ಕನ್ನಡ ಮಾಧ್ಯಮ ಲೋಕದ ಹಿರಿಯ ಪತ್ರಕರ್ತ ದೊಡ್ಡ ಬೊಮ್ಮಯ್ಯ ಇಂದು ಶನಿವಾರ ನಿಧನರಾಗಿದ್ದಾರೆ.
ದೊಡ್ಡಬೊಮ್ಮಯ್ಯ ಅವರು ಸಂಜೆವಾಣಿ ಪತ್ರಿಕೆಯ ಮತ್ತು ಇಂದು ಸಂಜೆ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಆತ್ಮೀಯ ಬಳಗವನ್ನು ಗಳಿಸಿಕೊಂಡಿದ್ದ ಬೊಮ್ಮಯ್ಯ ಅವರು ನಿಧನ ಹೊಂದಿರುವುದು ಅವರ ಕುಟುಂಬ ವರ್ಗ ಮತ್ತು ಅವರ ಗೆಳೆಯರ ವಲಯದಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.
ನಿನ್ನೆಯಷ್ಟೇ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಸುದ್ದಿ ವರದಿ ಕೆಲಸ ಮುಗಿಸಿ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದ ದೊಡ್ಡಬೊಮ್ಮಯ್ಯ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಬಸ್ಸಿನಿಂದ ಇಳಿದಾಗಲೇ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಬಸ್ಸಿನಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದವರಾದ ದೊಡ್ಡಬೊಮ್ಮಯ್ಯ, ಬೆಂಗಳೂರಿನಲ್ಲಿ ಸಂಜೆವಾಣಿ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಸಹ ಅರೆಕಾಲಿಕ ವೃತ್ತಿ ಮಾಡುತ್ತಿದ್ದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು.