ಬೆಂಗಳೂರು: ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರೂ ನಗರದ ಜನತೆ ಮಾತ್ರ ಸ್ಪಂದಿಸುತ್ತಿಲ್ಲ. ಮುಂಜಾನೆ ಅಥವಾ ಕತ್ತಲಾದ ಬಳಿಕ ರಸ್ತೆಬದಿ, ಕಾಲುವೆ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಬಿಸಾಡಿ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಸ ಸುರಿಯುವ ಕಪ್ಪು ಚುಕ್ಕೆ ಪ್ರದೇಶಗಳನ್ನು (ಬ್ಲಾಕ್ಸ್ಪಾಟ್) ನಿರ್ಮೂಲನೆ ಮಾಡಲು ಪಾಲಿಕೆಯು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬ್ಲಾಕ್ಸ್ಪಾಟ್ಗಳಲ್ಲಿ ಕಸ ತೆಗೆದು ರಂಗೋಲಿ ಬಿಡಿಸಿ, ಕಸ ಹಾಕದಂತೆ ಪೌರ ಕಾರ್ಮಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ದೇವರ ಚಿತ್ರಗಳನ್ನೂ ಹಾಕಲಾಗುತ್ತಿದೆ. ಆದರೆ, ರಸ್ತೆಯಲ್ಲಿ ಕಸ ಎಸೆಯುವುದು ಮಾತ್ರ ತಪ್ಪಿಲ್ಲ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಬ್ಲಾಕ್ಸ್ಪಾಟ್ಗಳ ನಿರ್ಮೂಲನೆಗೆ ದಿನದ ಯಾವುದೇ ಸಮಯದಲ್ಲಿ ಕಸ ನೀಡಲು ಜನರಿಗೆ ಅವಕಾಶ ಕಲ್ಪಿಸಲು ಕಿಯೋಸ್ಕ್ಗಳನ್ನು ನಿರ್ಮಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.
ಖಾಲಿ ಸ್ಥಳಗಳಲ್ಲಿ ನಿರ್ಮಾಣವಾಗುತ್ತಿರುವ ಕಸದ ರಾಶಿಗಳನ್ನು ತಡೆಯಲು ಕಸದ ಕಿಯೋಸ್ಕ್ ಗಳ ನಿರ್ಮಿಸಲು ಚಿಂತನೆ ನಡೆಸುತ್ತಿದೆ. ನಗರದಲ್ಲಿ 70ಕ್ಕೂ ಹೆಚ್ಚು ಕಸದ ಕಿಯೋಸ್ಕ್ ಗಳ ನಿರ್ಮಿಸಲು ಪಾಲಿಕೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ 2018 ರಲ್ಲಿ ಮುರುಗೇಶ್ಪಾಳ್ಯದಲ್ಲಿ ನಗರದಲ್ಲಿ ಮೊದಲ ಕಸದ ಕಿಯೋಸ್ಕ್ ಅನ್ನು ಸ್ಥಾಪಿಸಲಾಯಿತು. ಬಳಿಕ ನಗರದ ಇತರ ಭಾಗಗಳಲ್ಲೂ ಸ್ಥಾಪಿಸುವ ಕುರಿತು ಚಿಂತನೆಗಳನ್ನು ನಡೆಸಲಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಇದರಿಂದ ನಗರಲ್ಲಿ ಬ್ಲ್ಯಾಕ್ ಸ್ಪಾಟ್ ಗಳು ಅಣಬೆಗಳಂತೆ ಹೆಚ್ಚಾಯಿತು. ಪೌರಕಾರ್ಮಿಕರಿಗೆ ಕಸ ನೀಡಲು ಸಾಧ್ಯವಾಗದಿದ್ದಾಗ ಜನರು ಪ್ಲಾಸ್ಟಿಕ್ ಚೀಲದಲ್ಲಿ ಕಸ ತುಂಬಿಸಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದೀಗ ಕಿಯೋಸ್ಕ್ ಗಳ ಸ್ಥಾಪನೆ ಕುರಿತು ಮತ್ತೆ ಚಿಂತನೆ ನಡೆಸಲಾಗುತ್ತಿದ್ದು, ಕಸ ಸಂಗ್ರಹದ ಆಟೋಗಳು ಹೋಗಲು ಸಾಧ್ಯವಾಗದ ಸ್ಥಳಗಳು, ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಇವುಗಳನ್ನು ಸ್ಥಾಪಿಸಲಾಗುತ್ತದೆ ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಿಇಒ ಕರೀ ಗೌಡ ಅವರು ಹೇಳಿದ್ದಾರೆ.
ಕಿಯೋಸ್ಕ್ ಗಳ ಸ್ಥಾಪನೆ ಕೆಲಸಕ್ಕೆ ಎರಡು ವರ್ಷಗಳ ಹಿಂದೆಯೇ ಆದೇಶ ನೀಡಲಾಗಿದೆ. ಆದರೆ, ಇನ್ನೂ ಸ್ಥಾಪಿಸಲಾಗಿಲ್ಲ. ಇದೀಗ ವಿವೇಚನಾರಹಿತ ತ್ಯಾಜ್ಯ ವಿಲೇವಾರಿಯನ್ನು ಕೊನೆಗೊಳಿಸಲು 5 ಪಾಲಿಕೆ ವ್ಯಾಪ್ತಿಯಲ್ಲಿ ಕಿಯೋಸ್ಕ್ಗಳ ಸ್ಥಾಪಿಸಲು ಸ್ಥಳಗಳು ಗುರ್ತಿಸುವಂತೆ ಅಧಿಕಾರಿಗಳು ಮತ್ತು ಕಸ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಈ ಕಿಯೋಸ್ಕ್ಗಳನ್ನು ಮೂರು ತಿಂಗಳಲ್ಲಿ ಸ್ಥಾಪಿಸಲಾಗುವುದು. ಪೌರ ಕಾರ್ಮಿಕರು ದಿನವಿಡೀ ಎರಡು ಪಾಳಿಗಳಲ್ಲಿ ವಿಂಗಡಿಸಲಾದ ತ್ಯಾಜ್ಯವನ್ನು ಸಂಗ್ರಹಿಸಿ ಕಿಯೋಸ್ಕ್ಗಳನ್ನು ನಿರ್ವಹಿಸುತ್ತಾರೆ. ರಾತ್ರಿ ವೇಳೆ ಮುಚ್ಚಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.