ಬೆಂಗಳೂರು: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳ ಸಾವು ಸಂಭವಿಸಿದ ವರದಿಗಳ ನಂತರ, ರಾಜ್ಯ ಸರ್ಕಾರ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಿರಪ್ಗಳನ್ನು ಶಿಫಾರಸು ಮಾಡದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಲಹೆ ನೀಡಿದೆ.
'ಮಕ್ಕಳಿಗೆ ಕೆಮ್ಮಿನ ಸಿರಪ್ಗಳ ತರ್ಕಬದ್ಧ ಬಳಕೆ' ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಇಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು, "2 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ, ಅಂತಹ ಔಷಧಿಗಳನ್ನು ಸಾಮಾನ್ಯವಾಗಿ ತಪ್ಪಿಸಬೇಕು. ಸ್ಪಷ್ಟವಾಗಿ ಸೂಚಿಸದ ಹೊರತು ಮತ್ತು ಸರಿಯಾದ ಕ್ಲಿನಿಕಲ್ ಮೌಲ್ಯಮಾಪನದ ನಂತರವೇ ಸಿರಪ್ ನೀಡಬೇಕು" ಎಂದು ಸೂಚಿಸಲಾಗಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 14 ಮಕ್ಕಳ ಸಾವಿನ ನಂತರ ಕೇಂದ್ರ ಸರ್ಕಾರ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಿರಪ್ ನೀಡಬೇಡಿ ಎಂದು ಕಳೆದ ಶುಕ್ರವಾರ ಸುತ್ತೋಲೆ ಹೊರಡಿಸಿತ್ತು.
"ಹಿರಿಯ ಮಕ್ಕಳಿಗೆ, ಅಗತ್ಯವಿದ್ದರೆ, ಕೆಮ್ಮಿನ ಸಿರಪ್ಗಳನ್ನು ಸಂಪೂರ್ಣ ಕ್ಲಿನಿಕಲ್ ಮೌಲ್ಯಮಾಪನದ ನಂತರ, ಕಡಿಮೆ ಪರಿಣಾಮಕಾರಿ ಪ್ರಮಾಣದಲ್ಲಿ ಮತ್ತು ಕಡಿಮೆ ಅವಧಿಗೆ ಮತ್ತು ನಿಗದಿತ ಪ್ರಮಾಣದಲ್ಲಿ ಮಾತ್ರ ಬಳಸಬೇಕು. ಅಲ್ಲದೆ, ಬಹು-ಔಷಧಿ ಸಂಯೋಜನೆ ತಪ್ಪಿಸಬೇಕು" ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಹೇಳಿದ್ದಾರೆ.
ಇನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ಗಳನ್ನ ಖರೀದಿಸಬಾರದು, ಬಳಸಬಾರದು. ಈ ಹಿಂದೆ ಬಳಸಿದ ಔಷಧಿಗಳನ್ನ ಮರುಬಳಕೆ ಮಾಡಬಾರದು. ಕೆಮ್ಮು ಉಲ್ಬಣಗೊಂಡರೆ ವೈದ್ಯರನ್ನ ಸಂಪರ್ಕಿಸಿ. ಅವಧಿ ಮೀರಿದ ಔಷಧಿಗಳನ್ನ ನೋಡಿ ಬಳಸಬೇಕು. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ ವಾಂತಿ ಅಥವಾ ಉಸಿರಾಟ ತೊಂದರೆ ಇದ್ದರೆ ಹತ್ತಿರದ ವೈದ್ಯರನ್ನ ಸಂಪರ್ಕಿಸಿ. ಔಷಧ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.