ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಸೋಮವಾರ ಭಾರಿ ಭದ್ರತೆಯ ನಡುವೆ ಸಾಕ್ಷಿ-ದೂರುದಾರರ ಸಮ್ಮುಖದಲ್ಲಿ ಮೃತದೇಹಗಳನ್ನು ಹೂತಿದ್ದ ಸ್ಥಳವನ್ನು ಪರಿಶೀಲನೆ ನಡೆಸಿತು.
ಪ್ರಕರಣದ ಸಾಕ್ಷಿ ಮತ್ತು ದೂರುದಾರರೂ ಆಗಿರುವ ವ್ಯಕ್ತಿಯು ಮುಖಕ್ಕೆ ಮುಸುಕು ಹಾಕಿಕೊಂಡು ತಮ್ಮ ಕಾನೂನು ಸಲಹೆಗಾರರೊಂದಿಗೆ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಬೆಳಿಗ್ಗೆ 11.30 ರ ಸುಮಾರಿಗೆ ಆಗಮಿಸಿದರು. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಒಂದು ಗಂಟೆ ವಿಚಾರಣೆ ನಡೆಸಿದ ನಂತರ, ಅವರನ್ನು ನೇತ್ರಾವತಿ ಸ್ನಾನಗೃಹದ ಬಳಿ ಕರೆದೊಯ್ಯಲಾಯಿತು. ಅಲ್ಲಿ ಅವರು ಎಫ್ಎಸ್ಎಲ್ ತಂಡ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಭೂ ದಾಖಲೆ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸ್ಥಳಗಳನ್ನು ಪರಿಶೀಲನೆಗಾಗಿ ತೋರಿಸಿದರು.
'ನಾವು ಇಂದು ಕ್ಷೇತ್ರ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಮತ್ತು ಅವರು ಹೇಳಿರುವ ಎಲ್ಲ ಸಮಾಧಿ ಮಾಡಿರುವ ಕಡೆಗಳಲ್ಲಿ ಸ್ಥಳ ಮಹಜರು ನಡೆಸುತ್ತೇವೆ' ಎಂದು ತನಿಖಾ ತಂಡದ ಅಧಿಕೃತ ಭಾಗವೊಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದೆ.
ಮೂಲಗಳ ಪ್ರಕಾರ, ದೂರುದಾರರು ತೋರಿಸಿರುವ ಆಪಾದಿತ ಸಮಾಧಿ ಸ್ಥಳಗಳನ್ನು ಗುರುತಿಸಲಾಗುತ್ತದೆ ಮತ್ತು ಸುರಕ್ಷಿತಗೊಳಿಸಲಾಗುತ್ತದೆ. ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯುವ ಮೊದಲು ಸಾಕ್ಷ್ಯಗಳನ್ನು ಹಾಳು ಮಾಡುವುದನ್ನು ತಪ್ಪಿಸಲು ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗುತ್ತದೆ.
ಎಸ್ಐಟಿ ತಂಡದ ಅಧಿಕಾರಿಗಳಾದ ಡಿಐಜಿ ಎಂಎನ್ ಅನುಚೇತ್ ಮತ್ತು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಮುಂದೆ ದೂರುದಾರರು ಶನಿವಾರ ಮತ್ತು ಭಾನುವಾರ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಕೂಡ ಭಾನುವಾರ ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ವ್ಯಕ್ತಿಗಳ ಶವಗಳನ್ನು ಹೂಳಲು ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮಾಜಿ ಪೌರ ಕಾರ್ಮಿಕ ಎಂದು ಹೇಳಲಾದ ದೂರುದಾರರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರರು ಅದಾದ ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ತಾವೇ ಹೊರತೆಗೆದಿದ್ದು ಎಂದು ಹೇಳಿಕೊಂಡ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದಾರೆ. ವಕೀಲರು ಮತ್ತು ಪಂಚ ಸಾಕ್ಷಿಗಳ ಮುಂದೆ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು. ಜುಲೈ 19 ರಂದು ಎಸ್ಐಟಿ ರಚನೆಯಾಯಿತು ಮತ್ತು ಜುಲೈ 25 ರಂದು ಸ್ಥಳೀಯ ಪೊಲೀಸರಿಂದ ಪ್ರಕರಣದ ದಾಖಲೆಗಳನ್ನು ಅಧಿಕೃತವಾಗಿ ಪಡೆಯಿತು.