ಮೈಸೂರು: ಜಾತಿ ಮರು ಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಅವರು, ಜಾತಿ ಗಣತಿ ಬದಲು ಕನ್ನಡ ಭಾಷಿಕರ ಸಮೀಕ್ಷೆ ನಡೆಸಿ ಎಂದು ಸೋಮವಾರ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಇದ್ದಂತೆ ಇಲ್ಲ. ಎರಡನೇ ಅವಧಿಯಲ್ಲಿ ಬಲಹೀನರಾಗಿದ್ದಾರೆ. ಮರು ಜಾತಿಗಣತಿ ವಿಚಾರದಲ್ಲಿ ಒಪ್ಪಿಕೊಂಡಿದ್ದಾರೆ. ನೂರಾರು ನಾಗರಹಾವುಗಳ ಮಧ್ಯೆ ಸಿದ್ದರಾಮಯ್ಯ ಸಿಲುಕಿಕೊಂಡಿದ್ದಾರೆಂದು ಕಿಡಿಕಾರಿದರು.
ಮೈಸೂರಿನಲ್ಲಿ ಅನ್ಯ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂದು ಸರ್ಕಾರ ಗಣನೆ ಮಾಡಬೇಕು. ಕನ್ನಡ ಭಾಷಿಕರು ಮತ್ತು ಪರ ಭಾಷಿಕರು ಎಷ್ಟಿದ್ದಾರೆ ಎಂದು ಲೆಕ್ಕ ಹಾಕಬೇಕು. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಕೆಆರ್ಎಸ್ನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಮತ್ತು ಕಾವೇರಿ ಆರತಿಗೆ ವಿರೋಧ ವ್ಯಕ್ತಪಡಿಸಿದ ಅವರು, ಕೆಆರ್ಎಸ್ ಜಲಾಶಯಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕೊಂದು ವಿಶೇಷ ಮಹತ್ವವಿದೆ. ಅಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣದ ಅಗತ್ಯವಿಲ್ಲ. ಕಾವೇರಿ ಆರತಿಯ ಅವಶ್ಯಕತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.