BBMP ಮುಖ್ಯ ಆಯುಕ್ತರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಏಳು ಇಡಿ ಅಧಿಕಾರಿಗಳ ತಂಡ ಕೇಂದ್ರ ಕಚೇರಿಯಲ್ಲಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ಕಚೇರಿಯಲ್ಲಿ ಶೋಧ ನಡೆಸಿದೆ. 2016ರಲ್ಲಿ ನಡೆದಿದೆ ಎನ್ನಲಾದ ಬೋರ್ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್ವೆಲ್ ವ್ಯವಹಾರದಲ್ಲಿ 960 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿತ್ತು. ಇದೇ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಇ, ಎಇಇಗಳನ್ನೂ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಈ ಹಗರಣದ ಕುರಿತಂತೆ ಪ್ರಸ್ತಾಪಿಸಿ ದೂರು ಕೂಡ ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಇಡಿ ಬಿಬಿಎಂಪಿ ಮೇಲೆ ದಾಳಿ ನಡೆಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಾಗಿ ಸರತಿಸಾಲಿನಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ಹೊಸ ಸಂಕೀರ್ಣ ಶ್ರೀ ಸಾನ್ನಿಧ್ಯವನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಇಂದು ಉದ್ಘಾಟಿಸಿದ್ದಾರೆ. 2.75 ಲಕ್ಷ ಚದರ ಅಡಿ ವಿಸ್ತೀರ್ಣದ ಸಂಕೀರ್ಣ ಎರಡು ಅಂತಸ್ತು ಹೊಂದಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಭಕ್ತರ ಅನುಕೂಲಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 16 ವಿಶಾಲ ಸಭಾ ಭವನಗಳಲ್ಲಿ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಪ್ರತಿ ಸಭಾ ಭವನದಲ್ಲಿ 800 ಮಂದಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶವಿದೆ. ಸಂಕೀರ್ಣದ ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು ಇರಿಸಲಾಗಿದೆ. ಸಂಕೀರ್ಣ ಉದ್ಘಾಟಿಸಿ ಮಾತನಾಡಿರುವ ಜಗದೀಪ್ ಧನ್ಕರ್, ಸಮಾನತೆ ತತ್ವದಡಿ ಧರ್ಮಸ್ಥಳ ಕಾರ್ಯ ನಿರ್ವಹಿಸುತ್ತಿದೆ ಎಂದು ಬಣ್ಣಿಸಿದ್ದಾರೆ. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ, ಅವರ ಪತ್ನಿ ಹೇಮಾವತಿ ಹೆಗ್ಗಡೆ, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸರ್ಕಾರದ ಸಚಿವರು ಇತ್ತೀಚಿನ ದಿನಗಳಲ್ಲಿ ಔತಣಕೂಟಗಳಿಂದಾಗಿ ಸುದ್ದಿಯಾಗುತ್ತಿದ್ದಾರೆ. ನಗರದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜ.8 ರಂದು ಖಾಸಗಿ ಹೊಟೆಲ್ ನಲ್ಲಿ ನಡೆಯಲಿರುವ ಡಿನ್ನರ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆ ನಿರೀಕ್ಷೆಯ ಬೆನ್ನಲ್ಲೇ ಈ ಸಭೆ ಆಯೋಜನೆಯಾಗಿರುವುದು ಮಹತ್ವ ಪಡೆದುಕೊಂಡಿದೆ. ದಲಿತ ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಹಮ್ಮಿಕೊಂಡ ವಿಚಾರವಾಗಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಹಿಂದೆ ಚಿತ್ರದುರ್ಗದಲ್ಲಿ ಸಮಾವೇಶ ಹಿಂದೆ ಮಾಡಿದ್ದೆವು. ಅದು ಯಶಸ್ವಿ ಆಗಿತ್ತು, ನಂತರ ನಾವು ಒಂದೆಡೆ ಸೇರಲು ಆಗಿರಲಿಲ್ಲ. ಹಾಗಾಗಿ ನಾಳೆ ಸೇರುತ್ತಿದ್ದೇವೆ ಮುಂದೆ ಸಮಾವೇಶ ಮಾಡುವ ಬಗ್ಗೆ ಔತಣಕೂಟದಲ್ಲಿ ಚರ್ಚಿಸಲಿದ್ದೇವೆ. ಸಾಮಾನ್ಯ ಔತಣಕೂಟದ ಬಗ್ಗೆ ಏಕಿಷ್ಟು ಚರ್ಚೆ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಊಟದಲ್ಲಿ ರಾಜಕೀಯ ಏಕೆ ಬೆರೆಸುತ್ತೀರಿ; ಇಲ್ಲಸಲ್ಲದ ಅರ್ಥ ಏಕೆ ಕಲ್ಪಿಸುತ್ತೀರಿ? ಎಂದು ಮಾಧ್ಯಮಗಳನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಅಖಿಲ ಭಾರತ ನ್ಯಾಯವಾದಿಗಳ ಸಂಘವು ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದು ಶ್ರೀರಾಮ ಸೇನೆಯಿಂದ ಆಯುಧ ತರಬೇತಿ ಶಿಬಿರದ ಆಯೋಜಕರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ತೊದಲಬಾಗಿ ಗ್ರಾಮದಲ್ಲಿ ಡಿಸೆಂಬರ್ 25 ರಿಂದ 29 ರ ನಡುವೆ ಶ್ರೀರಾಮ ಸೇನೆಯಿಂದ ಬಂದೂಕು ಬಳಸಿ ಐದು ದಿನಗಳ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದು ವರದಿಯಾಗಿತ್ತು.
ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದ ನಕ್ಸಲೀಯರು ನಾಳೆ ಸರ್ಕಾರಕ್ಕೆ ಶರಣಾಗಲಿದ್ದಾರೆ. ಸರ್ಕಾರದ ಮುಂದೆ ಶರಣಾಗುವ ಮೊದಲು ಆರು ಮಂದಿ ನಕ್ಸಲೀಯರು ಕೆಲವು ಬೇಡಿಕೆಗಳನ್ನು ಇಟ್ಟಿದ್ದು, ಕಾಲಮಿತಿಯೊಳಗೆ ಈಡೇರಿಸಬೇಕೆಂದು ಕೋರಿದ್ದಾರೆ. ನಕ್ಸಲರ ಶರಣಾಗತಿ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ವಿಕ್ರಮ್ ಗೌಡ ಎನ್ಕೌಂಟರ್ ನಂತರ ಉಳಿದ ನಕ್ಸಲರಿಗೆ ಶರಣಾಗಲು ಕರೆ ಕೊಟ್ಟಿದ್ದೇವೆ. ಈ ಪ್ರಕ್ರಿಯೆ ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತಿದೆ. ಶರಣಾಗತಿ ಬಳಿಕ ಅವರಿಗೆ ಕಲ್ಪಿಸಿಕೊಡಬೇಕಾದ ಅನುಕೂಲತೆಗಳ ಬಗ್ಗೆಯೂ ಪರಿಶೀಲಿಸ್ತಿದ್ದೇವೆ ಎಂದು ಹೇಳಿದ್ದಾರೆ.