ಬೆಂಗಳೂರು: ಅನುಮತಿಯಿಲ್ಲದೆ ನಗರದಲ್ಲಿ ರಸ್ತೆ ಅಗೆಯುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಕತ್ತರಿಸುವಿಕೆಗೆ ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನುಸಾರ ಏಕ ಗವಾಕ್ಷಿ ಪದ್ಧತಿಯಲ್ಲಿ ಅನುಮತಿ ನೀಡಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಆಸ್ತಿ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಕಿ ಇರುವ ತೆರಿಗೆ ಬಾಕಿಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಿ. ತೆರಿಗೆ ಪಾವತಿಸದೆ ವಂಚಿಸುವವರಿಗೆ ನೋಟಿಸ್ ನೀಡಿ, ನೋಟಿಸ್'ಗೂ ಪ್ರತಿಕ್ರಿಯಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಖಾತಾ ಪರಿವರ್ತನೆ ಕುರಿತು ಮಾತನಾಡಿ, ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಬಂದಿರುವ ಅರ್ಜಿಗಳನ್ನು ಪಾಲಿಕೆವಾರು ಪರಿಶೀಲಿಸಿ, ನಿಯಮಾನುಸಾರ ಇತ್ಯರ್ಥಪಡಿಸಬೇಕು. ಜೊತೆಗೆ ಇ-ಖಾತಾ ಪಡೆಯಲು ಬಂದಿರುವ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಹೇಳಿದರು.
ವಾಹನ ಪಾರ್ಕಿಂಗ್ಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಿ, ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅನುಪಯುಕ್ತ ವಾಹನಗಳನ್ನು ಟೋಯಿಂಗ್ ಮಾಡಲು ತಕ್ಷಣ ಟೆಂಡರ್ ಕರೆದು ಯಂತ್ರಗಳನ್ನು ಖರೀದಿಸಬೇಕು. ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಟೋಯಿಂಗ್ ಮಾಡುವ ವಾಹನಗಳಿಗಾಗಿ ಪಾಲಿಕೆವಾರು ನಿರ್ದಿಷ್ಟ ಸ್ಥಳ ಗುರುತಿಸಬೇಕು ಎಂದು ತಿಳಿಸಿದರು.
ವೈಟ್-ಟಾಪಿಂಗ್ ಯೋಜನೆಯ ಕುರಿತು ಮಾತನಾಡಿ, 17 ಪ್ಯಾಕೇಜ್ಗಳಲ್ಲಿ 140 ರಸ್ತೆಗಳ (220.68 ಕಿ.ಮೀ) ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 39 (79.08 ಕಿ.ಮೀ) ಕೆಲಸ ಪೂರ್ಣಗೊಂಡಿದೆ. 101 ರಸ್ತೆಗಳಲ್ಲಿ (141.59 ಕಿ.ಮೀ) ವೈಟ್ ಟಾಪಿಂಗ್ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇದೇ ವೇಳೆ ವೈಟ್-ಟಾಪಿಂಗ್ ಕೆಲಸವನ್ನು ನಿರ್ವಹಿಸುವಾಗ ನಗರ ನಿಗಮಗಳು ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನಡುವೆ ಉತ್ತಮ ಸಮನ್ವಯ ಸಾಧಿಸುವಂತೆಯೂ ಕರೆ ನೀಡಿದರು.