ಬೆಂಗಳೂರು: ಅಧಿಕಾರಿಗಳು ಜನರ ಕರೆಗೆ, ಮನವಿಗೆ ಸ್ಪಂದಿಸದಿದ್ದಲ್ಲಿ ಅದು ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ, ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿರುವು ಅವರು, ಶಾಸಕರುಗಳು & ಸಾರ್ವಜನಿಕ ಹಿತದೃಷ್ಟಿಯಿಂದ ಕುಂದುಕೊರತೆಗಳನ್ನು ಚರ್ಚಿಸಲು ತುರ್ತಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಕೆಲವು ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಆ ಸಮಯದಲ್ಲಿ ಬೇರೆ ತುರ್ತು ಕೆಲಸದಲ್ಲಿ ಇದ್ದಲ್ಲಿ ಸೌಜನ್ಯಕ್ಕಾದರೂ ಮರು ದೂರವಾಣಿ ಕರೆ ಮಾಡುವಂತಹ ಪದ್ದತಿ ಹೊಂದಿರುವುದಿಲ್ಲ ಎಂದು ಶಾಸಕರುಗಳು ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಸಮಸ್ಯೆಗಳನ್ನು ಮತ್ತು ಕುಂದುಕೊರತೆಗಳನ್ನು ಪರಿಹರಿಕೊಳ್ಳುವ ಉದ್ದೇಶದಿಂದ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡಾಗ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸುವ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ.
ಒಂದು ವೇಳೆ ಆ ಸಮಯದಲ್ಲಿ ಬೇರೆ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ, ನಂತರ ಸೌಜನ್ಯಕ್ಕಾದರೂ ಮರು ದೂರವಾಣಿ ಕರೆ ಮಾಡದೇ ಇರುವ ಅಧಿಕಾರಿಗಳ ನಡೆಯು ಮಾನ್ಯ ಶಾಸಕರುಗಳಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡುವುದರ ಜೊತೆಗೆ ಆಡಳಿತ ಯಂತ್ರದ ಮೇಲೆ ವಿಶ್ವಾಸಕ್ಕೆ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತದೆ.
ಇದು ಸಂವಿಧಾನ ಪ್ರದತ್ತವಾದ ಮಾನ್ಯ ಶಾಸಕರುಗಳ ಹಕ್ಕುಚ್ಯುತಿ ವಾಪ್ತಿಗೆ ಒಳಪಡುವುದರಿಂದ ಅನಿವಾರ್ಯವಾಗಿ ಹಕ್ಕು ಬಾದ್ಯತಾ ಸಮಿತಿಗೆ ವಹಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸೇವೆಯೇ ಸರ್ಕಾರದ ಪ್ರಮುಖ ಕರ್ತವ್ಯವಾಗಿರುವ ಹಿನ್ನಲೆಯಲ್ಲಿ ಕೆಲವು ಅಧಿಕಾರಿಗಳ ಈ ನಡೆಯು ಪ್ರಶ್ನಾರ್ಹವಾಗಿದೆ. ಅಧಿಕಾರಿಗಳ ಈ ವರ್ತನೆ ಜನಪ್ರತಿನಿಧಿಗಳಿಗೆ ಹೀಗಾದರೆ ಸಾರ್ವಜನಿಕರ ಗತಿಯೇನು ಎನ್ನುವಂತಹ ಪ್ರಶ್ನೆ ಉದ್ಭವಾಗುತ್ತದೆ.
ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಗೆ ಸಮಯೋಚಿತ ಹಾಗೂ ಸಮರ್ಪಕ ಸ್ಪಂದನೆ ನೀಡುವಂತೆ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.