ಬೆಂಗಳೂರು: ದೆಹಲಿ ಪ್ರವಾಸದಿಂದ ಡಿಢೀರನೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ನೇರವಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಪಾರ್ವತಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ, ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯನವರು ಇಂದು ಮುಂಜಾನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು.
ವಿಮಾನ ನಿಲ್ದಾಣದಿಂದ ನೇರವಾಗಿ ಶೇಷಾದ್ರಿಪುರಂನಲ್ಲಿರುವ ಆಸ್ಪತ್ರೆಗೆ ಆಗಮಿಸಿ ಐಸಿಯುನಲ್ಲಿರುವ ಪತ್ನಿಯ ಆರೋಗ್ಯ ವಿಚಾರಿಸಿದರು.ನಂತರ ಅರ್ಧಗಂಟೆಗೂ ಹೆಚ್ಚು ಕಾಲ ವೈದ್ಯರ ಜೊತೆ ಸಿಎಂ ಸಮಲೋಚನೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳು ವಿಚಾರಿಸಿದಾಗ ಸಿಎಂ, ಆರೋಗ್ಯ ಸ್ಥಿರವಾಗಿದ್ದು ಏನು ಸಮಸ್ಯೆ ಇಲ್ಲ. ಶ್ವಾಸಕೋಶ ಸೋಂಕು ಇದೆ, ಈಗ ಸುಧಾರಣೆ ಕಾಣುತ್ತಿದೆ. ಇನ್ನೂ 2-3 ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು.
ಶ್ವಾಸಕೋಶದ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ನಿನ್ನೆ ಸಂಜೆ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.