ಕಲಬುರಗಿ: ಕಲಬುರಗಿ ನಗರದ ಸರಾಫ್ ಬಝಾರ್ನಲ್ಲಿ ಜ್ಯುವೆಲರಿ ಶಾಪ್ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಅಂತರರಾಜ್ಯ ದರೋಡೆಕೋರರನ್ನ ಬಂಧಿಸಿದ್ದಾರೆ.
ಬಂಧಿತರಿಂದ 2.865 ಕೆಜಿ ಚಿನ್ನ ಹಾಗೂ 4.80 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಪಶ್ಚಿಮ ಬಂಗಾಳದ ಗೋಪಾಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಅಯೋಧ್ಯಾ ಪ್ರಸಾದ್ ಚೌಹಾಣ್(48), ದಡಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಂಗಾರ ವ್ಯಾಪಾರಿಯಾಗಿದ್ದ ಫಾರುಕ್ ಅಹಮದ್ ಮಲ್ಲಿಕ್(40) ಹಾಗೂ
ಮುಂಬೈನಲ್ಲಿ ಟೇಲರ್ ಆಗಿ ಕೆಲಸ ಮಾಡುತ್ತಿದ್ದ ಸೊಹೆಲ್ ಶೇಖ್ ಅಲಿಯಾಸ್ ಬಾದಶಾ(30) ಎಂಬ ದರೋಡೆಕೋರರನ್ನು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಜುಲೈ 11ರಂದು ನಗರದಲ್ಲಿ ಮಲ್ಲಿಕ್ ಜ್ಯುವೆಲರಿ ಶಾಪ್ನಿಂದ ಅಂದಾಜು 3 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ದರೋಡೆ ಮಾಡಿರುವ ಈ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.
ಈ ಪ್ರಕರಣವನ್ನು ಬೇಧಿಸಲು ಕಲಬುರಗಿ ಪೊಲೀಸರು, 5 ತನಿಖಾ ತಂಡಗಳನ್ನು ರಚಿಸಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿತ್ತು.
ಬ್ರಹ್ಮಪುರ ಪಿಐ ಸೋಮಲಿಂಗ, ಚೌಕ್ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ, ಅಶೋಕ್ನಗರ ಸಿಪಿಐ ಅರುಣ್ ಕುಮಾರ್, ವಿವಿ ಸಿಪಿಐ ಸುಶೀಲ್, ಶಿವಾನಂದ ವಾಲೀಕಾರ, ಬಂದೇ ನವಾಜ್ ಮತ್ತಿತರರನ್ನು ಒಳಗೊಂಡ ತನಿಖಾ ತಂಡ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಕ್ಕೆ ತೆರಳಿತ್ತು. ಈ ತಂಡ ಸೇರಿದಂತೆ ಇನ್ನುಳಿದ 4 ತಂಡಗಳ ಶ್ರಮದಿಂದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.