ಡಿಜಿಟಲ್ ಇ-ಸ್ಟ್ಯಾಂಪ್ 
ರಾಜ್ಯ

ಇ-ಸ್ಟ್ಯಾಂಪ್‌ ಹೋಯ್ತು.. 'ಡಿಜಿಟಲ್ ಇ-ಸ್ಟ್ಯಾಂಪ್‌' ಬಂತು... ಕರ್ನಾಟಕದಲ್ಲಿ ಮಹತ್ವದ ಬದಲಾವಣೆ! ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

ಛಾಪಾ ಅಥಾ ಇ-ಸ್ಟ್ಯಾಂಪ್‌ ಕಾಗದಗಳಿಗೆ ಸರ್ಕಾರ ಡಿಜಿಟಲ್ ಸ್ಪರ್ಶ ಕೊಟ್ಟಿದ್ದು, ಕಳೆದ ಅಕ್ಟೋಬರ್‌ನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ (Digital E-Stamping) ಜಾರಿಗೆ ಬಂದಿದೆ.

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಇ-ಸ್ಟ್ಯಾಂಪಿಂಗ್‌ (E-Stamp) ವ್ಯವಸ್ಥೆಗೆ ರಾಜ್ಯ ಸರ್ಕಾರ ವಿದಾಯ ಹೇಳಿದ್ದು, ಇ-ಸ್ಟ್ಯಾಂಪ್‌ ಕಾಗದಗಳಿಗೆ ಡಿಜಿಟಲ್ ಸ್ಪರ್ಶ ಕೊಟ್ಟಿದೆ.

ಕಳೆದ ಅಕ್ಟೋಬರ್‌ನಿಂದಲೇ ಕರ್ನಾಟಕದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ (Digital E-Stamping) ಜಾರಿಗೆ ಬಂದಿದ್ದು, ಇ-ಸ್ಟ್ಯಾಂಪ್ ಬದಲು ಇನ್ಮುಂದೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಗೆ ಸೂಚಿಸಲಾಗಿದೆ. ಛಾಪಾ ಅಥಾ ಇ-ಸ್ಟ್ಯಾಂಪ್‌ ಕಾಗದಗಳಿಗೆ ಸರ್ಕಾರ ಡಿಜಿಟಲ್ ಸ್ಪರ್ಶ ಕೊಟ್ಟಿದ್ದು, ಕಳೆದ ಅಕ್ಟೋಬರ್‌ನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ (Digital E-Stamping) ಜಾರಿಗೆ ಬಂದಿದೆ.

ಈ ಕುರಿತು ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, 'ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೇ ಹೆಚ್ಚು ಒತ್ತು ಕೊಡಲಾಗುತ್ತದೆ. ಹಂತಹಂತವಾಗಿ ಇ-ಸ್ಟ್ಯಾಂಪ್‌ ಗಳನ್ನು ನಿಲ್ಲಿಸಲಾಗುವುದು. ಡಿಜಿಟಲ್ ಇ ಛಾಪಾಕ್ಕೆ ಮತ್ತಷ್ಟು ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ' ಎಂದರು.

ಅಂತೆಯೇ ಈ ವ್ಯವಸ್ಥೆಯು ನಾಗರಿಕರು ಯಾವುದೇ ಏಜೆಂಟ್ ಅಥವಾ ಮಧ್ಯವರ್ತಿಯನ್ನು ಅವಲಂಬಿಸದೆ ಆನ್‌ಲೈನ್‌ನಲ್ಲಿ ಸ್ಟ್ಯಾಂಪ್ ಪೇಪರ್‌ಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. ಸಂಪೂರ್ಣ ಸ್ಟ್ಯಾಂಪಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಕಾಗದರಹಿತ ಆಡಳಿತ ಪರಿಸರವನ್ನು ಬೆಂಬಲಿಸುತ್ತದೆ. ನಾಗರಿಕರು ತಮ್ಮ ಡಿಜಿಟಲ್ ಇ-ಸ್ಟ್ಯಾಂಪ್ ಅನ್ನು ಮನೆಯಿಂದಲೇ ಉತ್ಪಾದಿಸಬಹುದು. ಸೇವೆಯು ದೇಶಾದ್ಯಂತ 24×7 ಲಭ್ಯವಿದ್ದು, ಭೌಗೋಳಿಕ ಮಿತಿಗಳನ್ನು ತೆಗೆದುಹಾಕುತ್ತದೆ ಎಂದು ಮಾಹಿತಿ ನೀಡಿದರು.

ಕರ್ನಾಟಕವು ಸಂಪೂರ್ಣ ಡಿಜಿಟಲ್ ನೋಂದಣಿಯತ್ತ ಸಾಗುತ್ತಿರುವಾಗ, ಸಂಪೂರ್ಣ ಡಿಜಿಟಲ್ ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ದುರ್ಬಲತೆಗಳನ್ನು ನಿವಾರಿಸುವುದು ಅತ್ಯಗತ್ಯವಾಗಿದೆ. ಅದರಂತೆ, ದಾಖಲೆಗಳ ಸ್ಟ್ಯಾಂಪಿಂಗ್‌ನಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಭದ್ರತೆಯನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಡಿಜಿಟಲ್ ಇ-ಸ್ಟ್ಯಾಂಪ್ (ಡಿಇಎಸ್) ವ್ಯವಸ್ಥೆಯನ್ನು ಪರಿಚಯಿಸಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ರಮ ತಡೆಗೆ ಮಹತ್ವದ ಕ್ರಮ

ಸ್ಟಾಂಪಿಂಗ್‌ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್‌ ಕೊಟ್ಟು ಉಪ ನೋಂದಣಾಧಿಕಾರಿಗಳಿಂದ ಛಾಪಾ ಕಾಗದ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯು ವರ್ಧಿತ ಭದ್ರತಾ ವೈಶಿಷ್ಟ್ಯಗಳು, ತಡೆರಹಿತ ವ್ಯವಸ್ಥೆಯ ಏಕೀಕರಣ, ಅಕ್ರಮಗಳ ನಿರ್ಮೂಲನೆ, ಸುಧಾರಿತ ಆದಾಯ ಭರವಸೆ, ವೆಚ್ಚ ಉಳಿತಾಯ ಮತ್ತು ಹೆಚ್ಚಿನ ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯ ಮೂಲಕ ಇಲಾಖೆಗೆ ಪ್ರಯೋಜನವನ್ನು ನೀಡುತ್ತದೆ.

ಸ್ಟಾಂಪ್ ವಿಷಯವು ದಾಖಲೆಯ ಭಾಗವಾಗುತ್ತದೆ, ದುರುಪಯೋಗವನ್ನು ತಡೆಯುತ್ತದೆ ಮತ್ತು ದೃಢೀಕರಣವನ್ನು ಖಚಿತಪಡಿಸುತ್ತದೆ. ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಎಸ್‌ಸಿ (ಆಧಾರ್ ಲಭ್ಯವಿಲ್ಲದಿದ್ದರೆ) ಬಳಸಿ ದಾಖಲೆಗಳನ್ನು ಡಿಜಿಟಲ್ ಸಹಿ ಮಾಡಬಹುದು, ಇದು ಸಂಪೂರ್ಣ ಡಿಜಿಟಲ್ ಕಾರ್ಯಗತಗೊಳಿಸುವಿಕೆಯನ್ನು ಅನುಮತಿಸುತ್ತದೆ ಎಂದರು.

ನೋಂದಣಿಯಾಗದ ಅಗ್ರಿಮೆಂಟ್‌ಗಳಿಗೂ ಡಿಜಿಟಲ್ ಇ ಸ್ಟ್ಯಾಂಪ್‌ ಅನ್ವಯಿಸಲಿದೆ. ಛಾಪಾ ಕಾಗದ ತೆಗೆದುಕೊಳ್ಳಲು ಅವುಗಳನ್ನು ಮಾರಾಟ ಮಾಡುವ ಸ್ಥಳಗಳಿಗೆ ಜನ ಹೋಗಬೇಕಾಗಿತ್ತು. ಈಗ ಮನೆಯಲ್ಲಿ ಕೂತು ಛಾಪಾ ಕಾಗದ ಖರೀದಿ ಮಾಡಬಹುದು. ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಇದು ಪೂರ್ತಿ ಆನ್‌ಲೈನ್ ನಲ್ಲಿ ಭದ್ರತೆಯಲ್ಲಿರುತ್ತೆ. ಈ ಮೊದಲು ಕಳೆದು ಹೋದರೆ ದಾಖಲೆ ಇರುತ್ತಿರಲಿಲ್ಲ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡ್ರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರಲಿದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದರು.

ಎಲ್ಲಾ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶ ಇದೆ. ನಂಬರ್, ಕ್ಯೂರ್ ಕೋಡ್ ಇರುತ್ತದೆ. ಡಿಜಿಟಲ್ ಛಾಪಾ ಕಾಗದದ ಫೀಸ್ ಕೂಡ ಹೆಚ್ಚಾಗುವುದಿಲ್ಲ. ಆಧಾರ್ ಕೊಟ್ಟು ಒಟಿಪಿ ಬಂದ ನಂತರ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತೆ ಅವರು ಆಧಾರ್ ಕೊಟ್ಟು ಒಟಿಪಿ ಬಂದ್ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತೆ. ಸರ್ಕಾರವು ಶೀಘ್ರದಲ್ಲೇ ರಾಜ್ಯಾದ್ಯಂತ ಡಿಜಿಟಲ್ ಇ-ಸ್ಟ್ಯಾಂಪ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಲಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಇ-ಸ್ಟ್ಯಾಂಪ್ ಕುರಿತು

ಇದಕ್ಕೂ ಮೊದಲು, ನಾಸಿಕ್ ಸೆಕ್ಯುರಿಟಿ ಪ್ರೆಸ್‌ನಲ್ಲಿ ಭೌತಿಕ ಸ್ಟಾಂಪ್ ಪೇಪರ್‌ಗಳನ್ನು ಮುದ್ರಿಸಿ ಪರವಾನಗಿ ಪಡೆದ ಮಾರಾಟಗಾರರ ಮೂಲಕ ಪೂರೈಸಲಾಗುತ್ತಿತ್ತು. ನಕಲಿ ಮತ್ತು ಮರುಬಳಕೆ ಮಾಡಲಾದ ಸ್ಟಾಂಪ್ ಪೇಪರ್‌ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ವಂಚನೆಯನ್ನು ಬಹಿರಂಗಪಡಿಸಿದ ತೆಲಗಿ ಹಗರಣದ ನಂತರ - ರಾಜ್ಯವು ಭೌತಿಕ ಸ್ಟಾಂಪ್ ಪೇಪರ್‌ಗಳನ್ನು ನಿಲ್ಲಿಸಿತು ಮತ್ತು ಭದ್ರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ಕಾರ್ಯವಿಧಾನಗಳನ್ನು ಪರಿಚಯಿಸಿತು. ತರುವಾಯ, ರಾಜ್ಯಾದ್ಯಂತ ಇ-ಸ್ಟ್ಯಾಂಪ್ ಪೇಪರ್‌ಗಳನ್ನು ನೀಡಲು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL) ಅನ್ನು ನೇಮಿಸಲಾಯಿತು. ಆದರೆ ನಕಲುಗಳು, ತಪ್ಪು ವರ್ಗೀಕರಣ ಮತ್ತು ಸ್ಟಾಂಪ್ ಡ್ಯೂಟಿ ವಂಚನೆಯಂತಹ ಸವಾಲುಗಳು ಮುಂದುವರೆದವು ಎಂದು ಕೃಷ್ಣ ಬೈರೇಗೌಡ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿಕ್ಕಪೇಟೆ ಮಾಜಿ ಶಾಸಕ ಆರ್ ವಿ ದೇವರಾಜ್ ನಿಧನ

ಆರ್ ವಿ ದೇವರಾಜ್ ನಿಧನಕ್ಕೆ ಗಣ್ಯರ ಸಂತಾಪ

ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಹೃದಯಾಘಾತ, ಮಾರ್ಗ ಮಧ್ಯೆ ಆರ್ ವಿ ದೇವರಾಜ್ ಗೆ ಆಗಿದ್ದೇನು?

ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯ: ಕೇಂದ್ರ ಆದೇಶ

ಆಗ ಧನುಷ್.. ಈಗ ಶ್ರೇಯಸ್ ಐಯ್ಯರ್?; ಬಾಯ್ ಫ್ರೆಂಡ್ ಊಹಾಪೋಹ ಕುರಿತ ಕೊನೆಗೂ ಮೌನ ಮುರಿದ ನಟಿ Mrunal Thakur!

SCROLL FOR NEXT