ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿಯವರ ಭರವಸೆ ಬಳಿಕ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಮುಷ್ಕರದಿಂದ ಹಿಂದೆ ಸರಿದಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್ ವರಲಕ್ಷ್ಮಿ ಅವರು ಮಾತನಾಡಿ, ಮುಷ್ಕರವನ್ನು ಕೈಬಿಟ್ಟು ದೆಹಲಿ ಬಂದು ಮಾತುಕತೆ ನಡೆಸುವಂತೆ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಇನ್ನೂ ಯಾವುದೇ ಭರವಸೆಗಳನ್ನು ನೀಡಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಗಡುವು ನೀಡಲು ನಾವು ದೆಹಲಿಗೆ ಹೋಗುತ್ತೇವೆಂದು ಹೇಳಿದ್ದಾರೆ.
ಅಂಗನವಾಡಿ ಘಟಕ ವೆಚ್ಚ ಹೆಚ್ಚಳ ಮಾಡಿ, ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. ಆದರೆ, 2018ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2,700 ರೂ. ಸಹಾಯಕಿಯರಿಗೆ 1,350 ರೂ. ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ. ಕನಿಷ್ಠವೇತನವನ್ನೂ ನೀಡುತ್ತಿಲ್ಲ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಭೌತಿಕ ಗುರುತು ವ್ಯವಸ್ಥೆ (ಎಫ್ಆರ್ಎಸ್) ರದ್ದು ಮಾಡಬೇಕು. ಇಲ್ಲದಿದ್ದರೆ ಎಫ್ಆರ್ಎಸ್ ಇರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವೈಫೈ ವ್ಯವಸ್ಥೆ ಅಳವಡಿಸಬೇಕು. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಗೆ ಬಳಸಬಾರದು. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಕಾರ್ಯಕರ್ತೆಯರು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ, ಪಿಎಫ್ ವ್ಯವಸ್ಥೆಯಿದೆ. ನಿಗದಿತ ವೇತನ ನೀಡಲಾಗುತ್ತಿದೆ. ಆದರೆ, ದೇಶಾದ್ಯಂತ 64 ಲಕ್ಷ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯ ನೀಡದಿರುವುದು ಖಂಡನೀಯ. ಅಲ್ಲದೆ, ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ಕಾಯಂಗೊಳಿಸದೇ ಶೋಷಣೆ ಮಾಡಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಚಿಂಚೋಳಿಯ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಬಾಯಿ (45) ಅವರು ಮಾತನಾಡಿ, ನಾನು ತಿಂಗಳಿಗೆ 12,000 ರೂ. ವೇತನ ಪಡೆಯುತ್ತಿದ್ದೇನೆ. ಮುಷ್ಕರ ಆರಂಭವಾದ ಬಳಿಕ ಎರಡು ದಿನಗಳ ರಾಜ್ಯದಾದ್ಯಂತ ಅಂಗನವಾಡಿ ಸೇವೆಗಳು ಮತ್ತು ಮಧ್ಯಾಹ್ನ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮತ್ತು ನಮ್ಮ ಉದ್ಯೋಗಗಳನ್ನು ಖಾಯಂಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.
ಕಲಬುರಗಿಯ ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆ ಲಕ್ಷ್ಮಿ (48) ಅವರು ಮಾತನಾಡಿ, ನನಗೆ 4,700 ರೂ. ಸಂಬಳ ನೀಡಲಾಗುತ್ತಿದೆ, ಇದು ಬಹಳ ಕಡಿಮೆ. 2009 ರಿಂದಲೂ ಅದೇ ರೀತಿ ಇದೆ. ಮಾರುಕಟ್ಟೆಯಲ್ಲಿ ಎಲ್ಲಾ ಸರಕುಗಳ ಬೆಲೆಗಳು ಹೆಚ್ಚಾದಾಗ ನಾವು ಕಡಿಮೆ ವೇತನದೊಂದಿಗೆ ಏನನ್ನು ಖರೀದಿಸಲು ಸಾಧ್ಯ? ಕೇಂದ್ರ ಸರ್ಕಾರವು ನಮ್ಮ ಸಂಬಳವನ್ನು ಹೆಚ್ಚಿಸಬೇಕು ಮತ್ತು ಕನಿಷ್ಠ ವೇತನ ಕಾಯ್ದೆ, 1948 ರ ಪ್ರಕಾರ ಕನಿಷ್ಠ ವೇತನವನ್ನು ನೀಡಬೇಕು ಮತ್ತು ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಂಗನವಾಡಿಗಳು, ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ತಮ್ಮ ಕೆಲಸದ ಸಮಯವನ್ನು ನಾಲ್ಕರಿಂದ ಆರು ಗಂಟೆಗಳವರೆಗೆ ಅಧಿಕೃತವಾಗಿ ಗುರುತಿಸಬೇಕು. ನಾವು ದಿನಕ್ಕೆ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸರ್ಕಾರ ಅಧಿಕೃತವಾಗಿ ಹೇಳಿದ್ದರೂ, ನಾವು ಆರು ಗಂಟೆಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇರುತ್ತೇವೆ. ಇದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಬೇಕು. ರಾಜ್ಯಾದ್ಯಂತ ಹೆಚ್ಚಿನ ಶಾಲೆಗಳಲ್ಲಿ ಗ್ರೂಪ್ ಡಿ ಕೆಲಸಗಾರರು ಇಲ್ಲದ ಕಾರಣ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಈ ಕಾರಣಗಳಿಗಾಗಿ ಕೇಂದ್ರ ಸರ್ಕಾರವು ತಕ್ಷಣವೇ 1,000 ರೂ.ಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.