ಬೆಂಗಳೂರು: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ರಷ್ಯನ್ ಭಾಷೆಯ ಭಗವದ್ಗೀತೆಯ ಪ್ರತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವುದನ್ನು ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಶನಿವಾರ ಶ್ಲಾಘಿಸಿದ್ದಾರೆ.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ತಮ್ಮ ಸಂಬಂಧಿ ರಾಗಿಣಿ ತರೂರ್ ಶ್ರೀನಿವಾಸನ್ ಅವರೊಂದಿಗೆ 'ಎ ವಂಡರ್ಲ್ಯಾಂಡ್ ಆಫ್ ವರ್ಡ್ಸ್' ಪುಸ್ತಕದ ಕುರಿತು ಜನರೊಂದಿಗೆ ನಡೆಸಿದ ಸಂಭಾಷಣೆಯ ನಂತರ ತರೂರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಔತಣಕೂಟ ಎಂಬುದು ವಿದೇಶಗಳಿಂದ ಬರುವ ನಾಯಕರಿಗೆ ನೀಡುವ ಸೌಜನ್ಯಯುತ ನಡೆ. ನಾನು ಈ ವಿವಾದದಲ್ಲಿ ಸಿಲುಕಲು ಬಯಸುವುದಿಲ್ಲ. ಆದರೆ, ಈ ಔತಣಕೂಟದಲ್ಲಿ ವಿಪಕ್ಷ ನಾಯಕರಿರಬೇಕಿತ್ತು ಎಂಬುದು ನನ್ನ ಭಾವನೆ. ಆಗ, ಉತ್ತಮವಾಗಿರುತ್ತಿತ್ತು. ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷನಾಗಿ ನಾನು ಸಭೆಯಲ್ಲಿ ಹೆಚ್ಚಿನ ಸಮಯ ಇದ್ದೆ, ಈ ವೇಳೆ ಕೆಲವು ಆಸಕ್ತಿದಾಯಕ ಸಂಭಾಷಣೆಗಳನ್ನು ನಡೆಸಲಾಯಿತು ಎಂದು ಹೇಳಿದರು.
ವಿದೇಶಿ ಅಧ್ಯಕ್ಷರ ಗೌರವಾರ್ಥ ಔತಣಕೂಟದಲ್ಲಿ ಭಾಗವಹಿಸಲು ರಾಷ್ಟ್ರಪತಿಗಳು ಆಹ್ವಾನ ನೀಡಿದ್ದರು, ಈ ಆಹ್ವಾನವನ್ನು ನಿರಾಕರಿಸುವುದು ಸೂಕ್ತವೆಂದು ನಾನು ಭಾವಿಸಲಿಲ್ಲ, ಏಕೆಂದರೆ ನಾನು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷನಾಗಿದ್ದೇನೆಂದು ತಿಳಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಪುಟಿನ್ ಅವರಿಗೆ ಭಗವದ್ಗೀತೆ ಪ್ರತಿಯನ್ನು ಉಡುಗೊರೆಯಾಗಿ ನೀಡಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿ, 1989 ರಲ್ಲಿ 'ದಿ ಗ್ರೇಟ್ ಇಂಡಿಯನ್ ನಾವೆಲ್' ಅನ್ನು ಪ್ರಕಟಿಸಿದಾಗ, ನಾವು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎಂಬ ಕಾರಣಕ್ಕಾಗಿ ನಮ್ಮ ಮಹಾಕಾವ್ಯಗಳನ್ನು ತಿಳಿದುಕೊಳ್ಳಬಾರದು ಎಂದು ಹೇಳಬಾರದು ಎಂದು ನಾನು ಈಗಾಗಲೇ ಹೇಳಿದ್ದೇನೆ. ರಷ್ಯನ್ ಭಾಷೆಯಲ್ಲಿ ಭಗವದ್ಗೀತೆ ಪ್ರತಿಯನ್ನು ನೀಡುವುದು ಎಂದರೆ ನಮ್ಮ ನಾಗರಿಕತೆ ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ನಾವು ಕಲಿತ ಕೆಲವು ಅಗತ್ಯ ಪಾಠಗಳನ್ನು ಮತ್ತೊಂದು ಸಂಸ್ಕೃತಿಗೆ ತಿಳಿಸುವುದಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.