ಬೆಂಗಳೂರು: ಬಿಜೆಪಿಯ ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ಮಂಗಳವಾರ ನಗರದ ಭಾಷ್ಯಂ ವೃತ್ತದಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸಿದರು.
ಬೆಂಗಳೂರು ಸಂಚಾರ ಪೊಲೀಸರ ಆಹ್ವಾನದ ಮೇರೆಗೆ ಸುರೇಶ್ ಕುಮಾರ್ ಅವರು ಇಂದು ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದರು.
ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸಿರುವುದು ಒಂದು "ಉತ್ತಮ" ಅನುಭವ ಎಂದ ಸುರೇಶ್ ಕುಮಾರ್ ಅವರು, ಪ್ರತಿ ಸೋಮವಾರ ಒಂದು ಗಂಟೆ ಸಂಚಾರಿ ಪೊಲೀಸರ ಕಾರ್ಯ ನಿರ್ವಹಣೆಗೆ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ನಿಜಕ್ಕೂ ಸಂಚಾರಿ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಏನೆಲ್ಲಾ ಸಮಸ್ಯೆಗಳಿವೆ ಎಂಬುವುದು ಇಂದು ನನ್ನ ಅನುಭವಕ್ಕೆ ಬಂದಿದೆ ಎಂದರು.
"ಒಂದು ದಿನ ಸಂಚಾರಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುವ ಮೂಲಕ ನಾನು ಅಪಾರ ಅನುಭವವನ್ನು ಪಡೆದುಕೊಂಡೆ ಮತ್ತು ಈ ಕೆಲಸವನ್ನು ನಾನು ಆನಂದಿಸಿದೆ. ಬೆಂಗಳೂರು ಸಂಚಾರಿ ಪೊಲೀಸರ ಈ ಉಪಕ್ರಮವು ನಿಜವಾಗಿಯೂ ಸ್ವಾಗತಾರ್ಹ" ಎಂದು ಸುರೇಶ್ ಕುಮಾರ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅವರು ಟ್ರಾಫಿಕ್ ಪೊಲೀಸ್ ಜಾಕೆಟ್ ಧರಿಸಿ ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಕೆಲಸ ಮಾಡುತ್ತಿರುವುದು, ಸಂಚಾರವನ್ನು ನಿರ್ವಹಿಸುವುದು, ಅವರೊಂದಿಗೆ ಸಂವಹನ ನಡೆಸುವುದು, ಸಿಗ್ನಲ್ ಅನ್ನು ನಿರ್ವಹಿಸುವುದು ಮತ್ತು ಜಂಕ್ಷನ್ನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸಾರ್ವಜನಿಕರನ್ನು ಪ್ರಶ್ನಿಸುವುದನ್ನು ಅವರು ಹಂಚಿಕೊಂಡ ವಿಡಿಯೋದಲ್ಲಿ ನೋಡಬಹುದು.
"ಇಂದು ಒಂದು ರೀತಿಯಲ್ಲಿ ನನಗೆ ಹಬ್ಬದ ವಾತಾವರಣ. ನಾವು ವಿವಿಧ ಹಬ್ಬಗಳು ಮತ್ತು ಕಾರ್ಯಕ್ರಮಗಳನ್ನು ಆಚರಿಸುತ್ತೇವೆ ಮತ್ತು ಭಾಗವಹಿಸುತ್ತೇವೆ. ಆದರೆ ಸಂಚಾರ ಪೊಲೀಸ್ ಸಿಬ್ಬಂದಿಯಾಗಿ ನಾನು ಪಡೆದ ಅನುಭವ ವಿಶಿಷ್ಟವಾಗಿದೆ. ಏಕೆಂದರೆ ಪ್ರಯಾಣಿಕರು ಸಂಚಾರ ನಿಯಮಗಳನ್ನು ಹೇಗೆ ಅನುಸರಿಸುತ್ತಾರೆ ಅಥವಾ ಪ್ರತಿಕ್ರಿಯಿಸುತ್ತಾರೆ ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾನು ವೈಯಕ್ತಿಕವಾಗಿ ತಿಳಿದುಕೊಂಡಿದ್ದೇನೆ" ಎಂದು ಸುರೇಶ್ ಕುಮಾರ್ ಅವರು ವಿಡಿಯೋ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವರು "ಒಂದು ದಿನದ ಸಂಚಾರಿ ಪೊಲೀಸ್"ನ ಭಾಗವಾಗಿ ಸಂಚಾರಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸಿದರು. ಇದು BTP ASTraM ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳುವ ಮೂಲಕ ನಾಗರಿಕರು ಸಂಚಾರಿ ಠಾಣೆಯ ಅಧಿಕಾರಿಗಳು ಅಥವಾ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಅವಕಾಶವನ್ನು ಒದಗಿಸುವ ಬೆಂಗಳೂರು ಸಂಚಾರಿ ಪೊಲೀಸರು ಪ್ರಾರಂಭಿಸಿದ ನವೀನ ಪ್ರಯೋಗವಾಗಿದೆ.