ಸಂಕಷ್ಟದಲ್ಲಿರುವ ಕುಟುಂಬ 
ರಾಜ್ಯ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಒತ್ತುವರಿಯಾಗಿದ್ದ ಅರಣ್ಯ ಭೂಮಿ ತೆರವು, 50 ವರ್ಷಗಳಿಂದ ನೆಲೆಸಿದ್ದ ಕುಟುಂಬ ಬೀದಿಪಾಲು..!

ಕಾನೂನಿನ ಪ್ರಕಾರ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿ ತೆರವು ಕಾರ್ಯವನ್ನು ಕೈಗೊಳ್ಳಲಾಯಿತು. "ಹದಿನೈದು ವಾರಗಳ ಹಿಂದೆ ಅಂತಿಮ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನ್ಯಾಯಾಲಯದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಒತ್ತುವರಿಯಾಗಿದ್ದ ಅರಣ್ಯ ಭೂಮಿಯನ್ನು ತೆರವುಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆ ಪ್ರಾರಂಭಿಸಿದ್ದು, ಇದರೊಂದಿಗೆ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಅರಸಿನಮಕ್ಕಿಯಲ್ಲಿ ಕಳೆದ 50 ವರ್ಷಗಳಿಂದ ವಾಸವಿದ್ದ ಕುಟುಂಬವೊಂದು ಬೀದಿಪಾಲಾದಂತಾಗಿದೆ.

ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಶರ್ಮಿಷ್ಠ ಅವರು ಮಾತನಾಡಿ, ಕಾನೂನಿನ ಪ್ರಕಾರ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿ ತೆರವು ಕಾರ್ಯವನ್ನು ಕೈಗೊಳ್ಳಲಾಯಿತು. "ಹದಿನೈದು ವಾರಗಳ ಹಿಂದೆ ಅಂತಿಮ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನ್ಯಾಯಾಲಯದ ತಡೆಯಾಜ್ಞೆ ತರಲು ಪ್ರಯತ್ನಿಸಿದರು, ಇದರಿಂದ ಸಮಯ ವ್ಯರ್ಥವಾಗಿದೆ. ತೆರವು ಮಾಡಿದ ದಿನದಂದು, ಅವರೇ ಮನೆಯನ್ನು ಖಾಲಿ ಮಾಡಿದರು. ತೋಟವನ್ನು ನಾಶಪಡಿಸಿದ ನಂತರ, ಅರಣ್ಯ ಇಲಾಖೆ ಸಸಿಗಳನ್ನು ನೆಟ್ಟು, ಕಂದಕಗಳನ್ನು ಅಗೆದು, ಭೂಮಿಯನ್ನು ಮರಳಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಪಿ.ಟಿ. ಜೋಸೆಫ್ ಅವರ ತಂದೆ (ಹೊರಹಾಕಿದ ಕುಟುಂಬ) ಅರಣ್ಯ ಭೂಮಿಯ ಅಕ್ರಮ ಅನುದಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು, ಆದರೆ ಅದನ್ನು ಪುತ್ತೂರು ಸಹಾಯಕ ಆಯುಕ್ತರು 2004 ರಲ್ಲಿ ರದ್ದುಗೊಳಿಸಿದರು. ಕುಟುಂಬವು 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆಂದು ಸಾಬೀತುಪಡಿಸಲು ಅವರ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಅವರ ಬಳಿ ಅನುದಾನ ರದ್ದತಿಯ ದಾಖಲೆ ಮಾತ್ರ ಇದೆ. ಇದು ಪೂರ್ಣ ಪ್ರಮಾಣದ ಅತಿಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.

ಜೋಸೆಫ್ ಅವರ ತಂದೆ 50 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನೆಲೆಸಿದ್ದರು. 1997 ರಲ್ಲಿ, ರಾಜ್ಯ ಸರ್ಕಾರವು ಅಕ್ರಮ ಸಕ್ರಮ (ಕ್ರಮಬದ್ಧಗೊಳಿಸುವಿಕೆ) ಯೋಜನೆಯಡಿ 4.9 ಎಕರೆಗಳಿಗೆ ಹಕ್ಕು ಪತ್ರವನ್ನು ನೀಡಿತ್ತು. ಆದಾಗ್ಯೂ, ಈ ಪ್ರದೇಶವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗವೆಂದು ಘೋಷಿಸಿದ ನಂತರ, ಕುಟುಂಬದ ಮಾಲೀಕತ್ವವು ವಿವಾದಕ್ಕೆ ಒಳಗಾಯಿತು.

2004 ರಲ್ಲಿ, ಇಲಾಖೆ ಹಕ್ಕು ಪತ್ರವನ್ನು ರದ್ದುಗೊಳಿಸಿತು, ಆದರೂ ಈ ಪ್ರದೇಶದಲ್ಲಿ ನಕ್ಸಲ್ ಬಿಕ್ಕಟ್ಟ ಇದ್ದು, ಕುಟುಂಬವನ್ನು ಬಲವಂತವಾಗಿ ಹೊರಹಾಕಲಾಗುವುದಿಲ್ಲ ಭರವಸೆ ನೀಡಲಾಗಿತ್ತು. ಈ ಭರವಸೆಯ ಹೊರತಾಗಿಯೂ, ಅರಣ್ಯ ಇಲಾಖೆಯು 2014 ರಲ್ಲಿ ಜೋಸೆಫ್ ಭೂಮಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಈ ಕುರಿತು ಕುಟುಂಬವು ಸಲ್ಲಿಸಿದ್ದ ಮೇಲ್ಮನವಿಗಳನ್ನು ತಿರಸ್ಕರಿಸಲಾಗಿದೆ. ಈ ನಡುವೆ ಈ ವರ್ಷ ಅಕ್ಟೋಬರ್ 11 ರಂದು ಅಂತಿಮ ನೋಟಿಸ್ ನೀಡಿ ಜಾರಿ ಮಾಡಲಾಗಿದ್ದು, ಅಕ್ಟೋಬರ್ 30 ರೊಳಗೆ ಅವರನ್ನು ಭೂಮಿ ಖಾಲಿ ಮಾಡುವಂತೆ ಸೂಚಿಸಲಾಗಿದೆ.

ಬಾಲ್ಯದಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಇಡೀ ಜೀವನವನ್ನು ಇಲ್ಲಿ ಕಳೆದಿದ್ದೇನೆ. ಸರ್ಕಾರವೇ ನಮಗೆ ಹಕ್ಕು ಪತ್ರವನ್ನು ನೀಡಿದೆ. ಈಗ, ಯಾವುದೇ ಪರಿಹಾರವಿಲ್ಲದೆ, ಅವರು ನಮ್ಮನ್ನು ಹೊರಗೆ ಹಾಕಿದ್ದಾರೆ. ನಮಗೆ ಯಾವುದೇ ಮನೆ ಅಥವಾ ಭೂಮಿ ಉಳಿದಿಲ್ಲ ಎಂದು ಕುಟುಂಬದ ಸದಸ್ಯರು ಕಣ್ಣೀರಿಟ್ಟಿದ್ದಾರೆ.

ಏತನ್ಮಧ್ಯೆ ಸಾಮಾಜಿಕ ಕಾರ್ಯಕರ್ತ ಶೇಖರ್ ಲೈಲಾ ಅವರು ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ರಾಜ್ಯ ಸರ್ಕಾರ ಅರಣ್ಯವಾಸಿಗಳನ್ನು ಬಲವಂತವಾಗಿ ಹೊರಹಾಕುವುದಿಲ್ಲ ಎಂದು ಭರವಸೆ ನೀಡಿತ್ತು. ನಕ್ಸಲ್ ಸಮಸ್ಯೆ ಉತ್ತುಂಗದಲ್ಲಿದ್ದಾಗ, ಸರ್ಕಾರವು ಕಾಡಿನೊಳಗೆ ವಾಸಿಸುವ ಜನರನ್ನು ರಕ್ಷಿಸುವ ಪ್ರತಿಜ್ಞೆ ಮಾಡಿತು. ಈಗ, ಶಾಂತಿ ಮರಳಿದಾಗ, ಅವರನ್ನು ಬೇರು ಸಹಿತ ಕಿತ್ತುಹಾಕಲಾಗುತ್ತಿದೆ. ಇದು ಅಮಾನವೀಯ. ಸರ್ಕಾರವು ತಕ್ಷಣವೇ ಪರಿಹಾರ ನೀಡಬೇಕು ಮತ್ತು ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಮಾತನಾಡಿ, ರಾಷ್ಟ್ರೀಯ ಉದ್ಯಾನವನದೊಳಗೆ 1,350 ಕುಟುಂಬಗಳು ವಾಸವಿದೆ, ಈ ಪೈಕಿ 650 ಕುಟುಂಬಗಳು ಸ್ವಯಂಪ್ರೇರಿತ ಸ್ಥಳಾಂತರ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿವೆ. ಅರಣ್ಯ ಇಲಾಖೆ ಇಲ್ಲಿಯವರೆಗೆ 350 ಕುಟುಂಬಗಳಿಗೆ ಪರಿಹಾರ ಮತ್ತು ಸ್ಥಳಾಂತರ ಮಾಡಿದೆ. ಉಳಿದ 300 ಕುಟುಂಬಗಳ ಸ್ಥಳಾಂತರ ಮತ್ತು ಪುನರ್ವಸತಿಗೆ 300 ಕೋಟಿ ರೂ.ಗಳ ಅಗತ್ಯವಿದೆ. ಇಲ್ಲಿ ವಿಚಿತ್ರ ಪರಿಸ್ಥಿತಿ ಇದೆ. ಜನರು ಹೊರಬರಲು ಉತ್ಸುಕರಾಗಿದ್ದಾರೆ, ಆದರೆ ಅವರನ್ನು ಸ್ಥಳಾಂತರಿಸಲು ಸರ್ಕಾರದ ಬಳಿ ಹಣವಿಲ್ಲ. ಈ ಕುರಿತ ಅರ್ಜಿಗಳು ದಶಕಗಳಿಂದ ಬಾಕಿ ಇವೆ ಎಂದು ಹೇಳಿದ್ದಾರೆ.

ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ ಅಡಿಯಲ್ಲಿ ಹಣ ಪಡೆಯಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆಂದು ತಿಳಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಬರೆದ ಭಾರತ: ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಮಹಿಳಾ ಪಡೆ; ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ

Bengaluru tunnel project: ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವ ಯೋಜನೆಗೆ ವಿರೋಧವೇಕೆ? ಸಿಎಂ ಸಿದ್ದರಾಮಯ್ಯ

ನನ್ನ ಮೇಲೆ ಒತ್ತಡ ಹೇರಲು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿತ್ತು : ನಿವೃತ್ತ ಸಿಜೆಐ ಸ್ಫೋಟಕ ಹೇಳಿಕೆ; ಮಾಜಿ CJI ಆರೋಪ ಯಾರ ವಿರುದ್ಧ?

ಫಲೋಡಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ಯಾತ್ರಾರ್ಥಿಗಳ ಸಾವು!

News healines 02-11-2025| ಟನಲ್ ರಸ್ತೆ: ಟನಲ್ ರಸ್ತೆ: ಅಶೋಕ್ ನೇತೃತ್ವದಲ್ಲಿ ಸಮಿತಿಗೆ ಸಿದ್ಧ-DCM; ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್

SCROLL FOR NEXT