ಬೆಂಗಳೂರು: ಕೇಂದ್ರ ಸರ್ಕಾರವು "ಕರ್ನಾಟಕದ ಗ್ಯಾರಂಟಿ ಮಾದರಿ"ಯನ್ನು ಗುರುತಿಸಿ, ರಾಜ್ಯದ ಸಬಲೀಕರಣಕ್ಕೆ ಹೆಚ್ಚಿನ ಹಣಕಾಸಿನ ಬೆಂಬಲ ಮತ್ತು ಆದಾಯದ ಸರಿಯಾದ ಪಾಲನ್ನು ಒದಗಿಸಬೇಕೆಂದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಹಣಕಾಸು ನೀತಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, "ಕರ್ನಾಟಕದ ಗ್ಯಾರಂಟಿ ಮಾದರಿಯು ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೀಯ ಮಾದರಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ಪ್ರಾದೇಶಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಸಹಕಾರಿ ಒಕ್ಕೂಟದ ಮನೋಭಾವವನ್ನು ಬಲಪಡಿಸುತ್ತವೆ" ಎಂದು ಅವರು ಹೇಳಿದರು.
ಗೃಹ ಜ್ಯೋತಿ, ಗೃಹ ಲಕ್ಷ್ಮಿಅನ್ನ ಭಾಗ್ಯ, ಯುವ ನಿಧಿ ಮತ್ತು ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ(ಶಕ್ತಿ ಯೋಜನೆ) ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಾಗಿವೆ.
"ಈ ಗ್ಯಾರಂಟಿ ಯೋಜನೆಗಳು ಜನಪ್ರಿಯ ಕೊಡುಗೆಗಳಲ್ಲ, ಬದಲಾಗಿ ನೀತಿ ತಿದ್ದುಪಡಿಗಳು ಮತ್ತು ಪುನರ್ವಿತರಣಾ ನ್ಯಾಯ ಮತ್ತು ಸಮಗ್ರ ಬೆಳವಣಿಗೆಯ ಸಾಧನಗಳಾಗಿವೆ" ಎಂದು ಅವರು ಹೇಳಿದರು.
ಈ ಯೋಜನೆಗಳ ಅನುಷ್ಠಾನಕ್ಕಾಗಿ 96,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಹಂಚಿಕೆ ಮಾಡಲಾಗಿದೆ ಮತ್ತು 2025-26 ರ ರಾಜ್ಯ ಬಜೆಟ್ನಲ್ಲಿ, ಅವುಗಳಿಗಾಗಿ 51,034 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
"ಇದರಲ್ಲಿ ಶೇ. 56.06 ಗೃಹ ಲಕ್ಷ್ಮಿಗೆ, ಶೇ. 19.79 ಗೃಹ ಜ್ಯೋತಿಗೆ, ಶೇ. 12.59 ಅನ್ನ ಭಾಗ್ಯಕ್ಕೆ, ಶೇ. 10.39 ಶಕ್ತಿ ಯೋಜನೆಗೆ ಮತ್ತು ಶೇ. 1.18 ಯುವ ನಿಧಿಗೆ" ನೀಡಲಾಗಿದೆ ಎಂದು ಸಿಎಂ ವಿವರಿಸಿದರು.
1.24 ಕೋಟಿಗೂ ಹೆಚ್ಚು ಮಹಿಳೆಯರು ಗೃಹ ಲಕ್ಷ್ಮಿ ಮೂಲಕ ಪ್ರತಿ ತಿಂಗಳು 2 ಸಾವಿರ ರೂ. ಪಡೆಯುತ್ತಾರೆ, 1.63 ಕೋಟಿ ಕುಟುಂಬಗಳು ಗೃಹ ಜ್ಯೋತಿಯಿಂದ ಪ್ರಯೋಜನ ಪಡೆಯುತ್ತಾರೆ, 4.08 ಕೋಟಿ ಜನರು ಅನ್ನ ಭಾಗ್ಯದಿಂದ ಪ್ರಯೋಜನ ಪಡೆಯುತ್ತಾರೆ ಮತ್ತು 2.84 ಲಕ್ಷ ಯುವಕರು ಯುವ ನಿಧಿ ಪಡೆಯುತ್ತಿದ್ದಾರೆ ಎಂದರು.
ಕರ್ನಾಟಕವು ಈಗ ತಲಾ ಆದಾಯದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ, ಕಳೆದ ದಶಕದಲ್ಲಿ 2013-14ರಲ್ಲಿ 1,01,858 ರೂ.ಗಳಿಂದ 2024-25ರಲ್ಲಿ 2,04,605 ರೂ.ಗಳಿಗೆ ಅಂದರೆ ಶೇ. 101 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದು ರಾಜ್ಯದ ನಿರಂತರ ಆರ್ಥಿಕ ವೇಗ ಮತ್ತು ಗ್ಯಾರಂಟಿ ಯೋಜನೆಗಳಿಂದ ನಡೆಸಲ್ಪಡುವ ಸಮಗ್ರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಸಮಗ್ರ ಆಡಳಿತಕ್ಕೆ ಮಾದರಿ ಎಂದು ಇಡೀ ಜಗತ್ತು "ಶ್ಲಾಘಿಸಿದರೆ", ವಿರೋಧ ಪಕ್ಷಗಳು ತಪ್ಪು ಮಾಹಿತಿ ಮತ್ತು ನಕಾರಾತ್ಮಕತೆಯನ್ನು ಹರಡುವಲ್ಲಿ ನಿರತವಾಗಿವೆ ಎಂದು ವಾಗ್ದಾಳಿ ನಡೆಸಿದರು.
"ಈ ಯೋಜನೆಗಳು ಸರ್ಕಾರದ ಖಜಾನೆಗೆ ಹೊರೆಯಾಗಿಲ್ಲ ಅಥವಾ ಹಣದುಬ್ಬರವನ್ನು ಹೆಚ್ಚಿಸಿಲ್ಲ. ಇದು ದಾನದ ಮಾದರಿಯಲ್ಲ, ತಳಮಟ್ಟದ ಬೆಳವಣಿಗೆಯ ಮಾದರಿ ಎಂದು ಮುಖ್ಯಮಂತ್ರಿ ಹೇಳಿದರು.
ಜಿಎಸ್ಟಿ ಮತ್ತು ಸೆಸ್ ಮೂಲಕ ರಾಜ್ಯದಿಂದ ಭಾರಿ ಆದಾಯವನ್ನು ಸಂಗ್ರಹಿಸಿದ್ದರೂ, ಕೇಂದ್ರ ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮತ್ತು ಪ್ರತಿ ವರ್ಷ 25,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನಿರಾಕರಿಸಿದೆ ಎಂದು ಆರೋಪಿಸಿದರು.
"ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಆರ್ಥಿಕ ಅನ್ಯಾಯ ಮಾಡುತ್ತಿದೆ ಮತ್ತು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದು ಭ್ರಷ್ಟ ಬಿಜೆಪಿ ಸರ್ಕಾರ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಜನರನ್ನು ಶಿಕ್ಷಿಸುವಂತಿದೆ. ನಮ್ಮ ಸರಿಯಾದ ಪಾಲು, ಅನುದಾನ ಮತ್ತು ಅನುಮೋದನೆಗಳನ್ನು ತಡೆಹಿಡಿಯಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.