ಹೊಸಪೇಟೆ: ತುಂಗಭದ್ರಾ ಅಣೆಕಟ್ಟಿನ ಏಳು ಕ್ರೆಸ್ಟ್ ಗೇಟ್ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿಕೆ ನೀಡಿದ್ದು ಈ ಹೇಳಿಕೆ ಸ್ಥಳೀಯ ರೈತರು ಮತ್ತು ಜಲಾನಯನ ಪ್ರದೇಶದ ನಿವಾಸಿಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ.
ಸಚಿವರ ಹೇಳಿಕೆ ಬಳಿಕ ಅಣೆಕಟ್ಟಿನ ಸ್ಥಿತಿಗತಿಯನ್ನು ನಿರ್ಣಯಿಸಲು ತಜ್ಞರ ತಂಡವನ್ನು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ.
ಇದೀಗ ಅಧಿಕಾರಿಗಳು 24 ಗಂಟೆಗಳ ಒಳಗೆ ಹೊರಹರಿವನ್ನು 40,000 ಕ್ಯೂಸೆಕ್ಗಳಿಂದ ಸುಮಾರು 90,000 ಕ್ಯೂಸೆಕ್ಗಳಿಗೆ ಹೆಚ್ಚಿಸಿದ್ದು, ಸಂಭವನೀಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆ ಸ್ಥಳೀಯರಲ್ಲಿ ಕಳವಳವನ್ನು ಉಂಟುಮಾಡಿದ್ದು, ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮಗಳ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಕ್ರೆಸ್ಟ್ ಗೇಟ್ ಸಂಖ್ಯೆ 19 ರ ಸರಪಳಿ ತುಂಡಾಗಿ ಗೇಟ್ ಮುರಿದು ನದಿಗೆ ಬಿದ್ದಿತ್ತು. ಇದೀಗ ಇದೇ ರೀತಿಯ ಪರಿಸ್ಥಿತಿ ಕುರಿತು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ತಂಗಡಗಿ, ಏಳು ಗೇಟ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಗೇಟ್ಗಳು ಬೆಂಡ್ ಆಗಿದ್ದು, ಅವುಗಳನ್ನು ಮೇಲೆತ್ತಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಎಂಬ ಮೂರು ನದಿ ತೀರದ ರಾಜ್ಯಗಳಲ್ಲಿ ಭಯ ಹುಟ್ಟುಹಾಕಿದೆ, ಇಲ್ಲಿನ ಸಾವಿರಾರು ರೈತರು ಅಣೆಕಟ್ಟನ್ನು ಅವಲಂಬಿಸಿದ್ದು, ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಪದೇ ಪದೇ ಮನವಿ ಮಾಡಿದರೂ ಸಕಾಲದಲ್ಲಿ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ತುಂಗಭದ್ರಾ ಅಣೆಕಟ್ಟು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ತಜ್ಞರ ತಂಡದ ಭೇಟಿ ನಿಯಮಿತ ತಪಾಸಣೆಯ ಭಾಗವಾಗಿದೆ. ಸಿಡಬ್ಲ್ಯೂಸಿ ಸೂಚನೆಗಳ ಪ್ರಕಾರ ಎಲ್ಲಾ 33 ಗೇಟ್ಗಳ ಬಲವನ್ನು ಸಹ ಪರಿಶೀಲಿಸುತ್ತಿದ್ದೇವೆ. ಭಯಪಡುವ ಅಗತ್ಯವಿಲ್ಲ. ಪರ್ಯಾಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ನಡುವೆ ನದಿಯಿಂದ ದೂರವಿರಲು, ನೀರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ತಪ್ಪಿಸಲು ಮತ್ತು ಅಗತ್ಯವಿದ್ದರೆ ಗೊತ್ತುಪಡಿಸಿದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡ ಗುರುಲಿಂಗ ಜಿ ಅವರು ಮಾತನಾಡಿ "ಸಚಿವ ಶಿವರಾಜ್ ತಂಗಡಗಿ ಅವರು ತಿಳಿದೋ ತಿಳಿಯದೆಯೋ ಸತ್ಯವನ್ನು ಹೇಳಿರಬಹುದು, ಆದರೂ ಯಾವುದೇ ನಾಯಕರೂ ಈ ಬಗ್ಗೆ, ಜನರ ಸುರಕ್ಷತೆ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಜ್ಞರ ಶಿಫಾರಸುಗಳಂತೆ ಅಣೆಕಟ್ಟಿನ ಒಟ್ಟು 105 ಟಿಎಂಸಿ ಸಾಮರ್ಥ್ಯದಲ್ಲಿ 30 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ 70 ಟಿಎಂಸಿ ಮಾತ್ರ ಲಭ್ಯವಿದೆ, ಅದು ಸಾಕಾಗುವುದಿಲ್ಲ. ಇದಲ್ಲದೆ, 90,000 ಕ್ಯೂಸೆಕ್ಗಳಿಗೂ ಹೆಚ್ಚು ನೀರು ಬಿಡುಗಡೆ ಮಾಡುವುದರಿಂದ ಈಗಾಗಲೇ ಕಂಪ್ಲಿ, ಗಂಗಾವತಿ ಮತ್ತು ಸಿರುಗುಪ್ಪದಲ್ಲಿ ಸುಮಾರು 2,000 ಹೆಕ್ಟೇರ್ ಭತ್ತದ ಗದ್ದೆಗಳು ಜಲಾವೃತ್ತಗೊಂಡಿದೆ ಎಂದು ಕಿಡಿಕಾರಿದ್ದಾರೆ.