ಕೆಪಿಎಸ್ ಸಿ 
ರಾಜ್ಯ

KPSC ನೇಮಕಾತಿ ಅಕ್ರಮ ನಿಯಂತ್ರಿಸುವ ತಿದ್ದುಪಡಿ ಮಸೂದೆಗೆ ವಿಧಾನಸಭೆ ಅಂಗೀಕಾರ

1959 ರ ಕಾಯಿದೆಯಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲಾಗಿದ್ದು, ಇದು ಆಯೋಗದ ಸಭೆಗಳಿಗೆ ಅಧ್ಯಕ್ಷರು ಸೇರಿದಂತೆ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಶೇಕಡಾ 50 ರಷ್ಟು ಕೋರಂ ಅನ್ನು ಕಡ್ಡಾಯಗೊಳಿಸುತ್ತದೆ.

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ(ಕೆಪಿಎಸ್‌ಸಿ)ದ ನೇಮಕಾತಿ ಅಕ್ರಮಗಳನ್ನು ನಿಯಂತ್ರಿಸುವ ತಿದ್ದುಪಡಿ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ ಪಾಟೀಲ್ ಅವರು, ಕರ್ನಾಟಕ ಲೋಕ ಸೇವಾ ಆಯೋಗ ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.

ಈ ವೇಳೆ ಸರ್ಕಾರವು ಕೆಪಿಎಸ್ ಸಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು "ಸಮಗ್ರ ಸುಧಾರಣೆಗಳನ್ನು" ಜಾರಿಗೆ ತರಬೇಕೆಂದು ಹಲವಾರು ಸದಸ್ಯರು ಒತ್ತಾಯಿಸಿದರು.

1959 ರ ಕಾಯಿದೆಯಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲಾಗಿದ್ದು, ಇದು ಆಯೋಗದ ಸಭೆಗಳಿಗೆ ಅಧ್ಯಕ್ಷರು ಸೇರಿದಂತೆ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಶೇಕಡಾ 50 ರಷ್ಟು ಕೋರಂ ಅನ್ನು ಕಡ್ಡಾಯಗೊಳಿಸುತ್ತದೆ. ಅಲ್ಲದೆ ಆಯೋಗದ ಪರೀಕ್ಷಾ ನಿಯಂತ್ರಕರು ಹಾಗೂ ಜಂಟಿ ಪರೀಕ್ಷಾ ನಿಯಂತ್ರಕರು ಯಾರೆಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡುತ್ತದೆ.

ಇದು ಒಂದು ಸಣ್ಣ ತಿದ್ದುಪಡಿಯಾಗಿದ್ದು, ಸರ್ಕಾರವು ಹೆಚ್ಚಿನ ತಿದ್ದುಪಡಿಗಳ ಸಾಧ್ಯತೆಯನ್ನು ಪರಿಗಣಿಸುತ್ತಿದೆ. ಕೆಪಿಎಸ್‌ಸಿಗೆ "ತಕ್ಷಣದ ಶಸ್ತ್ರಚಿಕಿತ್ಸೆ" ನೀಡುವ ಗುರಿಯೊಂದಿಗೆ ಈ ಮಸೂದೆಯನ್ನು ತರಲಾಗಿದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.

`ಆಯೋಗ ಸಂಪೂರ್ಣ ಕೆಟ್ಟು ಹೋಗಿದೆ. ಈ ಸಂಸ್ಥೆ ಈಗಾಗಲೇ ಆಪರೇಷನ್ ಟೇಬಲ್ ಮೇಲಿದ್ದು, ಕೂಡಲೇ ಶಸ್ತ್ರಚಿಕಿತ್ಸೆ ಬೇಕಿದೆ. ಇಷ್ಟು ಸಣ್ಣ ತಿದ್ದುಪಡಿ ಸಾಲದು' ಎಂಬ ಅಶೋಕ್ ಅನಿಸಿಕೆಗೆ ಸಚಿವರು ಮೇಲಿನಂತೆ ನುಡಿದರು.

ಕೆಪಿಎಸ್‌ಸಿಗೆ ನಿಯಮಗಳನ್ನು ರೂಪಿಸುವಲ್ಲಿ ಸರ್ಕಾರಕ್ಕೆ ಹೆಚ್ಚಿನ ಅವಕಾಶವನ್ನು ಈ ಮಸೂದೆ ಒದಗಿಸುತ್ತದೆ. ಈ ಮಸೂದೆ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಆಯೋಗದ ನಿರ್ಣಯಗಳನ್ನು ಸುತ್ತೋಲೆ ಮೂಲಕ ತಿಳಿಸುವುದನ್ನು ನಿರ್ಬಂಧಿಸಲಾಗಿದೆ. ನಿರ್ಣಯಗಳನ್ನು ಸುತ್ತೋಲೆ ಮೂಲಕ ತಿಳಿಸುವುದಾಗಿ ಹೇಳಿ ಅವನ್ನು ಕಳಿಸುತ್ತಲೇ ಇರಲಿಲ್ಲ. ಅಥವಾ ವಿಳಂಬ ಮಾಡಲಾಗುತ್ತಿತ್ತು. ಹೀಗಾಗಿ ಗೊಂದಲ ಅಕ್ರಮಗಳಿಗೆ ಅವಕಾಶ ಇತ್ತು. ತಿದ್ದುಪಡಿಯಿಂದಾಗಿ ಈ ಅಂಶಗಳ ಮೇಲೆ ಸರ್ಕಾರಕ್ಕೆ ಹಿಡಿತ ಬಂದಂತಾಗಿದೆ ಎಂದು ಸಚಿವರು ತಿಳಿಸಿದರು.

ಕೆಪಿಎಸ್​ಸಿ ಸುಧಾರಣೆಗಾಗಿ ಅಧ್ಯಯನ ಮಾಡಿ ಅಂತಿಮ ಪರಿಹಾರ ಕಂಡುಕೊಳ್ಳಲು ಉಭಯ ಸದನಗಳ ಜಂಟಿ ಸದನ ಸಮಿತಿ ರಚನೆ ಮಾಡಿ ಎಂದು ಸುರೇಶ್ ಕುಮಾರ್ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಚರ್ಚೆಯ ವೇಳೆ ಸರ್ಕಾರಕ್ಕೆ ಸಲಹೆ ಮಾಡಿದರು.

ಮಹಾರಾಷ್ಟ್ರ ಲೋಕಸೇವಾ ಆಯೋಗ (ಎಂಪಿಎಸ್ಸಿ) ಯುಪಿಎಸ್ಸಿಯಂತೆಯೇ ಅತ್ಯಂತ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂಬ ವರದಿಗಳಿವೆ. ಇದೇ ರೀತಿ ಬೇರೆ ರಾಜ್ಯಗಳ ಮಾದರಿಯನ್ನು ಅಧ್ಯಯನ ಮಾಡುವುದು ಸೂಕ್ತ ಎಂದು ಸುರೇಶ್​ಕುಮಾರ್ ಆಗ್ರಹಿಸಿದರು.

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಶಸ್ತ್ರಚಿಕಿತ್ಸೆಯ ಟೇಬಲ್ ಮೇಲಿರುವ ವ್ಯಕ್ತಿಗೆ ಔಷಧಿ, ಇಂಜೆಕ್ಷನ್ ಸಾಲುವುದಿಲ್ಲ. ಕೆಪಿಎಸ್ಸಿಗೆ ದೊಡ್ಡ ಶಸ್ತ್ರಚಿಕಿತ್ಸೆಯೇ ಆಗಬೇಕು. ಯುಪಿಎಸ್​ಸಿ ಮಾದರಿಯಲ್ಲಿ ಬದಲಾವಣೆ ತನ್ನಿ. ಎಲ್ಲಾ ನೇಮಕಾತಿಗಳು ನ್ಯಾಯಾಲಯದ ಮೆಟ್ಟಿಲೇರಿವೆ. ವಕೀಲರಿಗೆ ಅಷ್ಟೊಂದು ದುಡ್ಡು ಕೊಡುವ ಸಾಮರ್ಥ್ಯ ಎಲ್ಲಿಂದ ಬರುತ್ತದೋ ಗೊತ್ತಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT