ಕೊಪ್ಪಳ: ತೊಗಲುಗೊಂಬೆಯಾಟದಲ್ಲಿ ಅದ್ವೀತಿಯ ಸಾಧನೆಗಾಗಿ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರ ನೀವಾಸಕ್ಕೆ ಮೇಘಾಲಯ ರಾಜ್ಯದ ರಾಜ್ಯಪಾಲ ಚಂದ್ರಶೇಖರ ಹೆಚ್. ವಿಜಯಶಂಕರ ಶನಿವಾರ ಭೇಟಿ ನೀಡಿದರು.
ಬಳಿಕ ಭೀಮವ್ವ ಶಿಳ್ಳೇಕ್ಯಾತರ ಅವರನ್ನು ಸನ್ಮಾನಿಸಿ, ಮೇಘಾಲಯ ರಾಜಭವನದ ಉಡುಗೊರೆ ನೀಡಿದರು. ತೊಗಲುಗೊಂಬೆಯಾಟ ಕಲೆಯ ವೈಶಿಷ್ಟತೆ, ಹಿನ್ನೆಲೆ ಮತ್ತು ಗೊಂಬೆಯಾಟ ಆಡಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು.
ಭೀಮವ್ವ ಹಾಗೂ ಅವರ ಕುಟುಂಬದವರು ಹಾಡಿದ ಹಾಡುಗಳನ್ನು ಆಲಿಸಿದ ರಾಜ್ಯಪಾಲರು, ಮೇಘಾಲಯದ ರಾಜಭವನದಲ್ಲಿ ಈ ಕಲೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಇದೇ ಕಲಾವಿದರನ್ನು ಕರೆಯಿಸಬೇಕು ಎಂದು ತಮ್ಮ ವಿಶೇಷ ಕರ್ತವ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ, ಕೊಪ್ಪಳ ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ, ಬಸವರಾಜ ದಡೆಸುಗೂರು ಅಳವಂಡಿ ಮತ್ತಿತರರು ಉಪಸ್ಥಿತರಿದ್ದರು.