ಮಾಜಿ ಸಿಎಂ ಜಯಲಲಿತಾಗೆ ಸೇರಿದ ವಸ್ತುಗಳ ಹಸ್ತಾಂತರ  
ರಾಜ್ಯ

Jayalalithaa ಅಕ್ರಮ ಆಸ್ತಿ ಪ್ರಕರಣ: ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳು ತಮಿಳು ನಾಡು ಸರ್ಕಾರಕ್ಕೆ ಹಸ್ತಾಂತರ!

ಸುಮಾರು 27 ಕೆಜಿ ತೂಕದ ಚಿನ್ನಾಭರಣಗಳು, ವಜ್ರಗಳು, ಪಚ್ಚೆಗಳು, ಮಾಣಿಕ್ಯಗಳು ಮತ್ತು ಬೆಳ್ಳಿ ವಸ್ತುಗಳು ಸೇರಿದಂತೆ 1,606 ವಸ್ತುಗಳನ್ನು ಅಧಿಕೃತವಾಗಿ ತಮಿಳುನಾಡು ಸರ್ಕಾರದ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಸಣ್ಣ ಚಿನ್ನದ ಪ್ರತಿಕೃತಿ, ಚಿನ್ನದ ಪೆನ್ನು, ಚಿನ್ನದ ಕತ್ತಿ ಮತ್ತು ಚಿನ್ನದ ಕೈಗಡಿಯಾರಗಳು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾದ 27 ಕೆಜಿ ಬೆಲೆಬಾಳುವ ವಸ್ತುಗಳಲ್ಲಿ ಸೇರಿವೆ. ಜಯಲಲಿತಾ ವಿರುದ್ಧ ದಾಖಲಾಗಿರುವ ಅಕ್ರಮ ಆಸ್ತಿ ಗಳಿಕೆ(DA) ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊನ್ನೆ ಶುಕ್ರವಾರ ಬೆಳಗ್ಗೆ, ಸಿಬಿಐ ಮತ್ತು ಇಡಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ. ಮೋಹನ್; ತಮಿಳುನಾಡು ಸರ್ಕಾರದ ಗೃಹ ನಿಷೇಧ ಮತ್ತು ಅಬಕಾರಿ ಇಲಾಖೆಯ ಜಂಟಿ ಕಾರ್ಯದರ್ಶಿ ಜೆ. ಅನ್ನೆ ಮೇರಿ ಸ್ವರ್ಣ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಜಯಲಲಿತಾ ಅವರಿಗೆ ಸೇರಿದ ವಸ್ತುಗಳ ಮೌಲ್ಯಮಾಪನ ಮತ್ತು ದಾಖಲಾತಿ ಪ್ರಕ್ರಿಯೆಯು ಪ್ರಾರಂಭವಾಯಿತು.

ನಿನ್ನೆ ಶನಿವಾರ ಮಧ್ಯಾಹ್ನ ಮೌಲ್ಯಮಾಪನ ಪೂರ್ಣಗೊಂಡಿತು, ಸುಮಾರು 27 ಕೆಜಿ ತೂಕದ ಚಿನ್ನಾಭರಣಗಳು, ವಜ್ರಗಳು, ಪಚ್ಚೆಗಳು, ಮಾಣಿಕ್ಯಗಳು ಮತ್ತು ಬೆಳ್ಳಿ ವಸ್ತುಗಳು ಸೇರಿದಂತೆ 1,606 ವಸ್ತುಗಳನ್ನು ಅಧಿಕೃತವಾಗಿ ತಮಿಳುನಾಡು ಸರ್ಕಾರದ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.

ನಿನ್ನೆ ಮಧ್ಯಾಹ್ನ 2.30 ರ ಸುಮಾರಿಗೆ, ಭಾರೀ ಪೊಲೀಸ್ ಭದ್ರತೆಯಲ್ಲಿ, ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಆರು ಟ್ರಂಕ್‌ಗಳನ್ನು ಖಾಸಗಿ ಲಾಜಿಸ್ಟಿಕ್ಸ್ ವಾಹನದಲ್ಲಿ ತಮಿಳುನಾಡಿಗೆ ಸಾಗಿಸಲಾಯಿತು. ಎರಡು ತಮಿಳುನಾಡು ಪೊಲೀಸ್ ವ್ಯಾನ್‌ಗಳು ಮತ್ತು ಎರಡು ಕಾರುಗಳು ವಾಹನಕ್ಕೆ ಬೆಂಗಾವಲು ನೀಡಿದವು. ತಮಿಳುನಾಡಿನಿಂದ ಒಟ್ಟು 25 ಪೊಲೀಸ್ ಸಿಬ್ಬಂದಿಯನ್ನು ಬೆಲೆಬಾಳುವ ವಸ್ತುಗಳನ್ನು ಬೆಂಗಾವಲು ಮಾಡಲು ನಿಯೋಜಿಸಲಾಗಿತ್ತು, ಕರ್ನಾಟಕ ಪೊಲೀಸರ ಬೆಂಗಾವಲು ಪಡೆ ಕರ್ನಾಟಕ-ತಮಿಳುನಾಡು ಗಡಿ ದಾಟುವವರೆಗೆ ಭದ್ರತೆ ಒದಗಿಸಿದರು.

ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶೇಷ ಸಾರ್ವಜನಿಕ ಅಭಿಯೋಜಕ ಕಿರಣ್ ಎಸ್ ಜವಲಿ, ವಸ್ತುಗಳನ್ನು ಹರಾಜು ಮಾಡಬೇಕೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಠೇವಣಿ ಇಡಬೇಕೆ ಎಂಬ ಮುಂದಿನ ಕ್ರಮಗಳ ನಿರ್ಧಾರವು ತಮಿಳುನಾಡು ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದರು. ಈ ಬೆಲೆಬಾಳುವ ವಸ್ತುಗಳ ಜೊತೆಗೆ, ವಿಚಾರಣೆಯ ಸಮಯದಲ್ಲಿ ಒಂದು ಐಷಾರಾಮಿ ಬಸ್ ನ್ನು ಸಹ ವಶಪಡಿಸಿಕೊಳ್ಳಲಾಗಿದ್ದು ನ್ಯಾಯಾಲಯವು ಅದನ್ನು ಹರಾಜು ಹಾಕಲು ನಿರ್ದೇಶಿಸಿದೆ.

ಚೆನ್ನೈ, ತಂಜಾವೂರು, ಚೆಂಗಲ್ಪಟ್ಟು, ಕಾಂಚಿಪುರಂ, ತಿರುವಲ್ಲೂರು ಮತ್ತು ತೂತುಕುಡಿ ಜಿಲ್ಲೆಗಳಲ್ಲಿ 1,526 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಆರು ಕಂಪನಿಗಳ ಅಡಿಯಲ್ಲಿ ನೋಂದಾಯಿಸಲಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ ಅಥವಾ ಸರ್ಕಾರಿ ಭೂಮಿಯಾಗಿ ಪರಿವರ್ತಿಸಲಾಗುತ್ತದೆ ಎಂದು ಅವರು ಹೇಳಿದರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾದ ನ್ಯಾಯಾಲಯದ ಆದೇಶದ ಪ್ರತಿಯ ಪ್ರಕಾರ, ಖಜಾನೆ ಪೆಟ್ಟಿಗೆಗಳಲ್ಲಿ 2,20,384 ರೂಪಾಯಿಗಳ ಹಳೆಯ ಕರೆನ್ಸಿ ನೋಟುಗಳು ಕಂಡುಬಂದಿವೆ. ಅವುಗಳನ್ನು ತಮಿಳುನಾಡು ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಒಟ್ಟು 10 ಕೋಟಿ ರೂ.ಗಳ ಸ್ಥಿರ ಠೇವಣಿ ರಶೀದಿಗಳನ್ನು ಸಹ ಹಸ್ತಾಂತರಿಸಲಾಗಿದೆ.

ಈ ಆಸ್ತಿಗಳನ್ನು ಹರಾಜು ಮಾಡುವ ಬದಲು, ತಮಿಳುನಾಡು ಸರ್ಕಾರವು ವಶಪಡಿಸಿಕೊಂಡ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಮನೆಯಿಲ್ಲದವರಿಗೆ ಮತ್ತು ಬಡವರಿಗೆ ನಿವೇಶನಗಳನ್ನು ವಿತರಿಸಲು ಅಥವಾ ಸಾರ್ವಜನಿಕ ಹರಾಜಿನಲ್ಲಿ ಮಾರಾಟ ಮಾಡಲು ಮತ್ತು ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗಾಗಿ ಬಳಸಲು ನಿರ್ಧರಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದ ವೆಚ್ಚಗಳಿಗಾಗಿ ಈ ಹಿಂದೆ ಖರ್ಚು ಮಾಡಿದ 5 ಕೋಟಿ ರೂಪಾಯಿ ಸೇರಿದಂತೆ ಕರ್ನಾಟಕ ಸರ್ಕಾರಕ್ಕೆ 13 ಕೋಟಿ ರೂಪಾಯಿಗಳನ್ನು ಮರುಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು?': ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ನಡುವೆಯೇ ಹೊಸ ಮಾರುಕಟ್ಟೆಗಳತ್ತ ಭಾರತ ಕಣ್ಣು!

ಯುವನಿಧಿಗೆ ನಿರುದ್ಯೋಗಿ ವಿದ್ಯಾರ್ಥಿಗಳ ನೋಂದಣಿ ನೋಡ್ತಿದ್ದರೆ ಆತಂಕಕಾರಿ, ಶಿಕ್ಷಣದಲ್ಲಿ ಬದಲಾವಣೆ ಅಗತ್ಯ: ವಿಟಿಯು ಉಪಕುಲಪತಿ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಹರಿಬಿಟ್ಟ ಆರೋಪಿಗಳು: ಹುಬ್ಬಳ್ಳಿ ಪೊಲೀಸರಿಂದ ಮೂವರ ಬಂಧನ!

ದಾವಣಗೆರೆ: ಮಕ್ಕಳ ಹಾದಿ ಹಿಡಿದ ಬಿಜೆಪಿ ಮುಖಂಡ; ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

SCROLL FOR NEXT