ಕೊಪ್ಪಳ: ಆಗಸ್ಟ್ 3ರಂದು ರಾತ್ರಿ ಕೊಪ್ಪಳದ ಮಸೀದಿಯೊಂದರ ಮುಂಭಾಗ 27 ವರ್ಷದ ಗವಿಸಿದ್ದಪ್ಪ ನಾಯಕ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಪ್ಪಳ ಠಾಣೆ ಪೊಲೀಸರು ಕೊಲೆಯಾದ ಗವಿಸಿದ್ದಪ್ಪ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಗವಿಸಿದ್ದಪ್ಪ ಹತ್ಯೆಗೆ ಕಾರಣ ಎನ್ನಲಾದ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೃತ ಗವಿಸಿದ್ದಪ್ಪ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿಯ ತಾಯಿ ಗವಿಸಿದ್ದಪ್ಪನ ಹತ್ಯೆಯಲ್ಲಿ ನನ್ನ ಮಗಳ ಪಾತ್ರವಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ಬಳಿಕ ದೂರು ದಾಖಲಿಸಿದ್ದರು. ಮುಸ್ಲಿಂ ಬಾಲಕಿ ಜೊತೆಗಿನ ಪ್ರೀತಿ ಹಿನ್ನೆಲೆಯಲ್ಲಿ ಸಾದಿಕ್ ಎಂಬಾತ ಗವಿಸಿದ್ದಪ್ಪನನ್ನು ಮಸೀದಿ ಮುಂದೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.