ಬೆಂಗಳೂರು: 1998ರ ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಗುರುವಾರ ಹೇಳಿದೆ.
1998 ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದಲ್ಲಿ 58 ಜನರು ಸಾವನ್ನಪ್ಪಿ 250 ಜನರು ಗಾಯಗೊಂಡಿದ್ದರು. ಘಟನೆ ನಡೆದು ಸುಮಾರು 27 ವರ್ಷಗಳ ನಂತರ, ಕೊಯಮತ್ತೂರು ನಗರ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಕೊಯಮತ್ತೂರು ಘಟಕವು ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದೆ.
ಸಾದಿಕ್ ಕೊಯಮತ್ತೂರು ಮೂಲದವನಾಗಿದ್ದು, ರಾಜಾ, ಟೇಲರ್ ರಾಜಾ, ವಲರಂತ ರಾಜಾ, ಶಹಜಹಾನ್ ಅಬ್ದುಲ್ ಮಜೀದ್ ಮಕಂದರ್ ಮತ್ತು ಶಹಜಹಾನ್ ಶೇಖ್ ಹೀಗೆ ಹಲವು ಹೆಸರುಗಳನ್ನು ಇಟ್ಟುಕೊಂಡು ತಲೆಮರೆಸಿಕೊಂಡಿದ್ದ.
ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದೆ. ವಿಜಯಪುರದಲ್ಲಿ ಟೇಲರ್ ರಾಜಾ ಎನ್ನುವ ಹೆಸರಿನಲ್ಲಿದ್ದ ಸಾದಿಕ್ ವಾಸಿಸುತ್ತಿದ್ದ" ಎಂದು ಎಟಿಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪೊಲೀಸ್ ನೇಮಕಾತಿ ಶಾಲೆಯಲ್ಲಿ (ಪಿಆರ್ಎಸ್) ವಿಚಾರಣೆಯ ನಂತರ, ಆತನನ್ನು ಐದನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಜುಲೈ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, 'ಟೈಲರ್' ರಾಜಾ 1998 ರ ಕೊಯಮತ್ತೂರು ಬಾಂಬ್ ಸ್ಫೋಟ, 1996 ರ ಕೊಯಮತ್ತೂರಿನಲ್ಲಿ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಜೈಲು ವಾರ್ಡನ್ ಭೂಪಾಲನ್ ಸಾವು, 1996 ರಲ್ಲಿ ನಾಗೋರ್ನಲ್ಲಿ ಸಯೀತಾ ಕೊಲೆ ಪ್ರಕರಣ ಮತ್ತು 1997 ರಲ್ಲಿ ಮಧುರೈನಲ್ಲಿ ಜೈಲರ್ ಜಯಪ್ರಕಾಶ್ ಅವರ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅವರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎಸ್ಎ ಬಾಷಾ ಸ್ಥಾಪಿಸಿದ ನಿಷೇಧಿತ ಸಂಘಟನೆಯಾದ ಅಲ್-ಉಮ್ಮಾದ ಮುಂಚೂಣಿಯ ಕೇಡರ್ ಆಗಿದ್ದರು.
ದರ್ಜಿ ಮತ್ತು ಕಸೂತಿ ತಜ್ಞ ರಾಜಾ, ಉಕ್ಕಡಂನ ವಲ್ಲಲ್ ನಗರದಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದ, ಅಲ್ಲಿ ಸರಣಿ ಸ್ಫೋಟಕ್ಕಾಗಿ ಬಾಂಬ್ಗಳನ್ನು ಸಂಗ್ರಹಿಸಲಾಗಿತ್ತು. ಚುನಾವಣಾ ಸಭೆಯಲ್ಲಿ ಭಾಗವಹಿಸಲು ಕೊಯಮತ್ತೂರಿಗೆ ಬಂದಿದ್ದ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಕಣ್ಗಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ರಾಜಾ, ವಿಜಯಪುರದಲ್ಲಿ ನೆಲೆಸಿದ್ದ, ಅಲ್ಲಿ ಅವರು ಒಬ್ಬ ಮಹಿಳೆಯನ್ನು ವಿವಾಹವಾಗಿದ್ದ, ಈಗ ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಸ್ಥಳೀಯ ತರಕಾರಿ ಮಾರುಕಟ್ಟೆಯಲ್ಲಿ ಲೋಡ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಶಾಜಹಾನ್ ಎಂದು ಗುರುತಿಸಿಕೊಂಡಿದ್ದನು. ಅವರು ಇತ್ತೀಚೆಗೆ ಕೊಯಮತ್ತೂರಿನಲಿಲುರುವ ತನ್ನ ಹಳೆಯ ಸ್ನೇಹಿತನನಿನು ಭೇಟಿಯಾಗಿದ್ದ, ಅವನು ಪೊಲೀಸ್ ರಾಡಾರ್ ಮತ್ತು ತಾಂತ್ರಿಕ ಟ್ರ್ಯಾಕಿಂಗ್ ವ್ಯವಸ್ಥೆಗಳ ಅಡಿಯಲ್ಲಿದ್ದ, ಇದರಿಂದಾಗಿ ಪೊಲೀಸರು ಅವರನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಇತ್ತೀಚೆಗೆ, ಎಟಿಎಸ್, ಕೊಯಮತ್ತೂರು ನಗರ ಪೊಲೀಸರೊಂದಿಗೆ ಸಮನ್ವಯದೊಂದಿಗೆ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ವಾಂಟೆಡ್ ಆರೋಪಿಗಳಾದ ಅಬೂಬಕರ್ ಸಿದ್ದಿಕ್ ಮತ್ತು ಮೊಹಮ್ಮದ್ ಅಲಿ ಅಲಿಯಾಸ್ ಯೂನಸ್ ಅವರನ್ನು ಬಂಧಿಸಿತ್ತು.
ಆರೋಪಿಯನ್ನು ಬಂಧಿಸಿದ್ದಕ್ಕಾಗಿ ತಮಿಳುನಾಡು ಪೊಲೀಸರನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶ್ಲಾಘಿಸಿದರು. ತಂಡವು ಇತ್ತೀಚೆಗೆ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬೂಬಕರ್ ಸಿದ್ದಿಕ್ ಸೇರಿದಂತೆ ಮೂವರು ಪ್ರಮುಖ ಭಯೋತ್ಪಾದಕರನ್ನು ಬಂಧಿಸಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ . ನಮ್ಮ ದೇಶದಲ್ಲಿ ಆಂತರಿಕ ಭದ್ರತೆಯಲ್ಲಿ ತಮಿಳುನಾಡು ಪೊಲೀಸರು ಮುಂಚೂಣಿಯಲ್ಲಿದ್ದಾರೆ ಎಂದು ಮತ್ತೊಮ್ಮೆ ಸ್ಥಾಪಿಸಿದ ಎಟಿಎಸ್ ಮತ್ತು ಗುಪ್ತಚರ ಶಾಖೆಯ ಅಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.