ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಶನಿವಾರ ರಾತ್ರಿ ಭಾರೀ ಶಬ್ಧವೊಂದು ಕೇಳಿ ಬಂದಿದ್ದು, ಭೂಮಿ ಕಂಪಿಸಿದ ಅನುಭವವೂ ಆಗಿದೆ ಎಂದು ತಿಳಿದುಬಂದಿದೆ.
ಚಿಕ್ಕಮಲ್ಲನಹೊಳೆ ಗ್ರಾಮವು ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳ ಗಡಿಭಾಗದಲ್ಲಿದ್ದು, ನಿಗೂಢ ಶಬ್ಧಕ್ಕೆ ಜನತೆ ಬೆಚ್ಚಿದಬಿದ್ದು ಮನೆ, ಇತರೆ ಸ್ಥಳಗಳಿಂದ ಹೊರಗೆ ಓಡಿ ಬಂದಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ವಿಚಿತ್ರ ಶಬ್ಧ ಕೇಳಿಸಿದ್ದು, ಕೆಲ ಮನೆಗಳಲ್ಲಿರುವ ಪಾತ್ರೆಗಳು ನೆಲಕ್ಕೆ ಬಿದ್ದಿವೆ. ಯಾವ ಕಾರಣಕ್ಕೆ ಈ ವಿಚಿತ್ರ ಶಬ್ಧ ಬಂದಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಜಗಳೂರು ತಹಸೀಲ್ದಾರ್ ಸಯ್ಯದ್ ಕಲೀಂವುಲ್ಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ. ಆದರೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಕಡೆಯಿಂದ ಸ್ಫೋಟದ ಶಬ್ದದ ಅನುಭವ ಆಗಿರುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಗ್ರಾಮಸ್ಥರು ಗೊಂದಲಕ್ಕೊಳಗಾಗುವುದು ಬೇಡ. ಸ್ಥಳಕ್ಕೆ ಗ್ರಾಮಲೆಕ್ಕಿಗರು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಜಗಳೂರು ತಾಲೂಕಿನ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ಮನವಿ ಮಾಡಿದ್ದಾರೆ.