ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸದನದಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದೂ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಲುಪಲಿ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಹೇಳಿದ್ದು, ಈ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದಲ್ಲಿ ಆರ್ಎಸ್ಎಸ್ ಗೀತೆ ಹಾಡಿದ ವಿಷಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಉತ್ತರಿಸಬೇಕು. ಇದಕ್ಕೆ ನಾನು ಏನೂ ಹೇಳಲು ಆಗಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕು. ಇದು ನಮ್ಮ ಮಟ್ಟದಲ್ಲಿ ಚರ್ಚೆ ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಏನು ನಡೆಯುತ್ತದೆ ಎಂದು ಹೈಕಮಾಂಡ್ ಗಮನಕ್ಕೆ ಬರಲ್ಲ. ಕೆಲವು ವಿಷಯ ಮಾತ್ರ ರಾಹುಲ್ ಗಾಂಧಿ ಅವರಿಗೆ ತಲುಪುತ್ತವೆ, ಮತ್ತೆ ಕೆಲವು ತಲುಪುವುದೇ ಇಲ್ಲ. ಎಲ್ಲ ವಿಷಯಗಳನ್ನೂ ಮುಟ್ಟಿಸುವ ಕೆಲಸವನ್ನು ನಾಯಕರು ಮಾಡಬೇಕು ಎಂದು ಹೇಳಿದರು.
ರಾಜಣ್ಣ ಹೇಳಿಕೆ ತಿರುಚಿ, ಪಕ್ಷದ ಹೈಕಮಾಂಡ್ಗೆ ಹೇಳುವ ಪ್ರಯತ್ನ ಆಗಿದೆ. ಹೀಗಾಗಿ, ರಾಜಣ್ಣ ಅವರು ದೆಹಲಿಗೆ ಹೋಗಿ ಹೈಕಮಾಂಡ್ಗೆ ಮನವರಿಕೆ ಮಾಡಬೇಕು. ಡಿ.ಕೆ.ಶಿವಕುಮಾರ್ ಬಗ್ಗೆ ಹೈಕಮಾಂಡ್ ಮೃಧು ಧೋರಣೆ ತಾಳಿದೆ, ನಮಗೊಂದು ನ್ಯಾಯ, ಅವರಿಗೊಂದು ನ್ಯಾಯನಾ ಎಂದು ಮಾಜಿ ಸಚಿವ ರಾಜಣ್ಣ ಪ್ರಶ್ನಿಸಿದ್ದಾರೆ. ಇದು, ನಮ್ಮ ವ್ಯಾಪ್ತಿಗೆ ಬರಲ್ಲ. ಅದನ್ನೆಲ್ಲ ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸಬೇಕು.
ಮಾಜಿ ಸಚಿವ ರಾಜಣ್ಣ ವಿಷಯದಲ್ಲಿ ಪಕ್ಷದ ಹೈಕಮಾಂಡ್ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿಯವರು ಹಾಗೂ ಸ್ವತಃ ರಾಜಣ್ಣ ಮಾಡಬೇಕು ಎಂದು ತಿಳಿಸಿದರು.