಂಪೂರ್ಣ ಲಾಕ್‌ಡೌನ್ ಪರಿಸ್ಥಿತಿ ಇತ್ತು. ನಮ್ಮ ಅಜ್ಜ-ಅಜ್ಜಿಯರನ್ನು ಎಲ್ಲಿಗೂ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಕರ್ಫ್ಯೂ ವಿಧಿಸಲಾಯಿತು. ಹೆಲಿಕಾಪ್ಟರ್‌ಗಳು ಆಗಸದಲ್ಲಿ ಸುತ್ತಾಡುತ್ತಿದ್ದವು. ಮಿಲಿಟರಿ ತಪಾಸಣೆಗಳಿದ್ದವು. ನಾವು ಈ ಹಿಂದೆ ನೋಡಿದ ಸ್ಥಳ ಇದೆಯೇ ಎಂಬುದೇ ಎಂಬುದನ್ನು ನಂಬಲು ಸಾಧ್ಯವಾಗದಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾದವು. ಎಲ್ಲವೂ ಸಿನಿಮಾ ನೋಡಿದಂತೆ ಭಾಸವಾಯಿತು ಎಂದು ತಿಳಿಸಿದ್ದಾರೆ.

ಭಾಷಾ ಅಡಚಣೆಯ ಹೊರತಾಗಿಯೂ, ಸ್ಥಳೀಯ ನಿವಾಸಿಗಳು ಬಿಕ್ಕಟ್ಟಿನ ಸಮಯದಲ್ಲಿ ಅಪಾರ ಸಹಾಯವನ್ನು ಮಾಡಿದರು. ಹೆಚ್ಚಿನ ಪ್ರವಾಸಿಗರು ಗುಲ್ಮಾರ್ಗ್ ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿದ್ದರು. ಶ್ರೀನಗರದಿಂದ ದೂರದಲ್ಲಿರುವ ವಿಮಾನಗಳು ನಿಗದಿತವಾಗಿದ್ದವು. ಸ್ಥಳೀಯ ಪ್ರವಾಸಿ ಮಾರ್ಗದರ್ಶಕರು ಮತ್ತು ಚಾಲಕರ ಬೆಂಬಲದೊಂದಿಗೆ ಹಿಂತಿರುಗಲು ಸಾಧ್ಯವಾಯಿತು. ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ, ಸ್ಥಳೀಯರು ಬಸ್ ನಿಲ್ದಾಣಗಳನ್ನು ತಲುಪಲು ಸಹಾಯ ಮಾಡಿದರು. ಶ್ರೀನಗರಕ್ಕೆ ಸಾರಿಗೆ ವ್ಯವಸ್ಥೆ ಮಾಡಿದರು ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್ ಅವರು ಮಾತನಾಡಿ, ಸರ್ಕಾರವು ಇನ್ನೂ ಅನಂತನಾಗ್ ಜಿಲ್ಲಾ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT