ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾನುವಾರ ಬೆಳ್ಳಂಬೆಳಗ್ಗೆ ಚಳಿ ಮಧ್ಯೆ ವರುಣನ ದರ್ಶನವಾಗಿದೆ. ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಈಗ ದಟ್ಟ ಮೋಡ ಕವಿದ ವಾತಾವರಣವಿದೆ. ಇನ್ನು ಕೆಲ ದಿನಗಳವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಭಾನುವಾರ, ರಜಾ ದಿನವೆಂದು ಹೊರಗೆ ಹೋಗಲು ಯೋಜನೆ ಹಾಕಿಕೊಂಡವರು ಮಳೆ ಕಂಡು ಶಪಿಸುತ್ತಿದ್ದಾರೆ. ಜನವರಿ ತಿಂಗಳ ಚಳಿಗಾಲದಲ್ಲಿ ಮಳೆ ಬರುತ್ತಿರುವುದು ಕಂಡು ಜನ ಕಂಗಾಲಾಗಿದ್ದಾರೆ. ಬೆಂಗಳೂರಿನ ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ, ಮೆಜೆಸ್ಟಿಕ್, ವಿಧಾನಸೌಧ, ಜೆಪಿನಗರ, ರಿಚ್ಮಂಡ್ ವೃತ್ತ, ಟೌನ್ಹಾಲ್ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ.
ಅದೇ ರೀತಿ ರಾಜ್ಯದ ಕರಾವಳಿ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರಗಳಲ್ಲಿ ಕೂಡ ಇನ್ನೊಂದು ವಾರದವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತುಮಕೂರು, ವಿಜಯನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಮಳೆ ಹಾಗೂ ಮೋಡಕವಿದ ವಾತಾವರಣದ ಕಾರಣ ರಾಜ್ಯಾದ್ಯಂತ ಚಳಿಯ ಪ್ರಮಾಣ ಕಡಿಮೆಯಾಗಿದೆ.