ಬೆಂಗಳೂರು: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಮಳೆಯಿಂದ ಉಂಟಾಗುತ್ತಿರುವ ಅವ್ಯವಸ್ಥೆಗೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ಇದು ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್'ಗಳ ಬೆಂಗಳೂರು ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಕುಮಾರಸ್ವಾಮಿ, ಗ್ರೇಟರ್ ಬೆಂಗಳೂರು!? ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ! ರಸ್ತೆಗಳಲ್ಲಿಯೇ ಕೆರೆ, ಚರಂಡಿ! ಗುಂಡಿಗೆ ಹಿಡಿ ಮಣ್ಣಾಕುವುದಕ್ಕೂ ಬಿಡಿಗಾಸಿಲ್ಲ. ಸುರಂಗಕ್ಕೆ ಮಾತ್ರ ಸಾವಿರಾರು ಕೋಟಿ ಟೆಂಡರು! ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎಂದು ಟೀಕಿಸಿದ್ದಾರೆ.
ವಾರಕ್ಕೊಮ್ಮೆ ತೆರಿಗೆ ಬರೆ, ದರ ಏರಿಕೆ! ಜನರೆಂದರೆ ಜೀವರಹಿತ ಕಲ್ಲುಬಂಡೆಗಳೇ? ಮನಸೋಇಚ್ಛೆ ಒಡೆದು ಬಡಿದು ನುಂಗಲು!? ನಾಡು ಎಂದರೆ ಕಲ್ಲು ಬಂಡೆಗಳಲ್ಲ, ನಾಡು ಎಂದರೆ ಮನುಷ್ಯರು. ಕೆರೆಯ ನೀರನು ಕೆರೆಗೆ ಚೆಲ್ಲುತ್ತಿಲ್ಲವೇಕೆ? ಕೆರೆ ನೀರಿಗೆ ಕಮೀಷನ್ ಕೋಡಿ ಬಿದ್ದಿದೆ! ತೆರಿಗೆ ಥೈಲಿ, ಬೆಲೆ ಸುಲಿಗೆ ಹಣವೆಲ್ಲಿ? ಜಾಹೀರಾತುಗಳಲ್ಲಿ ಬಣ್ಣಬಣ್ಣವಾಗಿ ಕಾಣುವ ಬೆಂಗಳೂರು, ನೈಜವಾಗಿ ನಿಟ್ಟುಸಿರು ಬಿಡುತ್ತಿದೆ. ಏಕೆ? ಎಂದು ಪ್ರಶ್ನಿಸಿದ್ದಾರೆ.
ಬರುತ್ತಿರುವ ಆದಾಯ ಎಲ್ಲಿ ಹೋಗುತ್ತಿದೆ? ನಗರ ಜನರ ಬೆವರಿನ ಹಣ ಏನೇನಾಗುತ್ತಿದೆ? ಕಲೆಕ್ಷನ್ ಎಷ್ಟು? ವೆಚ್ಚ ಎಷ್ಟು? ಸ್ವಾಹಾ ಎಷ್ಟು? ಗುಂಡಿ ಮುಚ್ಚಲು ಗತಿ ಇಲ್ಲ. ಚರಂಡಿ ಕಸ ಎತ್ತಲು ದಿಕ್ಕಿಲ್ಲ. ನಿತ್ಯವೂ ಗುದ್ದಲಿಪೂಜೆ, ಶಂಕುಸ್ಥಾಪನೆ!! ಹೊಸ ಶೀಶೆ, ಹಳೇ ಮದ್ಯ. ಹಳೇ ಕಾಮಗಾರಿ, ಹೊಸ ಹೊಸ ಬಿಲ್ಲು! ಎಂದು ಕಿಡಿಕಾರಿದ್ದಾರೆ.