ಚಿಕ್ಕಬಳ್ಳಾಪುರ: ನನ್ನ ಕೊನೆ ಉಸಿರು ಇರೋವರೆಗೂ ನನ್ನ ಜನರಿಗಾಗಿ ಕೈಲಾದ ಕೆಲಸ ಮಾಡಲು ಶಕ್ತಿ ಕೊಡು ಎಂದು ಭಗವಂತನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರಾರ್ಥಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಆದಿಚುಂಚನಗಿರಿ ಶಾಖಾ ಮಠದ ಮುಂಭಾಗದ ಸೂಲಾಲಪ್ಪನದಿನ್ನೆಯ ವೀರಾಂಜನೇಯಸ್ವಾಮಿ ದೇವಾಲಯದ ಬಳಿ ನಡೆದ ಕುಂಭಾಭಿಷೇಕ, ಬಾಲಗಂಗಾಧರನಾಥಶ್ರೀಗಳ 80ನೇ ಜಯಂತೋತ್ಸವ, ನಿರ್ಮಲಾನಂದನಾಥ ಶ್ರೀಗಳ 12ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನೊಬ್ಬ ರೈತನ ಮಗ. ಕೊನೆ ಉಸಿರು ಹೋಗುವವರೆಗೂ, ನನ್ನ ಶಕ್ತಿ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಭಾವುಕರಾದರು.
ನಾನು ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಯಾವುದೆ ಪಕ್ಷ ಯಾವುದೇ ಜಾತಿ ನಾಯಕರು ಇದ್ರೂ ಲಘುವಾಗಿ ಮಾತನಾಡಿಲ್ಲ. ರಾಜ್ಯಕ್ಕೆ ಏನಾದರೂ ಒಳ್ಳೆಯದು ಮಾಡಬೇಕೆಂಬುವುದು ನನ್ನ ಹಠ ಹಾಗೂ ಛಲ ಎಂದಿದ್ದಾರೆ. ನನ್ನ ಜನರಿಗಾಗಿ ಪಾರ್ಲಿಮೆಂಟ್ನಲ್ಲಿ ಹೋರಾಟ ಮಾಡುವ ಶಕ್ತಿ ಕೊಡು ಎಂದು ಕುಲದೇವ ಈಶ್ವರನಲ್ಲಿ ನಾನು ಯಾವಾಗಲೂ ಪ್ರಾರ್ಥಿಸುತ್ತಿದ್ದೇನೆ ಎಂದಿದ್ದಾರೆ.
ನನ್ನ ಉಸಿರು ಇರುವಾಗಲೇ ರಾಜ್ಯಕ್ಕೆ ಏನಾದ್ರೂ ಒಳ್ಳೆಯದು ಮಾಡಬೇಕು. ಕೆಂಪು ಕೋಟೆಯ ಮೇಲೆ ಒಂದು ಸಲ ಬಾವುಟ ಹಾರಿಸಿದ್ದೇನೆ ಅಂತ ಶ್ರೀಗಳು ಹೇಳ್ತಿದ್ರು. ನನ್ನ ಶಕ್ತಿ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಆಗಿದ್ರು. ಆದರೆ ಸ್ವಲ್ಪ ವ್ಯತ್ಯಾಸವಾದ ಕಾರಣ ತಕ್ಷಣ ನಾನೇ ಬಗೆಹರಿಸಿಕೊಂಡೆ ಎಂದಿದ್ದಾರೆ.