ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದಿನಿಂದ ನಡೆಯಲಿರುವ ಕಿರುಷಷ್ಠಿ ಮಹೋತ್ಸವಕ್ಕೆ ಅನ್ಯಧರ್ಮೀಯರನ್ನ ಆಹ್ವಾನ ನೀಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಇಂದಿನಿಂದ ಡಿ.26ರ ವರೆಗೆ ನಡೆಯಲಿರುವ ಕಿರುಷಷ್ಠಿ ಮಹೋತ್ಸವದ ಧರ್ಮಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಶಿಷ್ಟಾಚಾರದಂತೆ ಅನ್ಯಧರ್ಮೀಯರನ್ನೂ ಆಹ್ವಾನಿಸಲಾಗಿದೆ.
ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರನ್ನ ಆಹ್ವಾನಿಸಿರುವುದು ಸರಿಯಲ್ಲ, ತಕ್ಷಣ ಅದನ್ನ ತಡೆಯಬೇಕೆಂದು ಕ್ಷೇತ್ರ ಸಂರಕ್ಷಾ ವೇದಿಕೆಯಿಂದ ಕ್ಷೇತ್ರದ ಆಡಳಿತಾಧಿಕಾರಿಗೆ ಮನವಿ ನೀಡಲಾಗಿದೆ.
ಆಹ್ವಾನ ವಾಪಸ್ ಪಡೆಯದೇ ಇದ್ದರೆ ಡಿ.22 ರಂದು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ. ಕುಕ್ಕೆ ಕ್ಷೇತ್ರ ಮುಜರಾಯಿ ಇಲಾಖೆಯ ಅಧೀನದಲ್ಲಿರುವುದರಿಂದ ಸರ್ಕಾರದ ಶಿಷ್ಟಾಚಾರ ಪ್ರಕಾರ ಎಲ್ಲರನ್ನು ಆಹ್ವಾನಿಸಲಾಗಿದೆ.
ಅದರಲ್ಲಿ ಅನ್ಯಧರ್ಮಿಯರಾದ ಸ್ಪೀಕರ್ ಯು.ಟಿ.ಖಾದರ್, ಎಂಎಲ್ಸಿ ಐವನ್ ಡಿಸೋಜಾ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಕನಿಷ್ಠ ವೇತಾತ ಸಲಹಾ ಮಂಡಳಿ ಅಧ್ಯಕ್ಷ ಶಹೀದ್ ತೆಕ್ಕಿಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಜೋಕಿಂ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಶಾಲೆಟ್ ಪಿಂಟೋಗೆ ಆಹ್ವಾನ ನೀಡಲಾಗಿದೆ. ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಅನ್ಯಧರ್ಮೀಯರನ್ನು ಏಕೆ ಆಹ್ವಾನಿಸಬೇಕು ಎಂಬುದು ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.