ಧರ್ಮಸ್ಥಳ ಪ್ರಕರಣದ ಮುಸುಕುಧಾರಿ ಸಾಕ್ಷಿದಾರ 
ರಾಜ್ಯ

ಧರ್ಮಸ್ಥಳ ಪ್ರಕರಣ: 'ದೇವಸ್ತಾನದ ಆದೇಶ...', 'ಎಸ್ಐಟಿ ಮೇಲೆ ನಂಬಿಕೆ ಇದೆ, ಆದರೆ...'; ಮುಸುಕುಧಾರಿ ಸ್ಫೋಟಕ ಹೇಳಿಕೆ!

ಇಡೀ ಪ್ರಕರಣದ ಕೇಂದ್ರ ಬಿಂದುವಾಗಿರುವ 2012ರಲ್ಲಿ ಧರ್ಮಸ್ಥಳದ ಬಳಿ 17 ವರ್ಷದ ಸೌಜನ್ಯಳ ಕೊಲೆ ಪ್ರಕರಣದ ಬಗ್ಗೆಯೂ ಮುಸುಕುಧಾರಿ ಮಾತನಾಡಿದ್ದು, 'ಆ ರಾತ್ರಿ ತಾನು ರಜೆಯಲ್ಲಿದ್ದೆ...

ದಕ್ಷಿಣ ಕನ್ನಡ: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿರುವ ಮಾಜಿ ನೈರ್ಮಲ್ಯ ಕಾರ್ಮಿಕ, 'ದೇವಸ್ತಾನದ ಆದೇಶ'ದ ಮೇರೆಗೆ ತಾನು ಈ ಕೆಲಸಗಳನ್ನು ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಪ್ರಕರಣದಲ್ಲಿ ಎಸ್ ಐಟಿ ತನಿಖೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮುಸುಕುಧಾರಿ, 'ಸುಮಾರು ಎರಡು ದಶಕಗಳ ಕಾಲ ಅರಣ್ಯ ಪ್ರದೇಶಗಳು ಮತ್ತು ನದಿ ದಂಡೆಗಳಲ್ಲಿ ಹಲವಾರು ಗುರುತಿಸಲಾಗದ ಶವಗಳನ್ನು ಹೂಳಿದ್ದೇವೆ. 'ದೇವಸ್ತಾನದ ಆದೇಶ'ದ ಮೇರೆಗೆ ನಾವು ಈ ಕೆಲಸ ಮಾಡಿದ್ದಾಗಿ ಮುಸುಕುಧಾರಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಖಾಸಗಿ ಸುದ್ದಿವಾಹಿನಿ 'ಇಂಡಿಯಾ ಟುಡೇ' ಜೊತೆ ಮಾತನಾಡಿರುವ ಮುಸುಕುಧಾರಿ, 'ಅಂತ್ಯಕ್ರಿಯೆಗಳಿಗೆ ಯಾವುದೇ ಸ್ಮಶಾನಗಳನ್ನು ಬಳಸಲಾಗುತ್ತಿರಲ್ಲ. ನಾವು ಕಾಡುಗಳಲ್ಲಿ, ಹಳೆಯ ರಸ್ತೆ ಬದಿಗಳಲ್ಲಿ, ನದಿ ದಂಡೆಗಳ ಬಳಿ ಶವಗಳನ್ನು ಹೂಳುತ್ತಿದ್ದೆವು' ಎಂದು ಹೇಳಿದ್ದಾನೆ.

ಬಾಹುಬಲಿ ಬೆಟ್ಟಗಳಲ್ಲಿ ಸಮಾಧಿ ಮಾಡಲಾದ ಮಹಿಳೆ ಸೇರಿದಂತೆ ನೇತ್ರಾವತಿ ಸ್ನಾನ ಘಟ್ಟದ ಬಳಿ ಸುಮಾರು 70 ಶವಗಳನ್ನು ಹೂತಿರುವುದಾಗಿ ಮುಸುಕುಧಾರಿ ಹೇಳಿಕೊಂಡಿದ್ದಾನೆ. ಅಂತೆಯೇ ಎಸ್ ಐಟಿ ತನಿಖೆ ವೇಳೆ ಗುರುತಿಸಲಾದ Spot 13 ಎಂದು ಕರೆಯಲ್ಪಡುವ ಒಂದು ಸ್ಥಳವನ್ನು ಹೈಲೈಟ್ ಮಾಡಿರುವ ಮುಸುಕುಧಾರಿ, ಇಲ್ಲಿ ಸುಮಾರು 70 ರಿಂದ 80 ಶವಗಳನ್ನು ಹೂಳಲಾಗಿದೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.

ಸ್ಥಳೀಯರೂ ನೋಡಿದ್ದಾರೆ

ಇದೇ ವೇಳೆ ಈ ಶವಗಳನ್ನು ಹೂಳುವ ಕಾರ್ಯ ರಹಸ್ಯವಾಗಿಯೇನೂ ಇರುತ್ತಿರಲಿಲ್ಲ. ಹಲವು ಬಾರಿ ಶವ ಹೂಳುವುದನ್ನು ಸ್ಥಳೀಯರು ನೋಡಿದ್ದಾರೆ. ಆದರೆ ಯಾರೂ ಒಮ್ಮೆಯೂ ಮಧ್ಯ ಪ್ರವೇಶಿಸಲಿಲ್ಲ. ಶವ ಹೂಳುವಿಕೆಯಿಂದ ಜನರಿಗೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಹೀಗಾಗಿ ಅವರು ಸುಮ್ಮನಿದ್ದರು ಎನಿಸುತ್ತದೆ ಎಂದು ಮುಸುಕುಧಾರಿ ಹೇಳಿದ್ದಾನೆ.

ಸಂಭವನೀಯ ಲೈಂಗಿಕ ದೌರ್ಜನ್ಯ

ಅಂತೆಯೇ ಹೀಗೆ ತಾವು ಹೂಳುತ್ತಿದ್ದ ಶವಗಳ ಸಾವಿನ ಕಾರಣಗಳು ತಿಳಿಯುತ್ತಿರಲಿಲ್ಲವಾದರೂ, ಅನೇಕ ಶವಗಳು ಹಿಂಸೆ ಮತ್ತು ಸಂಭವನೀಯ ಲೈಂಗಿಕ ದೌರ್ಜನ್ಯದ ಗೋಚರ ಗುರುತುಗಳನ್ನು ಹೊಂದಿರುತ್ತಿದ್ದವು. ಕೆಲವು ಶವಗಳು ಸ್ಪಷ್ಟ ಗುರುತುಗಳನ್ನು ಹೊಂದಿದ್ದವು. ಅವರ ಮೇಲೆ ಹಲ್ಲೆ ನಡೆದಂತೆ ಕಾಣುತ್ತಿತ್ತು ಎಂದು ಮುಸುಕುಧಾರಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಶೇ.90ರಷ್ಟು ಮಹಿಳೆಯರ ಶವ

ಶವಗಳು ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯಸ್ಸಿನಲ್ಲಿರುತ್ತಿದ್ದವು. 'ಅವರು' ಸಮಾಧಿ ಮಾಡಿ ಎಂದು ಹೇಳುವ ಪ್ರತಿ 100 ಶವಗಳಲ್ಲಿ ಸುಮಾರು 90 ಮಹಿಳೆಯರಿದ್ದಾರೆ ಎಂದು ಮುಸುಕುಧಾರಿ ಹೇಳಿದ್ದಾನೆ.

ಸಮಾಧಿಗಳು ನಾಪತ್ತೆ!

ಇದೇ ವೇಳೆ ಎಸ್ ಐಟಿ ಶೋಧದ ಕುರಿತೂ ಮಾತನಾಡಿರುವ ಮುಸುಕುಧಾರಿ, 'ಮಳೆ, ಮಣ್ಣಿನ ಸವೆತ, ಅರಣ್ಯ ಬೆಳವಣಿಗೆ ಮತ್ತು ನಿರ್ಮಾಣ ಕಾರ್ಯಗಳಿಂದಾಗಿ ಕೆಲವು ಸಮಾಧಿ ಸ್ಥಳಗಳು ವರ್ಷಗಳಲ್ಲಿ ಕಳೆದುಹೋಗಿರಬಹುದು ಎಂದಿದ್ದಾನೆ. ಮೊದಲು ನಾವು ಗುರುತಿಸಬಹುದಾದ ಹಳೆಯ ರಸ್ತೆ ಇತ್ತು. ಆದರೆ ಜೆಸಿಬಿ ಕೆಲಸದ ನಂತರ, ನಾವು ಕೆಲವು ಸ್ಥಳಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆಗ ಕಾಡು ವಿರಳವಾಗಿತ್ತು; ಈಗ ಅದು ದಟ್ಟವಾಗಿದೆ" ಎಂದು ಹೇಳಿದ್ದಾನೆ.

ಅಂತೆಯೇ ಇಲ್ಲಿಯವರೆಗೆ, ವಿಶೇಷ ತನಿಖಾ ತಂಡ (SIT) ವ್ಯಕ್ತಿ ಗುರುತಿಸಿದ 13 ಸ್ಥಳಗಳಿಂದ ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದೆ. ಅದರಲ್ಲಿ ಒಂದು ಪುರುಷನದ್ದೂ ಸೇರಿದೆ. ಈ ಬಗ್ಗೆ ಕೇಳಿದ ಪ್ರಶ್ನಿಗೆ ಉತ್ತರಿಸಿದ ಮುಸುಕುಧಾರಿ, ಪತ್ತೆಯಾಗಿರುವ ಶವಗಳ ಸಂಖ್ಯೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. "ಜನರು ತಮಗೆ ಬೇಕಾದುದನ್ನು ಹೇಳಲಿ. ನಾವು ಅವುಗಳನ್ನು ಹೂಳಿದ್ದೇವೆ ಮತ್ತು ನಾವು ಸತ್ಯವನ್ನು ಹೇಳುತ್ತಿದ್ದೇವೆ" ಎಂದರು.

SIT ಮೇಲೆ ನಂಬಿಕೆ ಇದೆ.. ಆದರೆ

SIT ತನಿಖೆ ಬಗ್ಗೆಯೂ ಮಾತನಾಡಿರುವ ಮುಸುಕುಧಾರಿ, "ನಾನು SIT ಮೇಲೆ ನಂಬಿಕೆ ಇಡುತ್ತೇನೆ. ಆದರೆ ಅದು ನನ್ನನ್ನು ನಂಬುವಂತೆ ಕಾಣುತ್ತಿಲ್ಲ. ನನ್ನ ನೆನಪಿನ ಮೇಲೆ ಅವಲಂಬಿತವಾಗಿ ನಾನು ಅವರಿಗೆ ಸಮಾಧಿ ಸ್ಥಳಗಳನ್ನು ತೋರಿಸಲು ಬಂದಿದ್ದೇನೆ, ಆದರೆ ವರ್ಷಗಳಲ್ಲಿ ಮಣ್ಣು ಮತ್ತು ಭೂಮಿ ತುಂಬಾ ಬದಲಾಗಿದೆ. ನಿಖರವಾದ ಸ್ಥಳಗಳನ್ನು ಸೂಚಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ ಮತ್ತು ಅವಶೇಷಗಳನ್ನು ಮರುಪಡೆಯಲು JCB ವಿಶಾಲವಾಗಿ ಅಗೆಯಬೇಕು. 13ನೇ ಸ್ಥಳ ಸೇರಿದಂತೆ ಇನ್ನೂ ನಾಲ್ಕರಿಂದ ಐದು ಸ್ಥಳಗಳನ್ನು ಹುಡುಕಬೇಕಾಗಿದೆ. SIT ನನ್ನೊಂದಿಗಿದ್ದ ಇತರರನ್ನು ಕರೆಯಲಿ. ಎಲ್ಲರೂ ಸತ್ಯವನ್ನು ಮಾತನಾಡಬೇಕು. ಎಲ್ಲರನ್ನೂ ಕರೆದರೆ, ಪ್ರಕ್ರಿಯೆಯು ಸುಲಭ ಮತ್ತು ವೇಗವಾಗಿರುತ್ತದೆ" ಎಂದಿದ್ದಾರೆ.

ಸೌಜನ್ಯ ಕೇಸ್ ಬಗ್ಗೆಯೂ ಮಾಹಿತಿ?

ಇನ್ನು ಇಡೀ ಪ್ರಕರಣದ ಕೇಂದ್ರ ಬಿಂದುವಾಗಿರುವ 2012ರಲ್ಲಿ ಧರ್ಮಸ್ಥಳದ ಬಳಿ 17 ವರ್ಷದ ಸೌಜನ್ಯಳ ಕೊಲೆ ಪ್ರಕರಣದ ಬಗ್ಗೆಯೂ ಮುಸುಕುಧಾರಿ ಮಾತನಾಡಿದ್ದು, 'ಆ ರಾತ್ರಿ ತಾನು ರಜೆಯಲ್ಲಿದ್ದೆ. ಆಕೆ ಕೊಲೆಯಾದ ರಾತ್ರಿ ನಾನು ಎಲ್ಲಿದ್ದೇನೆ ಎಂದು ಕೇಳುವ ಕರೆ ನನಗೆ ಬಂದಿತು. ನಾನು ರಜೆಯ ಮೇಲೆ ನನ್ನ ಊರಿನಲ್ಲಿದ್ದೇನೆ ಎಂದು ಹೇಳಿದೆ. ರಜೆಯಲ್ಲಿದ್ದಕ್ಕಾಗಿ ಅವರು ನನಗೆ ಕರೆ ಮಾಡಿದರು. ಮರುದಿನ, ನಾನು ಕೊಲೆಯಾದ ಹುಡುಗಿಯ ಶವವನ್ನು ನೋಡಿದೆ" ಎಂದು ಅಂದಿನ ಘಟನೆ ನೆನಪಿಸಿಕೊಂಡರು.

ಕನಸಿನಲ್ಲಿ ಅಸ್ತಿಪಂಜರಗಳು!

ಇದೇ ವೇಳೆ ತಾನೇಕೆ ಸಾಕ್ಷಿಯಾಗಲು ನಿರ್ಧರಿಸಿದೆ ಎಂಬುದನ್ನೂ ಹೇಳಿರುವ ಮುಸುಕುಧಾರಿ, 'ನನ್ನ ಕನಸಿನಲ್ಲಿ ಅಸ್ತಿಪಂಜರಗಳು ಬರುತ್ತಿತ್ತು. ನನ್ನಲ್ಲಿ ತಪ್ಪಿತಸ್ಥ ಭಾವನೆ ಇತ್ತು. ಇದೇ ಕಾರಣಕ್ಕೆ ನಾನು ನಾನು ಹಿಂತಿರುಗಿದೆ. ಹಲವಾರು ಗುರುತಿಸಲಾಗದ ಶವಗಳನ್ನು ಸಮಾಧಿ ಮಾಡಿದ ಹೊರೆ ಕಾಡುತ್ತಿತ್ತು. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ನಾನು ತೋರಿಸಲು ಬಯಸುತ್ತೇನೆ. ನನಗೆ ಓಡಿ ಹೋಗಲು ಯಾವುದೇ ಕಾರಣವಿಲ್ಲ. ನಾನು ಇದನ್ನು ಮುಗಿಸಿ ನನ್ನ ಕುಟುಂಬಕ್ಕೆ ಹಿಂತಿರುಗಲು ಬಯಸುತ್ತೇನೆ" ಎಂದು ಹೇಳಿದ್ದಾನೆ.

ದೇವಾಲಯಕ್ಕೆ ಕಳಂಕ ತರುವುದು ನನ್ನ ಉದ್ದೇಶ ಅಲ್ಲ

ದೇವಾಲಯಕ್ಕೆ ಕಳಂಕ ತರುವ ಆರೋಪದ ಕುರಿತು ಮಾತನಾಡಿದ ಮುಸುಕುಧಾರಿ, 'ದೇವಾಲಯಕ್ಕೆ ಕಳಂಕ ತರುವುದು ನನ್ನ ಉದ್ದೇಶ ಅಲ್ಲ, ಶವಗಳನ್ನು ಪತ್ತೆಹಚ್ಚುವುದು ಮತ್ತು ಅಂತಿಮ ವಿಧಿವಿಧಾನಗಳನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನನ್ನ ಉದ್ದೇಶ. ನಾನು ಕಳ್ಳತನ ಮಾಡಿ ಬದುಕಬೇಕಾದರೆ, ನಾನು ದೇವಾಲಯದಲ್ಲಿ ಏಕೆ ಕೆಲಸ ಮಾಡಬೇಕು ಮತ್ತು ಸೇವೆ ಮಾಡಬೇಕು? ನಾನು ಹಿಂದೂ, ಪರಿಶಿಷ್ಟ ಜಾತಿಗೆ ಸೇರಿದವನು" ಎಂದು ಹೇಳಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ಸರ್ಕಾರ ವಿರುದ್ಧ ಸೋನಮ್ ವಾಂಗ್‌ಚುಕ್ ಪತ್ನಿಯಿಂದ ಕಿರುಕುಳದ ಆರೋಪ: ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ, ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

SCROLL FOR NEXT