ಪ್ರಾತಿನಿಧಿಕ ಚಿತ್ರ 
ರಾಜ್ಯ

ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; 1.5 ಲಕ್ಷ ರೂ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ

ಆರೋಪಿ ವಿಕಾಸ್ ಕುಮಾರ್‌ ಎಂಬಾತನನ್ನು ಬಿಹಾರದ ದಶರಥಪುರ ಗ್ರಾಮದಲ್ಲಿ ಬಂಧಿಸಲಾಗಿದ್ದು, ನಂತರ ಬೆಂಗಳೂರಿಗೆ ಕರೆತರಲಾಗಿದೆ.

ಬೆಂಗಳೂರು: ನಟ ಉಪೇಂದ್ರ ಮತ್ತು ಅವರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿ, ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡುವ ಮೂಲಕ ಹಲವಾರು ಜನರಿಂದ ಹಣ ಕಿತ್ತಿದ್ದ ಆರೋಪದ ಮೇಲೆ ಬಿಹಾರದ ಸೈಬರ್ ಅಪರಾಧಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ವಿಕಾಸ್ ಕುಮಾರ್‌ ಎಂಬಾತನನ್ನು ಬಿಹಾರದ ದಶರಥಪುರ ಗ್ರಾಮದಲ್ಲಿ ಬಂಧಿಸಲಾಗಿದ್ದು, ನಂತರ ಬೆಂಗಳೂರಿಗೆ ಕರೆತರಲಾಗಿದೆ.

ಈ ಘಟನೆ ಸೆಪ್ಟೆಂಬರ್ 15 ರಂದು ನಡೆದಿದ್ದು, ಪ್ರಿಯಾಂಕಾ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಕೆಲವು ವಸ್ತುಗಳನ್ನು ಆರ್ಡರ್ ಮಾಡಿದ್ದರು. ಅದೇ ವೇಳೆಗೆ ಕರೆ ಮಾಡಿದ್ದ ವ್ಯಕ್ತಿಯು ಅವರ ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್ ಅನ್ನು ಕಳುಹಿಸಿದ್ದಾನೆ. ಅದನ್ನು ಕ್ಲಿಕ್ ಮಾಡಿದ ಕೂಡಲೇ ಫೋನ್ ಹ್ಯಾಕ್ ಆಗಿದ್ದು, ವಂಚಕರು ಅವರ ವಾಟ್ಸಾಪ್ ಖಾತೆಗೆ ಪ್ರವೇಶ ಪಡೆದಿದ್ದಾರೆ.

ಅದಾದ ಸ್ವಲ್ಪ ಸಮಯದ ನಂತರ, ಪ್ರಿಯಾಂಕಾ ಅವರ ಮೊಬೈಲ್‌ನಲ್ಲಿ ಸೇವ್ ಆಗಿದ್ದ ನಂಬರ್‌ಗಳಿಗೆ ವಾಟ್ಸಾಪ್ ಮೂಲಕ ತುರ್ತಾಗಿ 55,000 ರೂ.ಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಸಂದೇಶ ಕಳುಹಿಸಿದ್ದಾರೆ. ಇದನ್ನು ನಂಬಿದ ದಂಪತಿ ಮಗ ಸೇರಿದಂತೆ ಕೆಲವು ಪರಿಚಯಸ್ಥರು ಸಂದೇಶಗಳಲ್ಲಿ ಉಲ್ಲೇಖಿಸಲಾದ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.

ಅವರಲ್ಲಿ ಕೆಲವರು ಪ್ರಿಯಾಂಕಾ ಅವರಿಗೆ ಕರೆ ಮಾಡಿ ಅದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಅವರ ಕರೆಗಳು ಹಠಾತ್ತನೆ ಕಡಿತಗೊಂಡಿವೆ. ಆಗ ಅನುಮಾನ ವ್ಯಕ್ತವಾಗಿದೆ. ಅಲ್ಪಾವಧಿಯಲ್ಲಿಯೇ, ವಂಚಕರು ಸುಮಾರು 1.5 ಲಕ್ಷ ರೂ.ಗಳನ್ನು ದೋಚುವಲ್ಲಿ ಯಶಸ್ವಿಯಾಗಿದ್ದಾರೆ.

ಏನೋ ತಪ್ಪಾಗಿದೆ ಎಂದು ಅರಿತುಕೊಂಡ ಪ್ರಿಯಾಂಕಾ, ತಕ್ಷಣವೇ ತನ್ನ ಪತಿ ಮತ್ತು ಅವರ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಆದರೆ, ಆ ವೇಳೆಗಾಗಲೇ ಎರಡೂ ಫೋನ್‌ಗಳು ಹ್ಯಾಕ್ ಆಗಿದ್ದವು. ನಂತರ ದಂಪತಿ ಸದಾಶಿವನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಪೊಲೀಸರು ಕೇಂದ್ರ ವಿಭಾಗದ ಸೈಬರ್ ಅಪರಾಧ ಘಟಕದೊಂದಿಗೆ ಸಂಘಟಿತ ತನಿಖೆಯನ್ನು ಪ್ರಾರಂಭಿಸಿ, ಆರೋಪಿಯು ಬಿಹಾರ ಮೂಲದವನು ಎಂಬುದನ್ನು ಪತ್ತೆಹಚ್ಚಿದ್ದಾರೆ.

ತನಿಖೆಯಲ್ಲಿ ಹ್ಯಾಕರ್‌ಗಳು ಸೈಬರ್ ವಂಚನೆಗಳಿಗೆ ಕುಖ್ಯಾತಿ ಪಡೆದ ದಶರಥಪುರ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಅಲ್ಲಿ 20 ರಿಂದ 25 ವರ್ಷ ವಯಸ್ಸಿನ ಡಜನ್‌ಗಟ್ಟಲೆ ಯುವಕರು ಆನ್‌ಲೈನ್ ವಂಚನೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.

ಆ ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳು, ದೇಶದಾದ್ಯಂತ ಇದೇ ರೀತಿಯ ಅಪರಾಧಗಳಲ್ಲಿ ಗ್ರಾಮದ ಸುಮಾರು 150 ಯುವಕರು ಸಕ್ರಿಯವಾಗಿ ಭಾಗಿಯಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ತಾಂತ್ರಿಕ ಪುರಾವೆಗಳು ಮತ್ತು ಕಣ್ಗಾವಲು ಮಾಹಿತಿ ಆಧಾರದ ಮೇಲೆ, ತಂಡವು ವಿಕಾಸ್ ಕುಮಾರ್ ಅವರನ್ನು ಬಂಧಿಸಿ, ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದೆ. ಆರೋಪಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ಸೈಬರ್ ವಂಚನೆಯ ಹಿಂದಿನ ಅವರ ಸಹಚರರು ಮತ್ತು ಅವರ ಜಾಲವನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

ಮಹಾ ಅಚ್ಚರಿ: ಶರದ್ ಪವಾರ್ ಪುತ್ರಿ ಸುಪ್ರಿಯ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್!

ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್ಕೆ: ಕೇರಳ ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ, ಪುನರ್ ಪರಿಶೀಲನೆಗೆ ಒತ್ತಾಯ

'ರಾಜಕೀಯ ದ್ವೇಷ, ಪೊಲೀಸರ ವೈಫಲ್ಯ' ಬಳ್ಳಾರಿ ಹಿಂಸಾಚಾರ ಘಟನೆಗೆ ಕಾರಣ: ಕಾಂಗ್ರೆಸ್ ಸಮಿತಿ

SCROLL FOR NEXT