ಕಾರವಾರ: ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ.
ಹೊನ್ನಾವರದಲ್ಲಿ ಬುಧವಾರ ಸರ್ದಾರ್ ವಲ್ಲಭಬಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಏಕತೆಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಗೇರಿಯವರು ಮಾತನಾಡಿದ್ದಾರೆ.
ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಜನ ಗಣ ಮನಕ್ಕೆ ಸಮನಾಗಿದೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಸಾಕಷ್ಟು ಒತ್ತಡವಿತ್ತು. ಆದರೆ, ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ಜನ ಗಣ ಮನವನ್ನು ಹಾಗೂ ರಾಷ್ಟ್ರೀಯ ಗೀತೆಯಾಗಿ ವಂದೇ ಮಾತರಂ ಅನ್ನು ರಚಿಸಿದ್ದರು. ಆದ್ದರಿಂದ ನಾವು ಎರಡೂ ರಾಷ್ಟ್ರಗೀತೆಗಳನ್ನು ಹೊಂದಿದ್ದೇವೆಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಗೀತೆ ಪ್ರೇರಣೆ ನೀಡಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳಿಂದಾಗಿ ವಂದೇ ಮಾತರಂ ಯಾವಾಗಲೂ ನಮಗೆ ಸ್ಫೂರ್ತಿ ನೀಡಿದೆ. ಈ ಗೀತೆ 150 ವರ್ಷ ಹಳೆಯದು. ವಂದೇ ಮಾತರಂ ಎಲ್ಲೆಡೆ ಪಠಿಸಲ್ಪಡಬೇಕು. ಅದು ಎಲ್ಲೆಡೆ ಪ್ರತಿಧ್ವನಿಸಬೇಕು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ತೀವ್ರ ಕಿಡಿ
ಕಾಗೇರಿಯವರ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ಮತ್ತೊಂದು ದಿನ, ಮತ್ತೊಂದು ಆರ್.ಎಸ್.ಎಸ್. ವಾಟ್ಸ್ ಆ್ಯಪ್ ಇತಿಹಾಸ ಪಾಠ! ಸಂಸದ ಕಾಗೇರಿ ಅವರು ನಮ್ಮ ರಾಷ್ಟ್ರಗೀತೆಯು 'ಬ್ರಿಟಿಷ್' ಸ್ವಾಗತಗೀತೆ ಎಂದು ಪ್ರತಿಪಾದಿಸಿದ್ದಾರೆ. ಇದು ಶುದ್ಧ ಅಸಂಬದ್ಧ ಎಂದು ಕಿಡಿಕಾರಿದ್ದಾರೆ.
'ರವೀಂದ್ರನಾಥ ಟ್ಯಾಗೋರ್ ಅವರು 1911ರಲ್ಲಿ ಭರೋತೋ ಭಾಗ್ಯೋ ಬಿಧಾತ ಎಂಬ ಸ್ತುತಿಗೀತೆಯನ್ನು ಬರೆದರು; ಅದರ ಮೊದಲ ಚರಣ 'ಜನ ಗಣ ಮನ'ವಾಯಿತು. ಇದನ್ನು ಮೊದಲು 1911ರ ಡಿಸೆಂಬರ್ 27ರಂದು ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಹಾಡಲಾಯಿತು. ರಾಜಮನೆತನಕ್ಕೆ ಗೌರವವಾಗಿ ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಇದು 'ಭಾರತ ಭಾಗ್ಯ ವಿಧಾತ'ನನ್ನು ವಂದಿಸುತ್ತದೆ ಮತ್ತು ಇದು '5ನೇ ಜಾರ್ಜ್, 6ನೇ ಜಾರ್ಜ್ ಅಥವಾ ಬೇರೆ ಯಾವುದೇ ಜಾರ್ಜ್ ಆಗಿರಲು ಸಾಧ್ಯವೇ ಇಲ್ಲ' ಎಂದು ಸ್ವತಃ ಟ್ಯಾಗೋರ್ ಅವರು 1937 ಮತ್ತು 1939 ರಲ್ಲಿ ಸ್ಪಷ್ಟಪಡಿಸಿದ್ದರು. ತಾವು ಇತಿಹಾಸವನ್ನು ಮತ್ತೆ ನೋಡಲು ಬಯಸುವುದಿಲ್ಲ ಎಂದು ಸಂಸದರು ಹೇಳುತ್ತಾರೆ. ಆದರೆ, ಪ್ರತಿಯೊಬ್ಬ ಬಿಜೆಪಿ, ಆರ್ಎಸ್ಎಸ್ ನಾಯಕರು, ಕಾರ್ಯಕರ್ತರು ಮತ್ತು 'ಸ್ವಯಂಸೇವಕರು' Rashtriya Swayamsevak Sangh (RSS) ಮುಖವಾಣಿ ಸಂಘಟನೆಯ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ ವಿಮರ್ಶಿಸಬೇಕು.
ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು ಆರೆಸ್ಸೆಸ್ ಹೊಂದಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ' ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ 'ಈ viRSS ಅನ್ನು ಗುಣಪಡಿಸಬೇಕಾಗಿದೆ' ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ ವಂದೇ ಮಾತರಂಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಮತ್ತು 'ವಂದೇ ಮಾತರಂ' ಮತ್ತು 'ಜನ ಗಣ ಮನ' ಎರಡೂ ಸಮಾನವಾಗಿವೆ ಎಂದು ಬಿಜೆಪಿ ಮುಖಂಡರು ಕಾಗೇರಿ ಪರ ವಾದಿಸಿದ್ದಾರೆ.