ಬೆಂಗಳೂರು: ರಾಜ್ಯದಾದ್ಯಂತ ಜುಲೈ 12 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 55.56 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದು ಅದ್ಭುತ ಯಶಸ್ಸು ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮಂಗಳವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರೂ ಆಗಿರುವ ನ್ಯಾ. ರಾವ್, ಲೋಕ ಅದಾಲತ್ 55.56 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಜನರು ನ್ಯಾಯಾಲಯಗಳಿಗೆ ಪ್ರವೇಶಿಸುವುದನ್ನು ತಡೆಯಲಾಗಿದೆ ಎಂದು ಹೇಳಿದರು.
ಅದೇ ಸಮಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 3.11 ಲಕ್ಷ ಪ್ರಕರಣಗಳ ಇತ್ಯರ್ಥದಿಂದಾಗಿ ಸಾಕಷ್ಟು ಸಮಯ ಮತ್ತು ಮಾನವಶಕ್ತಿ ಉಳಿತಾಯವಾಯಿತು. ಆ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬೇಕಾದರೆ, 1,152 ನ್ಯಾಯಾಧೀಶರು 68 ದಿನಗಳವರೆಗೆ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ, ಕಕ್ಷಿದಾರರು ಲೋಕ ಅದಾಲತ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
'ಅದಾಲತ್ನಲ್ಲಿ ಒಟ್ಟು 1,022 ಪೀಠಗಳು ಕಾರ್ಯನಿರ್ವಹಿಸಿದ್ದು, ಅದರಲ್ಲಿ ಹೈಕೋರ್ಟ್ನ ಮೂರು ಪೀಠಗಳಲ್ಲಿ 1,182 ಪ್ರಕರಣ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿದ್ದ 3,09,995 ಪ್ರಕರಣ ಸೇರಿ ಒಟ್ಟು 3,11,177 ಬಾಕಿ ಇರುವ ಪ್ರಕರಣ ಮತ್ತು 55,56,255 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಮುಂದಿನ ರಾಷ್ಟ್ರೀಯ ಲೋಕ್ ಅದಾಲತ್ ಸೆಪ್ಟೆಂಬರ್ 13ರಂದು ರಾಜ್ಯದಾದ್ಯಂತ ನಡೆಯಲಿದೆ' ಎಂದರು.
ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸಂಬಂಧಿಸಿದವರಿಗೆ ₹2,878 ಕೋಟಿ ಪರಿಹಾರ ಕೊಡಿಸಲಾಗಿದೆ. 2,689 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪೈಕಿ 2,377 ಪ್ರಕರಣಗಳು ಐದು ವರ್ಷಗಳಿಗಿಂತ ಹಳೆಯವು, 275 ಪ್ರಕರಣಗಳು 10 ವರ್ಷಗಳಿಗಿಂತ ಹಳೆಯವು ಮತ್ತು 37 ಪ್ರಕರಣಗಳು 15 ವರ್ಷಗಳಿಗಿಂತ ಹಳೆಯವು ಎಂದು ನ್ಯಾ. ರಾವ್ ಹೇಳಿದರು.
ಅದಾಲತ್ನಲ್ಲಿ1,756 ವೈವಾಹಿಕ ಪ್ರಕರಣಗಳನ್ನು ಪರಿಹರಿಸಲಾಗಿದ್ದು, 331 ದಂಪತಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ. 4,015 ಆಸ್ತಿ ವಿಭಾಗ ದಾವೆ (ಪಾರ್ಟಿಷನ್ ಸೂಟ್), 4,961 ಮೋಟಾರು ವಾಹನ ಅಪಘಾತ ಪ್ರಕರಣಗಳು ಮತ್ತು 13,542 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (RERA) 21 ಪ್ರಕರಣಗಳನ್ನು 91.75 ಲಕ್ಷ ರೂ.ಗಳಿಗೆ, 375 ಗ್ರಾಹಕ ನ್ಯಾಯಾಲಯದ ಪ್ರಕರಣಗಳನ್ನು 406 ಕೋಟಿ ರೂ.ಗಳಿಗೆ ಇತ್ಯರ್ಥಪಡಿಸಲಾಗಿದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಒಟ್ಟು 1,510 ಪ್ರಕರಣಗಳು ಬಗೆಹರಿದಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1.75 ಕೋಟಿ ರೂ.ಗಳಿಗೆ ಅಪಘಾತ ವಿಮಾ ಕ್ಲೇಮ್, 6.56 ಕೋಟಿ ರೂ.ಗಳಿಗೆ ಚೆಕ್ ಬೌನ್ಸ್ ಪ್ರಕರಣ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40.66 ಕೋಟಿ ರೂ.ಗಳಿಗೆ ವಾಣಿಜ್ಯ ಮೊಕದ್ದಮೆಯನ್ನು ಇತ್ಯರ್ಥಪಡಿಸಲಾಗಿದೆ.